ಶನಿವಾರ, ಸೆಪ್ಟೆಂಬರ್ 15, 2012

ಗದ್ದಲಕ್ಕೆ ನನ್ನ ಛೀಮಾರಿ

ಗದ್ದಲಕ್ಕೆ ನನ್ನ ಛೀಮಾರಿ
ಏಕನಾದದಿ ಹೊರಡುವ ಸೊಳ್ಳೆ ಸಂಗೀತವೂ ಆಹ್ಲಾದಕಾರಿ

ಎಂದು ಸಾಯುವೆನೋ ತಿಳಿಯದು ಎಂದು
ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು
ಅಂಚನ್ನು ಎದೆತಂಕ ಎಳೆದು ತಿಂದುಬಿಡುವ ಕಾತರಕೆ
ಹೊಟ್ಟೆಯ ಹಸಿವು ಸಾಕಾಗುವುದಿಲ್ಲ.

ಇದ್ದ ಎಣ್ಣೆಯನ್ನೆಲ್ಲ ಭಾವದೀಪ್ತಿಯಲಿ ಸುರುವಿ
ಬೆಳಕನು ಹೊದ್ದು ಗಡದ್ದು ನಿದ್ದೆ
ಬೆಳಿಗ್ಗೆ ಎದ್ದಾಗ ಸುತ್ತೆಲ್ಲ ಕತ್ತಲು.

ಗದ್ದಲಕ್ಕೆ ನನ್ನ ಛೀಮಾರಿ.

ನಿರ್ದಯ ದೈವದ ಎದುರು ಮುಗಿದ ಕೈಗಳು
ಇರುವೆಗಳು ಕಚ್ಚಿ ಸಕ್ಕರೆ ಪೊಟ್ಟಣ ಖಾಲಿ
ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೇ ಜಾರಿ
ಖಾಲಿ ಪುಟದ ತುಂಬೆಲ್ಲಾ ರಾಡಿ

ಅತಿರಥ ಮಹಾರಥ ಭಗೀರಥ ಪ್ರಯತ್ನ
ಆಕಾಶಕ್ಕೆ ಏರಿದ ಮಣ್ಣಿನ ಪರ್ವತ
ಮೂಲೆಯಲ್ಲಿ ಇರುವೆಗಳ ಮುದ್ದಿನಾಟ
ಕಣ್ಣಿಗೆ ಕಾಣದೆ ವಿಜಯ ದುಂದುಭಿ ಝೇಂಕಾರ

ಗಡಚಿಕ್ಕುವ ಕಾಂಕ್ರೀಟು ಕಾಡುಗಳ ಮಧ್ಯೆ
ತೊನೆದಾಡುವ ಮರಗಳೂ ಚೀರಾಡುತ್ತವೆ
ಸೌಂದರ್ಯ ಧಗಧಗಿಸಿ ಕಣ್ಣ ನೋಯಿಸುತ್ತದೆ
ಕೋಗಿಲೆಯ ಸವಿಗಾನ ಆರ್ತನಾದವೆನಿಸುತ್ತದೆ

ಗದ್ದಲಕ್ಕೆ ನನ್ನ ಛೀಮಾರಿ.

ಸಂಬಂಧಗಳ ನಾತ ನೆತ್ತಿಗೇರಿ
ಪ್ರೇಮಕ್ಕೂ ಕಾಮಕ್ಕೂ ರಾತ್ರಿಯಿಡಿ ಸೆಣಸಾಟ
ಸ್ನೇಹ ಸ್ವಾರ್ಥ ನಂಬಿಕೆಗಳ ತಿಣುಕಾಟ
ಕಣ್ಣೀರಿಗೂ ಖೊಳ್ಳನಗೆಗೂ ಕಣ್ಣುಮುಚ್ಚಾಲೆಯಾಟ
ಹಡ್ಡುವ ಪ್ರತಿ ಖೆಡ್ಡದಲಿ ನಿಧಿಯ ಹುಡುಕಾಟ

ಗದ್ದಲಕ್ಕೆ ನನ್ನ ಛೀಮಾರಿ.

ಶನಿವಾರ, ಸೆಪ್ಟೆಂಬರ್ 8, 2012

ಮಳೆ ಬರಲೇ ಇಲ್ಲ

ನಡುದಾರಿಯಲಿ ಗುಂಡಿ ತೋಡಿ
ಮಳೆಗೆ ಗೊಳೆಯಾಗುವ ನೀರು ನನದೆಂದು
ಕಾದು ಕೂತಿರುವೆ
ಟ್ರಕ್ಕು, ಲಾರಿ, ದೆವ್ವದ ಮೋಟಾರುಗಳ ತಂದು
ನುಣ್ಣನೆ ಸಿಮೆಂಟಿನ ರೋಡು ಹಾಸಿದರು

ಮಳೆ ಬರಲೇ ಇಲ್ಲ

ಹಸಿದ ಹೊಟ್ಟೆಯ ಒಳಗೆ ಬರದು ಶಂಖನಾದ
ತುಂಬಿದ ಹೊಟ್ಟೆಯಲಿ ತಿಂಗಳುಗಟ್ಟಲೆ
ಕಷ್ಟ ನೋವುಗಳ ತರಬೇತಿ ಪಡೆದವರು
ಮಾತ್ರ ಊದಬಹುದು ಕದನಕಹಳೆ

ಮದುವೆಯಾಗದಿರುವುದು ಸರಿಯಾದ ನಿರ್ಧಾರ
ನಾವೆಲ್ಲಾ ನಿರ್ಧಾರ ಮಾಡಲಾಗದವರು
ಕಹಿಯುಪ್ಪು, ಹುಳಿದಾರ ಹೃದಯ ಬಾಣಲೆಯಲಿ ಕುದಿದು
ಪುಪ್ಪುಸಕ್ಕೆ ಬರೀ ಬೆವರಿನ ವಾಸನೆ

ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆ
ನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ
ಕಾವೆಲ್ಲ ಖಾಲಿಯಾಗಿ ಎದೆಯ ನೀಲಿಯಲ್ಲಿ
ಚಂದ್ರನಿಗೆ ಹಸಿವಾಗಿ ನಕ್ಷತ್ರಗಳೆಲ್ಲ ಮಾಯ.

ಮಂಗಳವಾರ, ಸೆಪ್ಟೆಂಬರ್ 4, 2012

ಒಂದೆರಡು ಚುಟುಕು


೧.
ನೀನೋ ಹಾರಾಡುವ ಪತಂಗ
ನಾನು ಬರಿ ಸೂತ್ರ;
ಏರುವೆ ನಿನ್ನೊಡನೆ ಆಗಸದೆತ್ತರ
ಬಿಚ್ಚಿಕೊಂಡರೆ ನಿನ್ನ ಬಂಧ
ನನಗೆ ನೆಲವೊಂದೆ ಹತ್ತಿರ..
೨.
ನೆಲಕೆ ನೆಲೆ ಇಲ್ಲವೋ ಕಂದ
ಅದು ಎಳೆದತ್ತ ಅಲೆದಾಡುವ ಚಂಡ
ಆಗಸಕೆ ಅರ್ಥವಿಲ್ಲವೋ ತಮ್ಮ
ಅದು ಕೊನೆಯಿಲ್ಲದ ಭಂಡ..

ಬುಧವಾರ, ಆಗಸ್ಟ್ 15, 2012

ಯಾರ ಸ್ವಾತಂತ್ರ್ಯ



ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ವಿಚಿತ್ರವಾದ ತಳಮಳ ಮನಸ್ಸನ್ನು ಆವರಿಸಿದೆ.  ಇಡೀ ಭಾರತದ ಇಂದಿನ ಪರಿಸ್ಥಿತಿಯನ್ನು ಒಂದು ಬಾರಿ ನೋಡಿದಾಗ ನಾವೆಲ್ಲಿ ಸಾಗಿದ್ದೇವೆ ಎಂಬುದು ತಿಳಿಯದೇ ಕಂಗಾಲಾಗುತ್ತದೆ ಮನಸು.  ರಿಮೋಟ್ ಕಂಟ್ರೋಲಿನಂತೆ ಮಾತನಾಡದೇ ಯಾರದೋ ಬಯಕೆಯನ್ನು ಈಡೇರಿಸುತ್ತ, ತಾನು ಅದಕ್ಕೆಲ್ಲ ಹೊಣೆಯೇ ಅಲ್ಲ ಎಂಬಂತೆ ಆಳ್ವಿಕೆ ನಡೆಸುತ್ತಿರುವ ನಮ್ಮ ದೇಶದ ಪ್ರಧಾನಮಂತ್ರಿ ಒಂದೆಡೆಯಾದರೆ, ರಾಜ್ಯದಲ್ಲಿ ಯಾರದೋ ಪಗಡೆಯಾಟದ ದಾಳವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ.  ಅರಾಜಕತೆ ಎನ್ನುವುದೇ ಅರ್ಥ ಕಳೆದುಕೊಂಡಿದೆ.
ಕುತಂತ್ರಿಗಳು, ರೌಡಿಗಳು, ಮೂಲಭೂತವಾದಿಗಳು, ಹುಚ್ಚರು ಈ ದೇಶವನ್ನು ತಮಗೆ ಬೇಕಾದ ಹಾಗೆ ನಡೆಸುತ್ತಿದ್ದಾರೆ ಎನಿಸುತ್ತದೆ.  ಎಲ್ಲರಿಗೂ ಬರೀ ಹಣದ ವ್ಯಾಮೋಹವೇ ಹೆಚ್ಚಿದಂತೆ ಎನಿಸುತ್ತದೆ.  ಯಾರಿಗೂ ತಮ್ಮ ಹೆಸರನ್ನು ಉಳಿಸಿಕೊಳ್ಳುವ, ದೇಶದ ಸಾಮಾನ್ಯ ಜನರ ಬದುಕಿನ ಬಗೆಗೆ ಚಿಂತೆಯೇ ಇಲ್ಲ ಎನಿಸುತ್ತದೆ.  ಹೆಸರು ಕೆಡಿಸಿಕೊಂಡಾದರೂ ಸರಿ ಹಣ ಗಳಿಸಿಕೊಳ್ಳುವ ಎಲ್ಲ ಒಳದಾರಿಗಳ ಉಪಯೋಗಿಸುವ ಇಂದಿನ ನಾಯಕರ ಮನಃಸ್ಥಿತಿಯನ್ನು ಕಂಡು ಇಂದು ನಮ್ಮನ್ನು ಸರಿಯಾದ ದಾರಿಗೆ ಕೊಂಡುಕೊಂಡು ಹೋಗುವವರು ಯಾರೂ ಇರುವುದರ ಚಿಹ್ನೆಯೇ ಕಾಣುತ್ತಿಲ್ಲ.
ಯಾರಿಗೂ ನಮ್ಮ ದೇಶದ ಮುಂದಿರುವ ಸವಾಲುಗಳು ಕಾಣುತ್ತಲೇ ಇಲ್ಲ.  ಒಂದೆಡೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಜನಗಳಲ್ಲಿ ಹಣ ಗಳಿಸುವ ಅವಸರವಾದರೆ, ಇನ್ನೊಂದೆಡೆ ಜಾತಿ ಮತಗಳ ಹೆಸರಿನಲ್ಲಿ ಮನುಷ್ಯತ್ವವನ್ನು ಕೊಲ್ಲುವ ಸನ್ನಾಹಗಳು, ಮಗದೊಂದೆಡೆ ಇಂಥ ಸಂದರ್ಭದಲ್ಲೂ ಕೊರಳೆತ್ತಲು ಸಾಧ್ಯವಾಗದ ಜನಸಾಮಾನ್ಯರ ಅನಿವಾರ್ಯಗಳು.  ಇವತ್ತು ಮತ್ತೆ ಎಲ್ಲರೂ ಶಾಲೆ, ಕಾಲೇಜು, ತಮ್ಮ ದಿನನಿತ್ಯದ ನೌಕರಿ, ವ್ಯಾಪಾರಗಳ ಬಿಟ್ಟು ಬೀದಿಗಿಳಿದು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕಾಗಿದೆಯೇ ಎಂಬ ಪ್ರಶ್ನೆ ತಲೆದೋರುತ್ತಿದೆ.  ನಮ್ಮನ್ನು ಆಳುವವರಿಗೆ ನಾಚಿಕೆ, ತಮ್ಮ ಜವಾಬ್ದಾರಿಗಳ ಅರಿವು, ತಮ್ಮನ್ನು ಆರಿಸಿತಂದ, ಕುರ್ಚಿಯ ಮೇಲೆ ಕುಳ್ಳಿರಿಸಿದ ಜನಗಳ ಬಗೆಗೆ ಕರ್ತವ್ಯ ನಿಷ್ಠತೆ ಇಲ್ಲವೇ ಎಂದು ನಿರಾಶೆಯಾಗುತ್ತದೆ.
ಒಂದು ದಿನ ಹುಟ್ಟುಹಬ್ಬ ಆಚರಿಸುತ್ತಿರುವ ಯುವಕರ ಮೇಲೆ ಯಾರು ಬೇಕಾದರೂ ಬಂದು ಎಳೆದಾಡಿ ಹೊಡೆದು ವಿಡಿಯೋ ತೆಗೆದು ಸುದ್ದಿವಾಹಿನಿಗಳಲ್ಲಿ ಬಿತ್ತರಿಸಿದರೂ ಕೇಳುವವರಿಲ್ಲ ಎಂಬ ಸುದ್ದಿ ಬಂದರೆ, ಮತ್ತೊಂದು ದಿನ ದೊಣ್ಣೆ, ಮಚ್ಚು, ಸರಳುಗಳ ತೆಗೆದುಕೊಂಡು ಹೊರಟ ಗುಂಪೊಂದು ಆರಾಮಾಗಿ ಲೋಕಲ ರೈಲು ಹತ್ತಿ ಇನ್ನೊಂದು ನಿಲ್ದಾಣದಲ್ಲಿ ಇಳಿದು ಅಲ್ಲಿ ಜನರನ್ನು, ಪತ್ರಕರ್ತರನ್ನು, ಪೋಲೀಸರನ್ನು ಥಳಿಸಲು ಕೂಡ ಧೈರ್ಯ ಮಾಡಬಹುದು ಎಂಬ ವಾರ್ತೆ. ಇನ್ನೊಂದು ದಿನ, ಎರಡು ವರ್ಷದ ಹಿಂದೆ ತಾವು ಪ್ರೀತಿಸಿದವರನ್ನು ಮದುವೆ ಮಾಡಿಕೊಂಡು, ದುಡಿದು, ತಮ್ಮ ಏಳು ವರ್ಷದ ಮಗಳ ಜೊತೆಗೆ ಸುಖವಾಗಿ ಬಾಳುತ್ತಿದ್ದವರನ್ನು ಜಾತಿ ಬಿಟ್ಟು ಮದುವೆಯಾದ ಕಾರಣಕ್ಕೆ ನಡುರಾತ್ರಿ ಕಡಿದು ಸುಟ್ಟುಹಾಕಲು ಸಹ ಹೇಸಬೇಕಾದ ಅಗತ್ಯವಿಲ್ಲ ಎಂದು ತಿಳಿದುಕೊಳ್ಳುವ ಮನುಷ್ಯತ್ವ ಮರೆತ ಬಂಧುಗಳು.  ಇಂಥ ಸುದ್ದಿಗಳನ್ನೆಲ್ಲ ದಿನವೂ ನೋಡುತ್ತ ತಮ್ಮ ಬದುಕಿನ ಪ್ರತಿಕ್ಷಣವನ್ನು ಭಯದಲ್ಲೇ ಕಳೆಯಬೇಕಾದ ಅನಿವಾರ್ಯತೆ ಈ ಬೃಹತ್ ದೇಶದ ನೂರಿಪ್ಪತ್ತು ಕೋಟಿ ಜನತೆಗೆ.
ಸಂವಿಧಾನ, ಸರಕಾರ ಮಾಡಿರುವ ಕಾನೂನುಗಳನ್ನು ಯಾರಾದರೂ ಸುಲಭವಾಗಿ ಮುರಿದು ಐಷಾರಾಮವಾಗಿ ಅಲೆದಾಡಬಹುದು ಆದರೆ ರೌಡಿಗಳ, ಧರ್ಮರಕ್ಷಣೆಯ ಮುಖವಾಡದವರ, ಉಗ್ರವಾದಿಗಳ ಕಾನೂನುಗಳನ್ನು ಯಾರೂ ಮುರಿಯುವಂತಿಲ್ಲ.  ಇವರಿಗೆ ಸರಕಾರದ ಕಾನೂನು ಏನೂ ಮಾಡಲಾಗದು. ಇದೆಲ್ಲ ತಮಗೆ ಸಂಬಂಧವೇ ಇಲ್ಲವೆಂಬಂತೆ ಅಮಾಯಕ ಜನರನ್ನು ದೋಚಿ ತಮ್ಮ ಖಜಾನೆ ತುಂಬಿಸಿಕೊಳ್ಳುವ ಕಾಯಕದಲ್ಲಿ ತಲ್ಲೀನರಾಗಿರುವ ನಮ್ಮ ಧುರೀಣರು.  ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಸಂದರ್ಶನ, ವಾಗ್ವಾದ ಮಾಡುತ್ತ ಕಾಲ ಕಳೆಯುತ್ತಿರುವ ಬುಧ್ಧಿಜೀವಿಗಳು, ಸಮಾಜ ಸುಧಾರಕರು.
ಒಂದು ಬಾರಿ ಆರಿಸಿ ಕಳಿಸಿದರೆ ಐದು ವರ್ಷಗಳವರೆಗೆ ಏನೂ ಮಾಡಲಾಗದೇ ಸರಕಾರವನ್ನು ಬೈಯ್ಯುತ್ತ ಕೈಹಿಸುಕಿಕೊಳ್ಳುತ್ತ ಕುಳಿತುಕೊಳ್ಳುವುದನ್ನು ಬಿಟ್ಟರೆ ಬೇರೆ ದಾರಿ ಕಾಣದ ಜನಸಾಮಾನ್ಯರು ಅದನ್ನು ತಮ್ಮ ದೈವವೆಂದುಕೊಳ್ಳದೇ ಬೇರೆ ದಾರಿಯೇ ಇಲ್ಲದಿರುವುದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ಸೋಲು.  ಹೋಗಲಿ ಐದು ವರ್ಷಗಳಾದ ಮೇಲೆ ಒಳ್ಳೆಯವರನ್ನು ಆರಿಸಿ ಕಳಿಸಬೇಕೆಂದು ದೃಢನಿರ್ಧಾರ ಮಾಡಿದರೂ ಒಳ್ಳೆಯವರೆಲ್ಲಿ ಎಂದು ಹುಡುಕಬೇಕಾದ ದುರದೃಷ್ಟ.  ಮತ್ತೇನು ಮಾಡಬೇಕು.  ತಮ್ಮವರಿಂದಲೇ ತಮ್ಮ ದೇಶವನ್ನು ಕಾಪಾಡಲು ಮತ್ತೆ ಈ ಭಾರತದ ಪ್ರಜೆ ಸಂಗ್ರಾಮಕ್ಕೆ ಇಳಿಯಬೇಕೇ? ಯಾರೊಡನೆ ಹೋರಾಡಬೇಕು? ದಾರಿ ತೋರುವವರು ಯಾರು? ಇಡೀ ದೇಶಕ್ಕೆ ಮಂಕು ಕವಿದಿದೆ.
65 ವರ್ಷಗಳ ಹಿಂದಿದ್ದ ಸವಾಲುಗಳು ಇಂದಿಗೂ ಹಾಗೇ ಇವೆ.  ಎಷ್ಟು ಸುತ್ತುಹಾಕಿದರೂ ಮತ್ತೆ ಅದೇ ಸ್ಥಳಕ್ಕೆ ಬಂದು ನಿಲ್ಲುವ ವಿಷವರ್ತುಲದಲ್ಲಿ ಸಿಲುಕಿಕೊಂಡಿದ್ದೇವೆ.  ಅದೇ ಬಡತನ, ನಿರುದ್ಯೋಗ, ಉಗ್ರಗಾಮಿಗಳ ಕಾಟ, ಧರ್ಮಗಳ ಸೆಣಸಾಟ, ನಿರಕ್ಷರತೆ, ಅನಾರೋಗ್ಯ, ಬೆಲೆ ಏರಿಕೆ, ಅರಾಜಕತೆ ಅವೇ ಸಂದಿಗ್ಧಗಳು ಇಂದಿಗೂ ಕಾಡುತ್ತಿವೆ.  ಬದಲಿಗೆ ಇವೆಲ್ಲದರ ಜೊತೆಗೆ ಇನ್ನೂ ಕೆಲವು ತೊಂದರೆಗಳು ಹೊಸದಾಗಿ ಹುಟ್ಟಿಕೊಂಡಿವೆ.  ಅವುಗಳನ್ನು ಬಗೆಹರಿಸುವ ದಾರಿಗಳ ಬರ ಕಂಡುಬರುತ್ತಿದೆ.  ಇನ್ನೂ ನಮ್ಮ ರೈತ ಮಳೆಯ ದಾರಿ ಕಾಯುತ್ತ ಗಗನದತ್ತ ನೋಡುತ್ತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ.  ಬೆವರು ಸುರಿಸಿ ಹಗಲೆಲ್ಲ ದುಡಿದು ರಾತ್ರಿಯ ಊಟಕ್ಕೆ ಇಲ್ಲದೇ ಗಂಜಿ ಕುಡಿಯುವವರ ಸಂಖ್ಯೆ ಏರುತ್ತಲೇ ಇದೆ.
ಇಡೀ ವಾತಾವರಣ ನಿರಾಶಾದಾಯಕವಾಗಿದೆ.  ಎಲ್ಲೆಲ್ಲೂ ಕೈಲಾಗದ ಹೇಡಿತನ ಕಣ್ಣಿಗೆ ರಾಚುತ್ತದೆ.  ನಮ್ಮ ದೇಶ ಎಷ್ಟೆಲ್ಲ ಕ್ಷೇತ್ರಗಳಲ್ಲಿ ಮುಂದುವರೆದಿದೆ ಎಂದು ಎಷ್ಟು ಟಾಂಟಾಂ ಬಾರಿಸಿದರೂ ಇನ್ನೂ ಕೆಳಸ್ತರದವರಿಗೆ ಸ್ವಾತಂತ್ರ್ಯದ ಫಲಗಳು ಮಾತ್ರ ದೊರೆಯುತ್ತಿಲ್ಲ.  ಮಧ್ಯಮವರ್ಗದವರು ಹೆದರಿಕೆಯಲ್ಲಿ ಬಾಳುವಂತಿದೆ.  “ಎಲ್ಲಿಗೆ ಬಂತು, ಯಾರಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ?” ಎಂಬ ಪ್ರಶ್ನೆ ಇಂದಿಗೂ ಪ್ರಸ್ತುತವೆನಿಸುವುದು ಎಂಥ ವಿಪರ್ಯಾಸ.

ಶನಿವಾರ, ಆಗಸ್ಟ್ 4, 2012

ಗುಳೆಹೊರಟವರು


ನಡುಹಗಲಲ್ಲೆ ಗುಳೆ ಹೊರಟವರು ನಾವು
ಸಿಕ್ಕ ದಾರಿಗೆ ಹೆಜ್ಜೆಯೊತ್ತಿ
ತಿರುವು ಮುರುವುಗಳಲಿ
ಕಾಲು ಕಳೆದುಕೊಂಡು
ಹರಿವ ತೊರೆ ನೀರ ಕುಡಿದು
ಹೊರಟವರು
ನಡುಹಗಲಲ್ಲೆ ಗುಳೆ ಹೊರಟವರು ನಾವು.

ಅಫ್ಘನ್ನಿಗರಂತೆ ಹುಲ್ಲು
ರೊಟ್ಟಿಯನ್ನಾದರೂ ತಿನ್ನೋಣ
ಎಂದರಸಿದರೆ ಹುಲ್ಲುಕಡ್ಡಿಯೂ ಇಲ್ಲ,
ಉಸುಕಿನಲ್ಲಿ ತಿಂಗಳ
ಹೊಟ್ಟೆ ಹುಗಿದು ಬಂದವರು.

ಮನೆಗೆ ಮಸಣದ ಬೋರ್ಡು ಹಾಕಿ
ಹೆತ್ತೊಡಲ ಕರುಳುಗಳ ಸುಟ್ಟು
ಸುಡದ ಎಲುವಿಗೆ ಬೆಂಕಿ ಹಚ್ಚಿ
ಆರಿದ ಜಗತ್ತಿನ ದೀಪಗಳ
ಬೆಳಗಿಸುವ ಹುಚ್ಚು ಹಚ್ಚಿಕೊಂಡವರು.

ಯಾವ ಬೆಂಕಿಯಿಂದ ತಪ್ಪಿಸಿಕೊಳಬೇಕೆಂದು
ಕರುಳು, ಹೃದಯ, ರಕ್ತನಾಳಗಳ
ಸುಟ್ಟುಕೊಂಡೆವೋ ಅದೇ ಬೆಂಕಿಯ
ಕೆಂಡಗಳ ಮೇಲೆ ಹೆಜ್ಜೆಯೂರಿ
ಹೊರಬಂದವರು.

ಬಗಲಲ್ಲಿ ಕೈಹಿಡಿದೆಬ್ಬಿಸಿ ನಿಲಿಸಿದರು
ಕೊಳಚೆಯಲಿ ಬೀಳದಂತೆ ಕೈಚಾಚಿದರು
ಹೊಟ್ಟೆಗೆ ಹಿಟ್ಟು, ಜುಟ್ಟಿಗೆ ಮಲ್ಲಿಗೆಯ
ಅಭಯಹಸ್ತ ನೀಡಿದರು
ಮನುಷ್ಯ ಇನ್ನೂ ಜೀವಂತನಿಹನೆಂದು
ನಂಬಿದೆವದಕೆ
ನಡುಹಗಲಲ್ಲೆ ಗುಳೆ ಹೊರಟವರು ನಾವು.

ಮಂಗಳವಾರ, ಜುಲೈ 24, 2012

ಗೆಳೆಯ Venkatesh Prasad ಅವರ "ಸಂಕಲ್ಪ"ದ ಬಗೆಗಿನ ಅನಿಸಿಕೆಗಳು.


ನಿನ್ನೆಯಷ್ಟೇ 'ಸಂಕಲ್ಪ' ಓದಿ ಮುಗಿಸಿದೆ . ತುಂಬಾ ಸೊಗಸಾಗಿತ್ತು , ಅಲ್ಲಲ್ಲಿ ಬರುವ ಉತ್ತರ ಕರ್ನಾಟಕದ ಸಂಭಾಷಣೆಗಳು ಆರಂಭದಲ್ಲಿ ತುಸು ಕಷ್ಟವೆನಿಸಿದರೂ ನಂತರ ಅದೇ ನನ್ನ ಓದಿಸಿಕೊಂಡು ಹೋಯಿತು. ನಾನೂ ಇಲ್ಲಿಯವರೆಗೆ ಬಹಳಷ್ಟು ಅಂತರ್ಜಾತೀಯ ವಿವಾಹಗಳನ್ನು ನನ್ನ ನೆರೆಕರೆಯಲ್ಲಿ ನೋಡಿದ್ದೇನೆ ಮತ್ತು ಕೇಳಿದ್ದೇನೆ ಅವುಗಳಲ್ಲಿ ಬಹುತೇಕವು ಮದುವೆಯ ಮೊದಲೇ ಮುರಿದು ಬಿದ್ದರೆ ಇನ್ನು ಕೆಲವು ಮದುವೆಯ ನಂತರ . ಅಂತಹುದರಲ್ಲಿ ನಮನ ಮತ್ತು ತಮನ್ನಾರ ವಿವಾಹವು ಬಹಳ ವಿಶಿಷ್ಟವಾಗಿ ಕಾಣಿಸಿತು. 
ಮೊದಮೊದಲು ಬರಿಯ ಲವ್ ಸ್ಟೋರಿ ಯ ಪುಸ್ತಕ ಎಂದುಕೊಂಡವನಿಗೆ ಓದುತ್ತ ಓದುತ್ತ ಬಹಳಷ್ಟು ಕುತೂಹಲಕಾರಿ ಅಂಶಗಳು ಕಲಿಯ ಸಿಕ್ಕವು :
>ಕಥೆಯ ಮಧ್ಯದಲ್ಲಿ ಬರುವ 'ಸಾಮ್ರಾಟ' ನಂತೂ ನನಗೆ ಬಹಳಷ್ಟು ಹಿಡಿಸಿದ ಮತ್ತು ಅವನ ಜೊತೆ ಬರುವ ಸುಮಿತ ಹಾಗೂ ಅಭಿಷೇಕರೂ ಕೂಡ. ಕೆಲಸವಾದ ತಕ್ಷಣ ಮರೆತು ಬಿಡುವ ಈ ಕಾಲದಲ್ಲಿ ತಾವು ಪೆಟ್ಟು ತಿಂದರೂ ತಮ್ಮ ಮಿತ್ರನ ಒಳಿತಿಗಾಗಿ ಶ್ರಮ ಪಡುವವರನ್ನು ಕಂಡು ಖುಷಿಯಾಯಿತು.

> ಬರಿಯ ಪ್ರೇಮಿಗಳಿಗೆ ಮಾತ್ರವಲ್ಲ , ಜೀವನದಲ್ಲಿ 'ಸೋತೆವು' ಎಂದು ಕೊಳ್ಳುವ ಎಲ್ಲರೂ ಓದಬೇಕಾದ ಒಂದು ಒಳ್ಳೆಯ ಪುಸ್ತಕ ಇದು.>ನಡು ನಡುವೆ ಉಡುಪಿಯ ಕೆಲ ದೃಶ್ಯಗಳನ್ನ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ಅದಕ್ಕಾಗಿ ಧನ್ಯವಾದಗಳು.!!>ಜೀವನದಲ್ಲಿ ಗೆಳೆಯರ ಮಹತ್ವವನ್ನು ಈ ಪುಸ್ತಕ ತೋರಿಸಿಕೊಡುತ್ತದೆ. 
ಇವಿಷ್ಟು ನನಗನ್ನಿಸಿದ ಕೆಲ ಅಂಶಗಳು , ಇಂತಹ ಒಳ್ಳೆಯ ಕೃತಿಗಾಗಿ ಧನ್ಯವಾದಗಳು , ನಿಮ್ಮಿಂದ ಇನ್ನಷ್ಟು ಕೃತಿಗಳು ಹೊರಬರಲಿ , ಕನ್ನಡದ ಶ್ರೇಷ್ಠ ಲೇಖಕರ ಸಾಲಲ್ಲಿ ನೀವು ಕೂಡ ಸೇರಿರಿ ಎಂಬುದೇ ನನ್ನ ಹಾರೈಕೆ !!
ಇಂತೀ ನಿಮ್ಮವ,
ವೆಂಕಟೇಶ ಪ್ರಸಾದ [ಉಡುಪಿಯಿಂದ]

ಶನಿವಾರ, ಜುಲೈ 21, 2012

ಸಂಕಲ್ಪದ ಬಗೆಗೆ ಗೆಳೆಯ ಪುಷ್ಪರಾಜ ಚೌಟ ಅವರ ವಿಮರ್ಶೆ..



ಸಂಕಲ್ಪ, ನಾನು ಮತ್ತು ಅದಕ್ಕೊಂದೆರಡು ಮಾತು......
============
ಅವತ್ತು ಭಾನುವಾರ, ಒಂದು "ಸಂಕಲ್ಪ"ವನ್ನು ಮನದೊಳಗಿಟ್ಟುಕೊಂಡು ಕೂತೆ. ಕಾದಂಬರಿಯೊಂದ ಓದಿಮುಗಿಸಿಬಿಡುವುದಾಗಿತ್ತು ಆ ಸಂಕಲ್ಪ.

ಮೂಲತಃ ಕರಾವಳಿಯವನಾದರೂ ಉತ್ತರಕರ್ನಾಟಕದ ನನ್ನ ನಂಟು ಸರಿ ಸುಮಾರು ಎರಡು ಸಾವಿರನೇ ಇಸವಿ ಜನವರಿ ಒಂದರಿಂದ ಮುಂದುವರಿದಿದೆ. ಅಲ್ಲಿ ಇಲ್ಲಿ ಸಿಕ್ಕಲ್ಲೆಲ್ಲ "ಏನ್ರಿ ಸರ್ರ ಆರಾಮದಿರೇನ್" ಎಂದು ಕೇಳುವ ನನ್ನ ಧಾಟಿ "ಎಂಥಾ ಮಾರಾಯ" ಅಂಥಾ ಮಂಗಳೂರು ಕನ್ನಡ ಮಾತನಾಡುವ, ಜೊತೆಗೊಂದಿಷ್ಟು ಬೆಂಗಳೂರಿನ "ಏನ್ ಗುರು ಕಾಫಿ ಆಯ್ತಾ?" ಗಳ ನಡುವೆ ನಾನು ಮರೆತಿಲ್ಲ ಎಂದರೆ ನನಗಿನ್ನೂ ಆ ಗ್ರಾಮ್ಯ ಭಾಷೆಯ ಸೊಗಡಿನ ಪ್ರೀತಿ ಹೋಗಿಲ್ಲ ಎಂಬ ಹೆಮ್ಮೆಯಿದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿನ ಹೊಗೆ ತಿನ್ನುತ್ತಿದ್ದರೂ, ಆಕಸ್ಮಿಕವಾಗಿ ಹುಬ್ಬಳ್ಳಿಯಲ್ಲೇ ಕೂತು ಈ ತುಣುಕನ್ನು ಬರೆಯುವ ಭಾಗ್ಯ ಸಿಕ್ಕಿದೆ ಎಂದಾದರೆ ಬಹುಷಃ ಈ ಗಂಡು ಮೆಟ್ಟಿದ ನಾಡಿನ ನಂಟು ನನ್ನನ್ನು ಬಿಡಲಾರದು ಎಂಬುದು ಮತ್ತೆ ನಾನು ಪ್ರಚುರಪಡಿಸಬೇಕಾಗಿಲ್ಲ. ನಾನಿದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ನಾನು ಕೈಗೆತ್ತಿಕೊಂಡ ಸಂಕಲ್ಪವನ್ನು ನಾನು ಓದುವಾಗ ಆ ಭಾಷೆಯ 'ರಗಡ್' ಪರಿಚಯವಿಲ್ಲವಾದರೂ, ಕಿಂಚಿತ್ ಅರಿವಿರಲೇ ಬೇಕು.

ಸಾಮಾನ್ಯವಾಗಿ ನಾನು ಈ ಲವ್-ಮ್ಯಾರೇಜ್-ಗಳನ್ನು ಇಷ್ಟಪಟ್ಟವನಲ್ಲ!.
ಏನ್ರೀ ಸರ್ರ್ ಅಸಂಬದ್ಧ ಪ್ರಲಾಪವಿದು? ಉತ್ತರಕರ್ನಾಟಕದಿಂದ ನೇರವಾಗಿ ಪ್ರೀತಿ-ಪ್ರೇಮ-ಮದುವೆ ಬಗ್ಗೆ ಹೊರಟ್ಟಿದ್ದೀರಿ ಎನದಿರಿ. ಹೌದು ನಾನು ಹೇಳಹೊರಟಿರುವ ವಿಷಯಕ್ಕೂ ಉತ್ತರಕರ್ನಾಟಕಕ್ಕೂ ಸಂಬಂಧವಿದೆ ಎನ್ನುವುದು ನಿಮಗೆ ತಿಳಿದಿರಬೇಕಾದ ಸತ್ಯ. ಹಾಗಂತ ಈ ಲವ್ ಮ್ಯಾರೇಜ್ ಒಳಗಿನ ಅಂಶಗಳು ಕೇವಲ ಉತ್ತರಕರ್ನಾಟಕಕ್ಕೆ ಸೀಮಿತವಲ್ಲ. ನಾನು ಹೇಳಹೊರಟಿರುವ ಸಂಕಲ್ಪದ ಕತೆಯೊಳಗಿನ ಬಹುತೇಕ 'ಮಂದಿ' ಆ ಕಡೆಯವರು ಎನ್ನುವುದು ನಿಮಗೆ ಗೊತ್ತಿರಲಿ.

ಇನ್ನು ಜಾತಿ ಮತ್ತು ಈ ಪ್ರೀತಿ, ಪ್ರೇಮ. ಒಂದು ಗಂಡು-ಹೆಣ್ಣು ಪ್ರೀತಿಯ ತೆಕ್ಕೆಗೆ ಸಿಕ್ಕಾಗ ಅಲ್ಲಿ ಜಾತಿ ನಗಣ್ಯವಾಗುತ್ತದೆ. ಜಾತಿಯ ಕಂದಕಗಳನ್ನು ಒಂದುಗೂಡಿಸುವ ಬಹುದೊಡ್ಡ ಅಂಟು ಕಂಪನಿಯೆಂದರೆ ಅದು "ಪ್ರೀತಿ" ಅಂಟು!. ಇಲ್ಲಿ ಪ್ರೀತಿ ಎಂದಾಗ ನಮ್ಮ ಹೆಚ್ಚಿನ ಯುವಮನಸುಗಳಲ್ಲಿ ಮೂಡುವ ಭಾವನೆಯೆಂದರೆ ಅದು ಹೆಣ್ಣು-ಗಂಡಿನ ನಡುವಿನ ಆಕರ್ಷಣೆ. ಆದರೆ ಅದಕ್ಕೆ ಮಿಗಿಲಾದ ಒಂದು ಭಾವವಿದೆ ಎನ್ನುವುದನ್ನು ನಾನು ಸ್ವಂತ ಅನುಭವವಿಲ್ಲವಾದರೂ ಈ ಸಂಕಲ್ಪದೊಳಗೆ ಕಂಡಿದ್ದೇನೆ. ಆದರೆ ಜಾತಿ ಎನ್ನುವುದು ದೊಡ್ಡದಾಗಿ ನಿಲ್ಲುವುದು ಆ ಕಟ್ಟುಪಾಡಿಗೆ ಗಂಟುಬಿದ್ದ ಕೆಲವು ಮನಸುಗಳು ಈ ಪ್ರೀತಿ ಎಂಬ ಎರಡಕ್ಷರದೊಳಗಿನಂಟಿಗೆ ತಣ್ಣೀರು ಎರಚಿ ಬಿಡುವ ಪ್ರವೃತ್ತಿಯವರಾದಾಗ ಆ ಪ್ರೀತಿಯೊಳಗೆ ಬೇರುಬಿಟ್ಟ ಜೀವಗಳು ಉಸಿರು ಹಿಡಿದು ಹೋರಾಟ ನಡೆಸಬೇಕಾದ ಪ್ರಮೇಯ ಬರುವುದು ಎಲ್ಲಿ ನೈಜತೆಯ ಪ್ರೇಮವಿದೆಯೋ ಅಲ್ಲಿ ಮಾತ್ರವೇ ಹೊರತು ನಾನು ಈ ಮೊದಲೇ ಹೇಳಿದ ಆಕರ್ಷಣೆಯ ಎರಡು ಘಳಿಗೆಯ ವಾಂಛೆಯಲ್ಲಲ್ಲ. ಈ ನಿಟ್ಟಿನಲ್ಲಿ ನಾನು ಹೇಳಹೊರಟಿರುವ 'ಸಂಕಲ್ಪ'ದಲ್ಲಿನ ಎರಡು ಜೀವಗಳು ಅಲ್ಲಲ್ಲಿ ಜಾತಿಯ ಹೊಗೆಯಲ್ಲಿ ಬೆಂದಂತೆ ಕಂಡರೂ, ಚತುರ ವಿವರಣೆಯಲ್ಲಿ ಅದನ್ನು ಒತ್ತಿಹೇಳುವಲ್ಲಿ ಸಫಲತೆಯಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಜಾತಿ ಧರ್ಮದ ವಿಷಯ ಬಂದಾಗ ಮಾನವಧರ್ಮವನ್ನು ಕಡೆಗಣಿಸಿ ಅನ್ಯಧರ್ಮೀಯ ಎಂದು ಕರೆಸಿಕೊಳ್ಳಲ್ಪಡುವ ಒಂದು ಹೆಣ್ಣನ್ನು ಪ್ರೀತಿಸಿದ ಯುವಕ, ತಾನು ಕೈಗೊಂಡ ಸಂಕಲ್ಪವನ್ನು ನೆರವೇರಿಸಿಯೇ ತೀರುತ್ತೇನೆ ಎಂಬ ಪಣ ಕಂಡುಬಂತಾದರೂ ಎಲ್ಲೋ ಒಂದೆರಡು ಕಡೆ ಅವನ ಮನಸೂ ಕೂಡ ಅವಳ ಜೊತೆ ಬಿರುಕಿನೆಡೆಗೆ ತೆರಳಿದ್ದೂ ಇದೆ. ಈ ಭಾವ ಪ್ರೀತಿಯೊಳಗೆ ಮಾಮೂಲು ಎಂದೆಣಿಸಿಕೊಳ್ಳುವುದಾದರೆ ನನ್ನ ಮನಸಿನಲ್ಲಿ ಕೂಡ ಅಂಥಹ ಈ ವಿಷಯದ ಬಗ್ಗೆ ಅಭ್ಯಂತರ ಹುಟ್ಟುವುದಿಲ್ಲ.

ಹೀಗೆ ಕತೆ ಸಾಗುವುದು ಕೇವಲ 'ಒಂದು ಪ್ರೀತಿಯ ಸುತ್ತ' ಎಂದರೆ ಅದು ನನ್ನ ಶಾಣೇ ತಪ್ಪಾದೀತು. ಅಲ್ಲಿ ಮಮತೆ ಎನ್ನುವ ಬಳ್ಳಿಯ ಅರಳುವಿಕೆಯಿದೆ. ಸ್ನೇಹ ಎನ್ನುವ ಒಂದು ಆವರಣವಿದೆ. ಆ ಆವರಣದೊಳಗೆ ಬೆಲೆ ಕಟ್ಟಲಾಗದ ಅಂಶಗಳನ್ನು ಎತ್ತಿಹಿಡಿಯಲಾಗಿದೆ. ತದ್ವಿರುದ್ಧವಾಗಿ ಸಮಾಜಸೇವೆ ಎನ್ನುವ ಮುಖವಾಡಗಳ ಬಣ್ಣಕಳಚುವ ಕಿರಿಯ ಪ್ರಯತ್ನ ಕೂಡ ಸಂಕಲ್ಪದ ಸರದಾರ ತೋರಿಸಿದ್ದಾರೆ. ಇದಕ್ಕೆಲ್ಲಕಿಂತಲೂ ಮುಖ್ಯವಾಗಿ ಒಂದು ಕಡೆ ಹೆತ್ತವರ ಅಳಲು, ಹೆತ್ತವರ ಮೇಲಿನ ಮಮಕಾರಗಳನ್ನೂ ಸೂಕ್ಷ್ಮವಾಗಿ ಗಮನಿಸಿದೆ ಈ ಸಂಕಲ್ಪ. ಮಿಗಿಲಾಗಿ ಹೆತ್ತವರೆಂದು ಕರೆಸಿಕೊಳ್ಳುವ ಪಾತ್ರಗಳೂ ಕೂಡ ತಮ್ಮ ಬದಲಾಗದ ಮನಸ್ಥಿತಿಯೊಂದಿಗೆ ಮುಗ್ಧತೆಗಳನ್ನು ತುಳಿಯುವ ಮನಸು ಮಾಡುವುದು ಇಲ್ಲಿನ ವಿಪರ್ಯಾಸ.

ಇನ್ನು ಈ ಮೊದಲೇ ಹೇಳಿದಂತೆ ಇಲ್ಲಿ ಬಂದು ಹೋಗುವ ಪಾತ್ರಗಳು. ಯಾವ ಪಾತ್ರಗಳು ಕೂಡ ಸುಮ್ಮನೇ ಕೂತಿಲ್ಲ!. ಹಾಗೇ ಬಂದು ಹೀಗೆ ಹೋದಂತಿಲ್ಲ. ಎಲ್ಲವನ್ನೂ ಮಾತನಾಡಿಸುವ ಯೋಜಿತ ಬರಹ ರೂಪುರೇಷೆ ಸಂಕಲ್ಪದ ಪ್ರಮುಖದ ಅಂಶ. ಆದರೆ ಎಲ್ಲಾ ಪಾತ್ರಗಳನ್ನು ಮಾತಾನಾಡಿಸುವ ಗೋಜಿನಲ್ಲಿ ಸಂಕಲ್ಪದೊಡೆಯನ ಹೆಚ್ಚಿನ ಮಾತಿನ ಇಚ್ಛೆ ಓದುಗನ ಮನವನ್ನು ಸಂಭಾಷಣೆಗಳಿಂದ ಹಾರಿಸಿಬಿಡಬಹುದು ಎನ್ನುವ ಭಯ ಕೂಡ ನನಗೆ ಕಾಡದಿರಲಿಲ್ಲ. ಏನೇ ಇರಲಿ 'ಪ್ರಥಮಚುಂಬನಂ ದಂತಭಗ್ನಂ' ಅಲ್ಲವೇ ಅಲ್ಲ ಎನ್ನುವ ಪ್ರಮಾಣಪತ್ರ ಕೊಡಬಹುದಾದರೂ ಅತಿ ಕಿರಿಯನಾಗಿ ನಾನದಕ್ಕೆ ಹೆದರಿದರೂ, ಕೊಡದೇ ಇರಲಾರೆ.

ಕೊನೆಯದಾಗಿ, ನಾನು ಹೇಳಬಹುದಾದ ಮಾತೆಂದರೆ ಇದೊಂದು ಪ್ರೇಮಕಾದಂಬರಿಯಾಗಿ ನಿಲ್ಲಲ್ಲಿಲ್ಲ ಎನ್ನುವ ಸತ್ಯ ಮತ್ತು ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎನ್ನುವ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ, ಸುಶಿಕ್ಷಿತ ವಾತಾವರಣದಲ್ಲೂ ಅಂತರ್ಧರ್ಮೀಯ ತೊಳಲಾಟವನ್ನು ಹೊಡೆದೋಡಿಸಿ, ಗುಣಾತ್ಮಕ ಅಂಶಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವಲ್ಲಿ ಸಫಲ ನಾನು ಹೇಳಹೊರಟ "ಸಂಕಲ್ಪ".

ಸಂಕಲ್ಪದ ಬಗೆಗೆ ಗೆಳೆಯ ಹೇಮಂತ ಅವರ ಅನಿಸಿಕೆ

ಗೆಳೆಯ ಹೇಮಂತ ಕುಮಾರ ಅವರ ಅನಿಸಿಕೆ..
ಸಂಕಲ್ಪ

ಒಂದು ದಾರ ಕೈಯಿಗೆ ಕಟ್ಟಿ ಹೆಂಡತಿಯನ್ನ ತಂಗಿ ಮಾಡಬಹುದಾದರೆ? ಕೊರಳಿಗೂ ಒಂದು ದಾರವನ್ನೇ ಕಟ್ಟಿ ತಂಗಿಯನ್ನು ಹೆಂಡತಿ ಮಾಡಲಾಗುವುದಿಲ್ಲವೆ? ಎಂದರೆ ನೀವೇನು ಹೇಳ್ತೀರಿ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ನಮಗೇ ನೇರವಾಗಿ ಕೇಳುತ್ತಾ ಸಾಗುತ್ತದೆ ಸಂಕಲ್ಪ. ಒಂದು ಸಾಹಸ ಯಾತ್ರೆಯಲ್ಲಿ ಮುಳುಗೆದ್ದು ಬರುವ ಧೈರ್ಯ ಮಾಡುವ ಹಾಗಿದ್ದರೆ ಕೊಂಡು ಓದಿ. ‘ನಮ್ಮ’ ಮತ್ತು ‘ತಮ್ಮ’ ನಡುವಿನ ಇಬ್ಬರು ಸಾಧಾರಣ ಕೇವಲ ಮನುಷ್ಯರ ಗೋಳಾಟ, ಪರದಾಟ, ಸೆಣಸಾಟ, ಗುದ್ದಾಟ, ಕನಸುಗಳ ಕೊಸರಾಟ, ಮನಸುಗಳ ಮುದ್ದಾಟ, ಉತ್ತರಿಸುವವರಿರದ ಪ್ರಶ್ನೆಗಳೆರಚಾಟ, ಒಂದು ಲಕ್ಷ್ಯದೆಡೆಗಿನ ನಿರಂತರ ಓಟ. ಸ್ವಾರಸ್ಯಕರವಾಗಿ ಹೇಳಿ ಮನರಂಜಿಸಬೇಕೆಂದು ಕೊಂಚವೂ ಪ್ರಯತ್ನಿಸಲಾಗಿಲ್ಲ ಇಲ್ಲಿ. ನೈಜ ಘಟನೆಗಳ ನೇರಾನೇರ ವಿವರಣೆಯಂತಿದ್ದರೂ ಕುತೂಹಲವನ್ನು ಕೆರಳಿಸಿದರೆ ಅದಕ್ಕೆ ಕಾದಂಬರಿ ಜವಾಬ್ದಾರಿಯಲ್ಲ. ಪುಸ್ತಕ ಕೊಂಡು ಮೊದಲ ಅಧ್ಯಾಯ ಓದುವ ದುಸ್ಸಾಹಸ ನಾವು ಮಾಡಿದರೆ ಸಾಕು ಜಾರೋ ಬಂಡೆಯಲ್ಲಿ ಕೊನೆಮುಟ್ಟುವ ತನಕ ಕಾದಂಬರಿಯೇ ಜಾರಿಸಿಕೊಂಡು ಹೋಗುತ್ತದೆ. 

ಪ್ರಿಯ ಪ್ರೀತೀಶ ಅವರೇ,

ಕೊನೆಯ ಪುಟವನ್ನು ಮಗುಚಿಹಾಕುವಷ್ಟರಲ್ಲಿ ಒಂದು ಒಳ್ಳೆಯ ಅನುಭವ ಹೊತ್ತು, ನನ್ನ ಹಳೆಯ ದಿನಗಳ ನೆನಪುಗಳ ಮೂಟೆಯನ್ನು ಹಿಡಿದು ನಿಮ್ಮನ್ನು ನೋಡುತ್ತಾ ನಿಂತಿದ್ದೆ. ನೈಜವಾಗಿ ಇರುವುದು ಇರುವ ಹಾಗೆ ಮೂಡಿಬಂದಿದೆ, ಅದು ಇಷ್ಟವಾಯ್ತು. ಅಬ್ದುಲ್ಲಾ ನಮನ್ ನನ್ನು ಮೊದಲಾರ್ಧದಲ್ಲಿ ಕರೆತಂದು ಊರು ಬಿಟ್ಟು ಹೋಗಲು ಧಮಕಿ ಹಾಕುವ ಸನ್ನಿವೇಶವನ್ನು ಅಮ್ಮನ ದೃಷ್ಟಿಕೋನದಲ್ಲಿ, ಸ್ನೇಹಿತನ ದೃಷ್ಟಿಕೋನದಲ್ಲಿ, ನಮನನ ದೃಷ್ಟಿಕೋನದಲ್ಲಿ ಹೇಳಿ ಮತ್ತೆ ಅದೇ ಘಟನೆಗೆ ತಂದು ನಿಲ್ಲಿಸುವ ಟೆಕ್ನಿಕ್ ಬಹಳ ಹಿಡಿಸಿತು. ಅದು ಬಿಟ್ಟರೆ ಕಥೆ, ನಿರೂಪಣೆ ಮುಗ್ಧ ಪ್ರೇಮಿಗಳಿಬ್ಬರ ಜೀವನದ ಒಂದು ಎಪಿಸೋಡಿನ ರಿಪೋರ್ಟಿನ ರೀತಿ ಸಾಗುತ್ತಾ ಹೋದ ಹಾಗೂ ಏನಾಗಬಹುದೆಂದು ಗೊತ್ತಿದ್ದರೂ ಹೇಗೆ ಆಗುವುದೆಂಬ ಕೆಟ್ಟ ಕುತೂಹಲ ಹಿಡಿದಿಟ್ಟು ಓದಿಸುತ್ತದೆ. ಇಷ್ಟೆಲ್ಲಾ ಸಾಹಸವನ್ನು ಮಾಡಿ ಗೆದ್ದರಲ್ಲಾ ಎಂದು ಖುಷಿ ಪಡಬೇಕೋ ಅಥವಾ ಈ ರೀತಿ ಇನ್ನೂ ಬದುಕುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಹ ನಂಬಿಕೆಗಳಿಗಾಗಿ ಬೇಸರ ಪಡಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಆದಷ್ಟೂ ಪ್ರೇಮಿಗಳು ಗೆದ್ದು ಚೆನ್ನಾಗಿ ಜೀವನ ನಡೆಸುವಂತಾಗಲಿ ಎಂದು ಆಶಿಸುತ್ತೇನೆ ನಮನ ಮತ್ತು ತಮನ್ನಾ ಮರುಪ್ರತಿಗೊಂಡಷ್ಟೂ ನಮನ ಮತ್ತು ತಮನ್ನರನ್ನು ಹುಟ್ಟುಹಾಕುವಂತಾಗಲಿ… ಮುಂದೂ ಹಿಸ್ಲಿಂ ಜಾತಿಗಳು ಕೂಡ ಹುಟ್ಟುತ್ತಾ ಹೋಗಲಿ. Enjoyed a lot as a reader.. Experienced a lot as a student. Thanks for the wonderful novel.. keep writing.. ಸಾಗಲಿ ನಿಮ್ಮ ಸಾಹಿತ್ಯ ಯಾತ್ರೆ.. ವಿಭಿನ್ನ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಬರೆಯುವಂತಾಗಲಿ... ನಿಮ್ಮ ಚೊಚ್ಚಲ ಕಾದಂಬರಿಯ ಯಶಸ್ಸಿಗೆ ವಂದನೆಗಳು ಪ್ರವೀಣ ಕುಲಕರ್ಣಿ :-)

ಇಂತಿ ನಿಮ್ಮ ಗೆಳೆಯ,
ಹೇಮಂತ

ಸೋಮವಾರ, ಜುಲೈ 16, 2012

ಭಾನುವಾರ, ಜೂನ್ 24, 2012

ಸಾಹಿತ್ಯ ತರಬೇತಿ


ಹಿಂದಿನ ಒಂದು ವಾರದಲ್ಲಿ ಎರಡು ಪುಸ್ತಕಗಳನ್ನು ಓದಿದೆ.  ಒಂದು ರಹಮತ ತರೀಕೆರೆಯವರ “ಅಂಡಮಾನ್ ಕನಸು”, ಎರಡು ಸ್ಪೇನಿನ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಜ್ ಅವರ “ಲವ್ ಇನ್ ದ ಟೈಮ್ ಆಫ್ ಕಾಲರಾ”. ಇಂದು ಬೆಳಿಗ್ಗೆ ‘ವಿಜಯವಾಣಿ’ಯಲ್ಲಿ ಎಸ್.ಎಲ್.ಭೈರಪ್ಪನವರ ಸಂದರ್ಶನ ಓದಿದೆ.  ಅವರೆಲ್ಲ ಬರೆವ ಪರಿ, ಅವರ ಯೋಚನಾ ಶಕ್ತಿ, ಆಡುವ ಮಾತುಗಳು ನಾನು ತೃಣಕ್ಕೆ ಸಮಾನ ಎಂಬುದನ್ನು ಸಾರಿ ಹೇಳಿದಂತಿತ್ತು.  ರವೀಂದ್ರನಾಥ ಟ್ಯಾಗೋರ, ಶಿವರಾಮ ಕಾರಂತ, ಕುವೆಂಪು, ಬೇಂದ್ರೆ ಇವರೆಲ್ಲ ಜೊತೆಗೆ ನೆನಪಿಗೆ ಬಂದು ಅವರು ಏರಿದ ಉತ್ತುಂಗ ನಾನು ಕಾಣಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿಸಿದವು.

ಅಂಥ ಸಾಧನೆಗಳನ್ನು ಮಾಡಬೇಕಾದರೆ ತಪಸ್ಸು ಮಾಡಬೇಕಾಗುತ್ತದೆ.  ಎಷ್ಟೆಲ್ಲ ಓದು, ಎಷ್ಟೆಲ್ಲ ಅನುಭವ, ಅಲೆದಾಟ, ಪರಿಶ್ರಮ ಬೇಕು ಎಂದೆಲ್ಲ ಅನಿಸತೊಡಗಿತು.  ವರ್ಷಾನುಗಟ್ಟಲೆ ಸಂಗೀತದ ರಿಯಾಜ್ ಮಾಡುವಂತೆ ಸಾಹಿತ್ಯದ ಅಭ್ಯಾಸ ಮಾಡಬೇಕು, ಅನೇಕಾನೇಕ ಪ್ರಯೋಗಗಳನ್ನು ಮಾಡಬೇಕು, ಬರೆಯುವ ರೂಢಿ ಮಾಡಿಕೊಳ್ಳಬೇಕು.  ಸಾಹಿತ್ಯವನ್ನು ಸಂಗೀತದೊಡನೆ ಹೋಲಿಸುವಾಗ ಇನ್ನು ಉಳಿದ ಕಲಾಪ್ರಕಾರಗಳೂ ಕೂಡ ಹಾಗೆಯೇ ಎಂಬ ಜ್ಞಾನೋದಯವಾಯಿತು.  ಯಾವುದೇ ಕಲೆಯನ್ನು ಎತ್ತಿಕೊಂಡರೂ ಉದಾ: ನಟನೆ, ನೃತ್ಯ, ಚಿತ್ರಕಲೆ, ಸಂಗೀತ, ಸಾಹಿತ್ಯ ಇವುಗಳಿಗೆಲ್ಲ ನಿರಂತರ ಪ್ರಯತ್ನ, ಪರಿಶ್ರಮ, ನಿಷ್ಠೆ, ತಾಳ್ಮೆ, ಉತ್ಕಟೇಚ್ಛೆ, ಅಪಾರವಾದ ಪ್ರೀತಿ ಇವುಗಳು ಬೇಕು. ಜೊತೆಗೆ ಒಬ್ಬ ಗುರುಗಳ ಮಾರ್ಗದರ್ಶನ, ತರಬೇತಿ ಕೂಡ ಅವಶ್ಯಕ.  ಸಾಹಿತ್ಯ ಒಂದನ್ನುಳಿದು ಮಿಕ್ಕ ಕಲಾಪ್ರಕಾರಗಳಿಗೆಲ್ಲ ತರಬೇತಿ ಸಿಗುತ್ತದೆ.  ಆದರೆ ಸಾಹಿತ್ಯಕ್ಕೆ ಪ್ರತ್ಯೇಕವಾದ ತರಬೇತಿ ನಮ್ಮ ದೇಶದಲ್ಲಿ ಇದ್ದಂತಿಲ್ಲ.

ಜೀವನದ ಯಾವುದೋ ಒಂದು ಪ್ರಸಂಗದಲ್ಲಿ, ಎಲ್ಲಿಯೋ ಸ್ಫೂರ್ತಿ ಪಡೆದು ಕತೆ, ಕವಿತೆ ಬರೆಯಲು ಪ್ರಾರಂಭಿಸುತ್ತೇವೆ.  ಬರೆದವುಗಳನ್ನು ಗೆಳೆಯರಿಗೆ ತೋರಿಸಿ ಹೊಗಳಿಕೆ ಗಿಟ್ಟಿಸಿಕೊಳ್ಳುತ್ತೇವೆ.  ನಂತರ ಸ್ವಲ್ಪ ಧೈರ್ಯ ಬಂದು ಸಮೀಪದಲ್ಲಿ ಸಿಗುವ ಹಿರಿಯ ಸಾಹಿತಿಗಳ ಮುಂದೆ ಬರೆದುದನ್ನು ಚಾಚುತ್ತೇವೆ.  ಅವರ ಸಲಹೆ, ಸೂಚನೆ, ಮಾರ್ಗದರ್ಶನ ದೊರೆತರೆ ಅನೇಕ ಸುಧಾರಣೆಗಳನ್ನು ಮಾಡಿಕೊಳ್ಳುತ್ತೇವೆ.  ಈಗೀಗ ಅಂತರ್ಜಾಲದ ಸಹಾಯದಿಂದ ಬ್ಲಾಗಗಳಲ್ಲಿ, ಫೇಸಬುಕ್ ತಾಣಗಳಲ್ಲಿ ಪ್ರಕಟಿಸಿ ಮತ್ತಷ್ಟು ಹೊಗಳಿಕೆ, ಪ್ರೇರಣೆ ಪಡೆಯುತ್ತೇವೆ.  ನಂತರ ಇನ್ನೊಂದಿಷ್ಟು ಆತ್ಮವಿಶ್ವಾಸ ಮೂಡಿ ಪತ್ರಿಕೆಗಳಿಗೆ ಕಳುಹಿಸಿಕೊಡುತ್ತೇವೆ.  ಅಲ್ಲಿ ಪ್ರಕಟವಾದರೆ ತಾನೊಬ್ಬ ಸಾಹಿತಿ ಎಂದು ನಂಬಲು ಶುರುಮಾಡುತ್ತೇವೆ.

ಆದರೆ ಈ ರೀತಿಯಾಗಿ ಅಡ್ಡಾದಿಡ್ಡಿಯಾಗಿ ಬೆಳೆವ ಸಾಹಿತ್ಯ ಎಲ್ಲಿಯೋ ಒಂದು ಕಡೆಗೆ ಎಡವಿ ನಿಂತುಬಿಡುವ ಅಪಾಯವಿದೆ.  ಸರಿಯಾದ ಮಾರ್ಗದರ್ಶನ ಸಿಗದೆ ದಾರಿ ತಪ್ಪುವ ಸಾಧ್ಯತೆಯಿದೆ.  ಅನೇಕ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದಿ ಸ್ಫೂರ್ತಿ ಪಡೆದು ಅವರಂತೆ ಅನುಕರಣೆ ಮಾಡಲು ಪ್ರಯತ್ನ ಪಡುವುದಿದೆ.  ಆದರೆ ಯಾವುದೇ ಕಲೆಗೆ ಇದೊಂದು ಶಿಸ್ತುಬದ್ಧವಾದ ಪ್ರಕ್ರಿಯೆಯಲ್ಲ.  ಉಳಿದ ಕಲೆಗಳಿಗೆ ದೊರಕುವಂತೆ ನಿಯಮಿತವಾದ, ಶಿಸ್ತಿನಿಂದ ಕೂಡಿದ, ಗುರುಗಳ ಮಾರ್ಗದರ್ಶನದಲ್ಲಿ ತರಬೇತಿ ಸಿಕ್ಕಿದ್ದೇ ಆದಲ್ಲಿ ಸಾಹಿತ್ಯ ಇನ್ನೂ ಸುಂದರವಾಗಿ ಅರಳಿ ಬರಬಹುದು.   ಅನೇಕ ದೇಶಗಳಲ್ಲಿ “ಕ್ರಿಯೇಟಿವ್ ರೈಟಿಂಗ್ ಕೋರ್ಸ್” ಎಂಬ ತರಬೇತಿಗಳು ಲಭ್ಯವಿವೆ.  ಅವನ್ನು ನಾವು ಅನುಕರಿಸಬಹುದೇನೋ?  ಯಾವುದೇ ತರಬೇತಿ ಇಲ್ಲದೇ ಕೂಡ ಅಜರಾಮರ ಕೃತಿಗಳನ್ನು ಕೊಟ್ಟಿರುವ ಸಾಹಿತಿಗಳು ನಮ್ಮ ಮಧ್ಯೆ ಇದ್ದಾರೆ.  ಆದರೆ ಈ ರೀತಿ ತರಬೇತಿ ದೊರಕಿದ್ದೇ ಆದಲ್ಲಿ ಮಾರ್ಗದರ್ಶನ, ತರಬೇತಿಯ ಕೊರತೆಯಿಂದ ಬಾಡಿಹೋಗುವ ಪ್ರತಿಭೆಗಳ ಸಂಖ್ಯೆ ಕಡಿಮೆಯಾಗುತ್ತದೆ.  ಅದರಿಂದ ನಾವು ಇನ್ನೂ ಅದ್ಭುತವಾದ ಸಾಹಿತ್ಯವನ್ನು ಆಸ್ವಾದಿಸುವ ಭಾಗ್ಯವನ್ನು ಪಡೆಯಬಹುದೇನೋ ಎಂಬ ಆಶೆ ನನಗೆ.

ಗುರುವಾರ, ಜೂನ್ 14, 2012

ಎಳೆತ




ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಯಿತು ಗೆಳತೀ,

ಅಲ್ಲಲ್ಲಿ ಸಿಡಿದ ರಕ್ತ,
ತುಂಬೆಲ್ಲಾ ಹರಡಿದ ಕಣ್ಣೀರು,
ಅವರಿವರು ಕ್ಯಾಕರಿಸಿದ ಉಗುಳು,
ಎಲ್ಲ ಒಣಗಲೆಂದು ತೂಗ ಹಾಕಿದ್ದೆ.

ಜೊತೆಗೊಂದಿಷ್ಟು ಕನಸುಗಳು,
ಅದರಲ್ಲೊಂದು ಮನಸು,
ಆಗಾಗ ಫಳಫಳನೆ ಹೊಳೆವ
ಒಂದಿನಿತು ಮಹಾತ್ವಾಕಾಂಕ್ಷೆಗಳು,
ಕಚಗುಳಿಯಿಡುವ ಆಶೆಗಳು.

ಕಣ್ಣಂಚಿನಲ್ಲಿ ಬೀಡು ಬಿಟ್ಟ
ಕೋಗಿಲೆ ಇಟ್ಟ ತತ್ತಿ
ಗೂಡಲ್ಲಿ ಬಚ್ಚಿ ತೂಗಿದ್ದೆ
ಮಡಚಿದರೆ ಮುರಿದೋಗುವ
ಬಟ್ಟೆಗಳಿಗೆಂದು ಹ್ಯಾಂಗರುಗಳು,
ಯಾವುದೂ ಹಾರಿ ಹೋಗದಿರಲೆಂದು
ಹಚ್ಚಿ ಉಳಿದ ಕ್ಲಿಪ್ಪುಗಳು
ನಾಳೆಗಿರಲೆಂದು ಕೂಡಿ ಜೋಡಿಸಿಟ್ಟ
ಕೊಬ್ಬರಿ ಬಟ್ಟಲುಗಳು, ಉಳ್ಳಾಗಡ್ಡಿ,
ಜೋತು ಬಿದ್ದ ಬಳ್ಳೊಳ್ಳಿ ಗಿಡಗಳು,
ಶ್ರೀಖಂಡ ಮಾಡಲೆಂದು ಕಟ್ಟಿದ ಮೊಸರು,
ಮೊಳಕೆಯೊಡೆಯಲೆಂದು ಹೆಸರುಕಾಳು,
ಎಲ್ಲ ಎಲ್ಲ ಅಪ್ಪಚ್ಚಿಯಾಗಿತ್ತು

ನೀ ರೊಚ್ಚಿಗೆದ್ದು ಎಳೆದ ಎಳೆತಕ್ಕೆ ಗೆಳತಿ,
ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಗಿತ್ತು.

....ಪ್ರೀತೀಶ

ಶುಕ್ರವಾರ, ಜೂನ್ 8, 2012

ರಕ್ತದ ರುಚಿ


೨೦೦೩ರಲ್ಲಿ ಬರೆದ ಮತ್ತೊಂದು ಕವನ.


ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

ಸಪ್ಪೆಯಾಗಿದೆ ಜ್ಯೂಸು, ಕೋಲ್ಡ್ರಿಂಕು,
ಎಳೆನೀರು, ಸೋಡಾ, ಶರಬತ್ತು,
ಕಬ್ಬಿನ ರಸ, ಹಾಲು, ಅಲ್ಕೋಹಾಲು.

ತಿಂದು ತಿಂದು ತುಂಬಿದೆ ಹೊಟ್ಟೆ,
ತುಂಬಿ ತೇಗಿದೆ ಹೊಟ್ಟೆ,
ತೇಗಿದ ಹೊಟ್ಟೆ ಜೀರ್ಣಕ್ಕೆಮಗೆ
ರಕ್ತವೇ ಪಂಚಾಮೃತ.

ಬುಷ್ಷು, ಮುಷ್ಷು, ಬ್ಲೇರು, ಗ್ಲೀರುಗಳಿಗೆಲ್ಲ
ರುಚಿ ಹತ್ತಿದೆ, ನಶೆಯೇರಿದೆ
ಮೈಮನಗಳಲ್ಲಿ ಉರಿಯೆಬ್ಬಿಸಿ
ಹುಯಿಲೆಬ್ಬಿಸಿರುವ ತೀಟೆ ತಣಿಯಬೇಕಿದೆ.
ಬೇಕಾಗಿದೆ, ರಕ್ತ ಬೇಕಾಗಿದೆ.

ಜಾತಿ ಭೇದವಿಲ್ಲ, ಮತಭೇದವಿಲ್ಲ
ದೇಶ, ಭಾಷೆ, ಲಿಂಗ ಭೇದವಿಲ್ಲ
ಪಂಡಿತ, ಪಾಮರ, ಬಡವ, ಬಲ್ಲಿದ
ಒಂದೇ ಬಣ್ಣದ ರಕ್ತ ಭೇದಕ್ಕೆ ಎಡೆಯಿಲ್ಲ.

*****
ನೆರೆಯಿರಲಿ, ಹೊರೆಯಿರಲಿ
ಕಾಲಕೆಳಗಿನ ಭುವಿಯಿಂದ ಚಿಮ್ಮುತಿರಲಿ
ಮುಗಿಲು ಸುರಿಸಲಿ, ನದಿ ಹರಿಸಲಿ,
ನನ್ನ ಹೃದಯ ಕಾರಂಜಿಯೇ ಹೊಮ್ಮುತಿರಲಿ,
ಬೇಕಾಗಿದೆ, ರಕ್ತ ಬೇಕಾಗಿದೆ.

ಚಂದದ ಹುಡುಗೀರ ಕಣ್ಣಲ್ಲಿ,
ಹದಿಹರೆಯದ ಹುಡಗೂರ ಕಣ್ಣಲ್ಲಿ,
ಬೊಚ್ಚ ಬಾಯ ನಗುವಿನ ಮುದಕೀರು,
ಹುಟ್ಟಿದ ಖಬರಿಲ್ಲದ ಕೂಸುಗಳು,
ಅಮ್ಮ, ಅಣ್ಣ, ತಂಗಿ, ಮಗಳ ಕಂಗಳಲ್ಲಿ
ಮನೆಯಲ್ಲಿ, ಮಸೀದಿಯಲಿ,
ಮಂದಿರ, ಬಸದಿ, ಚರ್ಚುಗಳಲ್ಲಿ,
ಕಲ್ಲು, ಮಣ್ಣು, ಗುಡ್ಡ ಬೆಟ್ಟಗಳಲ್ಲಿ
ಹೃದಯದಲಿ, ಗಾಂಧಿ ಫೋಟೋಗಳಲಿ
ಬರೀ ರಕ್ತ, ರಕ್ತ ಚಿಮ್ಮುತಿದೆ.

*****

ಪಿಳಿಪಿಳಿವ ಕಂಗಳಲ್ಲಿ
ಸುಳಿಸುಳಿವ ಬಂಗಳಲ್ಲಿ
ಕುರಿಗಳಲ್ಲಿ, ಹುಲಿಗಳಲ್ಲಿ,
ಗಿಳಿ, ಕೋಗಿಲೆ, ನವಿಲುಗಳಲ್ಲಿ
ಕುದುರೆಗಳಲ್ಲಿ, ಕತ್ತೆಗಳಲ್ಲಿ,
ಕೃಷ್ಣನ ಕೋಟಿ ಅವತಾರಗಳಲ್ಲಿ
ಮಡುವಲ್ಲಿ, ಒಡಲಲ್ಲಿ ಭೀಮದಾಹ,
ಎಂದೆಂದೂ ತೀರದ ಭೀಮದಾಹ.

ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

ಗುರುವಾರ, ಜೂನ್ 7, 2012

ಕಸದ ಬುಟ್ಟಿ



ಛೀಮಾರಿ ಹಾಕಬೇಡಿ.  ಇದೇನು ಬರೆಯುವಂಥ ವಿಷಯವೇ ಎಂದು ಪ್ರಶ್ನಿಸಬೇಡಿ.  ಪ್ರಶ್ನೆ ಸರಿಯಾದುದೇ.  ಆದರೆ ಉತ್ತರವಿಲ್ಲವಲ್ಲ!  ಏನು ಮಾಡಲಿ ಹೇಳಿ? ಬರೆಯಲು ಎಷ್ಟು ತಿಣುಕಾಡಿದರೂ ಒಂದೂ ವಿಷಯ ಸಿಗಲಿಲ್ಲ.   ಅದಕ್ಕೆ ಕಾಲಬುಡದಲ್ಲಿ ಸಿಕ್ಕ ಬಡಪಾಯಿಯ ಅಪಮಾನ ಮಾಡುವ ದರಿದ್ರ ಕೆಲಸಕ್ಕಿಳಿದಿರುವೆ. ಕ್ಷಮೆಯಿರಲಿ.  ಕ್ಷಮೆ? ಅದಕ್ಕೆ ಅರ್ಹನೇ ನಾನು? ಪ್ರಶ್ನೆಯನ್ನು ಒಂದಿನಿತು ಹೊತ್ತು ಬದಿಗಿಟ್ಟು ಓದಿ ನಂತರ ನಿಮ್ಮ ಉತ್ತರ ನಕಾರಾತ್ಮಕವಾಗಿದ್ದರೆ ಒಂದಿಷ್ಟು ಝಾಡಿಸಿ ಒದೆಯಿರಿ. (ಒದೆ ತಿನ್ನಲು ಎದುರಿಗೆ ನಾನಿಲ್ಲವಲ್ಲ ಎಂದು ಒಳಗೊಳಗೆ ನಾನು ನಕ್ಕುದನ್ನು ತಾವು ನೋಡಿಲ್ಲವೆಂಬುದು ನನ್ನ ಭ್ರಮೆ)

ಇಂಥ ರಸಹೀನ, ಕೊಳಕು, ದರಿದ್ರ ವಸ್ತುವನ್ನು ಆಯ್ದುಕೊಳ್ಳುವಾಗ ಇದನ್ನು ಓದಲು ನೀವು ಆಯ್ದುಕೊಂಡಾಗ ಆದಷ್ಟೇ ನನಗೂ ಅಸಹ್ಯವಾಯಿತು.  ಆದರೆ ಜಗತ್ತಿನ ಕೊಳಕನ್ನೆಲ್ಲ ತನ್ನ ಒಡಲಲ್ಲಿ ಅವಿತಿಟ್ಟುಕೊಂಡ, ಕೆಲವೊಮ್ಮೆ ತೆರೆದುಕೊಂಡ, ಬಹಳಷ್ಟು ಸಾರಿ ಸುತ್ತೆಲ್ಲ ಚೆಲ್ಲಿಕೊಂಡ ಈ ಕಸದ ಬುಟ್ಟಿಯ/ತೊಟ್ಟಿಯ (ಸಂಕ್ಷಿಪ್ತವಾಗಿ ಕ.ಬು.) ಬಗ್ಗೆ ಯೋಚಿಸಲು ತೊಡಗಿದಾಗ ನನಗೆ ಆದ  ಜ್ಞಾನೋದಯದಿಂದ ಬೆಚ್ಚಿ ಇದನ್ನೆಲ್ಲ ತಮ್ಮ ಮುಂದೆ ಕಾರಿಕೊಳ್ಳಲು ಸನ್ನಧ್ಧನಾದೆ.  ಸುಮ್ಮನೆ ವಸ್ತುವಿನ ಬಗ್ಗೆಯೇ ಕಿರಿಕಿರಿ ಮಾಡುವುದನ್ನು ಬಿಟ್ಟು ಏನು ಕೊರೆಯುವುದಿದೆಯೋ ಅದನ್ನು ಕೊರೆದು ಮುಗಿಸಪ್ಪ ಎಂದು ಬೇಜಾರಾಗಬೇಡಿ.

ಕ.ಬು. ನಮ್ಮಂಥ ಹೇಳಹೆಸರಿಲ್ಲದ, ಅಕ್ಷರ ಬರೆಯಲು ಬಂದರೆ ಲೇಖಕನಾದೆ ಎಂಬ ಹುಸಿಗರ್ವದಿಂದ ಮೆರೆವ ಯಾರೂ ಗುರುತಿಸದ ಲೇಖಕರಿಗೆ ಹೊಸದೇನಲ್ಲ.  ಜಗತ್ತಿನಲ್ಲಿ ಎಲ್ಲ ಕ.ಬು.ಗಳೂ ಬಹುಶ: ಅತೀ ಹೆಚ್ಚಾಗಿ ಬೆದರುವ ಕಸವೆಂದರೆ ನಾವು ಬರೆದ ಕವನಗಳು (?), ಕತೆಗಳು (?), ಲೇಖನಗಳು (?).  ಮೊದಲಿಗೆ ಬರೆಯಬೇಕೆಂಬ ಹುಂಬತನದಿಂದ ಎಷ್ಟೆಲ್ಲ ಗುದ್ದಾಡಿ ಒಂದು ವಸ್ತುವನ್ನು ಹುಡುಕಿ, ಅದರ ಬಗ್ಗೆ ಎಷ್ಟೆಲ್ಲ ಯೋಚಿಸಿ, ತಲೆ ಕೆರೆದುಕೊಂಡು, ಎಲ್ಲೆಲ್ಲೋ ತಡಕಾಡಿ ಯಾರಿಗೂ ಗೊತ್ತಾಗದಂತೆ ಹತ್ತಿಪ್ಪತ್ತು ಕವನಗಳಿಂದ ತುಣುಕುಗಳ ತುಡುಗು ಮಾಡಿ, ನಿಘಂಟನ್ನೆಲ್ಲ ಬರಿದು ಮಾಡಿ ಒಂದು ಕವನ ಬರೆಯುವಾಗ ಒಂದೋ ಎರಡೋ ಕ.ಬು.ಗಳು ತುಂಬಿಕೊಂಡಿರುತ್ತವೆ.  ಹೀಗೆ ಕೊನೆಗೂ ಬರೆದು ಮುಗಿಸಿದ ಕವನ ಎಷ್ಟೆಲ್ಲ ಪತ್ರಿಕಾ ಕಾರ್ಯಾಲಯಗಳಿಗೆ ಹೋಗಿ ಅವರಿಗೆ ಹೇಸಿಗೆ ಬಂದು ಒಂದು ಕವನಕ್ಕಾಗಿ ಅವರೂ ಒಂದೋ ಎರಡೋ ಕ.ಬು.ಗಳ ತುಂಬಿ, ಪ್ರಕಟಗೊಂಡ ಕವನಗಳ ಓದಲಾಗದೇ ಓದುಗರು ಇನ್ನೆಷ್ಟೋ ಕ.ಬು. ತುಂಬಿ...  ಅಯ್ಯಯ್ಯೋ ಈ ಕಸದ ಬುಟ್ಟಿಯಷ್ಟು ಸಹನೆ ನಮಗೆ ಇರಬಾರದೇ ಎನಿಸದಿರದು.  ಕ.ಬು.ಗಳು ಇಲ್ಲಿಯವರೆಗೆ ಮುಚ್ಚಿಟ್ಟುಕೊಂಡ ಅತ್ಯಂತ ಹೆಚ್ಚಿನ ಕೊಳಕೂ ಅದೇ ಎಂಬುದು ನನ್ನ ಖಡಾಖಂಡಿತವಾದ ನಂಬುಗೆ.  ಅದು ನಿಜವೆಂದು ಒಪ್ಪಲು ಮನಸ್ಸು ತಯಾರಿಲ್ಲ.  ಕ.ಬು. ಮಾಡುವ ಬಹಳ ಮಹತ್ವದ ಸಮಾಜಸೇವೆಯೇ ಈ ಕೊಳಕನ್ನು ಜನರ ಕಣ್ಣಿನಿಂದ ದೂರ ಇಟ್ಟಿರುವುದು.  ಆ ಪುಣ್ಯದ ಕೆಲಸಕ್ಕಾಗಿ ಕಸದ ಬುಟ್ಟಿ ಯಾವಾಗಲೋ ಸ್ವರ್ಗ ಸೇರಿ ಆರಾಮಾಗಿ ಇರಬಹುದಿತ್ತು.  ಆದರೆ ಜಗತ್ತಿನ ಒಳ್ಳೆಯ ಕೊಳಕೆಲ್ಲ ಧರಣಿ ಹೂಡಿ ಭೂಮಿಯಲ್ಲೇ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸು ಪಡೆದದ್ದು ಯಾವ ಇತಿಹಾಸದಲ್ಲೂ ದಾಖಲಾಗದ ಒಂದು ಕಟುಸತ್ಯ.

ಇಂಥ ಕಸದ ಬುಟ್ಟಿ ಇಲ್ಲದ ಜಗತ್ತನ್ನು ಒಂದು ಸಾರಿ ನಾನು ಕನಸಲ್ಲಿ ಕಂಡೆ.  ಎಲ್ಲಿ ನೋಡಿದಲ್ಲಿ ಕಸವೋ ಕಸ.  ಯಾವುದಾದರೂ ಸ್ವಚ್ಛವಾದ ಜಾಗವನ್ನು ಕಂಡಕೂಡಲೇ ಜನರೆಲ್ಲ ವಾಂತಿ ಮಾಡಿಕೊಳ್ಳುತ್ತಿದ್ದರು.  ಹದಿಹರೆಯದ ಹುಡುಗರು ತಾನು ಮನಸಾರಾ ಪ್ರೀತಿಸಿದ ಹುಡುಗಿಗೆ ಕಸದ ಬುಟ್ಟಿಯನ್ನು ಉಡುಗೊರೆ ಕೊಡುತ್ತಿದ್ದರು.  ಯಾರು ಅತ್ಯಂತ ಹೊಲಸು ಕಸದ ಬುಟ್ಟಿಯನ್ನು ತಂದು ಕೊಡುತ್ತಾರೋ ಅವರಿಗೆ ಹುಡುಗಿಯ ಪ್ರೀತಿ ಮೀಸಲು.  ಅದಕ್ಕಾಗಿ ಹುಡುಗರಲ್ಲಿ ಬಡಿದಾಟವೋ ಬಡಿದಾಟ.  ಕೆಸರು ಎರಚಾಡುವುದು ನಮ್ಮ ದೇಶದ ರಾಷ್ಟ್ರಕ್ರೀಡೆ.  ಕಳೆದ ಮುವತ್ತು ವರ್ಷಗಳಲ್ಲಿ ನಮ್ಮ ದೇಶ ಕೆಸರು ಎರಚಾಟದಲ್ಲಿ ಒಂಭತ್ತು ವಿಶ್ವಕಪ್ಗಳನ್ನು ಗೆದ್ದಿದ್ದರೂ ಎಂಟು ಬಾರಿ ಸತತವಾಗಿ ಸೋತಿದ್ದಕ್ಕೆ ದೇಶದ ತುಂಬಾ ಅದನ್ನು ರಾಷ್ಟ್ರಕ್ರೀಡೆಯ ಪಟ್ಟದಿಂದ ಇಳಿಸಬೇಕು ಎಂಬ ದೊಡ್ಡ ಬೇಡಿಕೆ.  ಇತ್ತೀಚೆಗೆ ದೇಶದ ತುಂಬಾ ಅತ್ಯಂತ ಮಲೀನವಾದ ಪಟ್ಟಣವೆಂಬ ಖ್ಯಾತಿಯನ್ನು ಪಡೆದ ಬೆಂಗಳೂರಿಗೆ ಕೇಂದ್ರ ಸರ್ಕಾರದಿಂದ ರೂ. 5000 ಕೋಟಿ ಅನುದಾನ ಬಿಡುಗಡೆಯಾಗಿತ್ತು.   ಯಾರ ಮನೆಯಲ್ಲಿ ಕಡಿಮೆ ಕಸ ಇದೆಯೋ ಅವರ ಮನೆಗೆ ಪ್ರತಿ ತಿಂಗಳು ರೂ. 300 ಮಾಸಾಶನ ಕೊಡುವ ಸರ್ಕಾರದ ನಿರ್ಧಾರವನ್ನು ದೇಶವೆಲ್ಲ ಶ್ಲಾಘಿಸಿತ್ತು.  ಲಾಠಿಯ ಪೆಟ್ಟೊಂದು ಹೇಳಿಕೊಳ್ಳಲಾಗದ ಜಾಗಕ್ಕೆ ಹೊಡೆಸಿಕೊಂಡ ಮೇಲೆ ನನಗೆ ಎಚ್ಚರಾಗಿತ್ತು.  ಎದ್ದು ಕಣ್ಣು ತಿಕ್ಕಿಕೊಂಡ ಕ್ಷಣ ಮೂಗಿಗೆ ಅಡರಿದ್ದು ದುರ್ನಾತ.  ಆ ರಾತ್ರಿಗೆ ನನ್ನ ಮಂಚವಾಗಿದ್ದು ಕಸದ ತೊಟ್ಟಿ!  ಅಲ್ಲಿಗೆ ಹೇಗೆ ಬಂದೆ ಎಂದು ಕೇಳಿ ನನ್ನ ಜನ್ಮಾಂತರವನ್ನು ಜಾಲಾಡಬೇಡಿ. ಪ್ಲೀಜ್.

ಕಾಲಕ್ಕೆ ತಕ್ಕಂತೆ ನಮ್ಮ ಕಸದ ಬುಟ್ಟಿ ಕೂಡ ಪರಿವರ್ತನೆಗೆ ಒಳಗಾಗಿದೆ.  ಮನೆಯ ಮೂಲೆಯೊಂದರಲ್ಲಿ ಯಾರಿಗೂ ಕಾಣದಂತೆ ಕುಳಿತುಕೊಳ್ಳುತ್ತಿದ್ದ ಕ.ಬು. ಇಂದು ತರಾವರಿ ಬಣ್ಣಗಳಲ್ಲಿ, ಅನೇಕಾನೇಕ ಗಾತ್ರ ಮತ್ತು ವಿನ್ಯಾಸಗಳಲ್ಲಿ, ನೂರೆಂಟು ಚಿತ್ರಗಳನ್ನು ಹೊತ್ತುಕೊಂಡು ಶೃಂಗಾರದ ಸಾಧನೆಯೋ ಎಂಬಂತೆ ಅಂಗಡಿಗಳಲ್ಲಿ ಕಾಣಿಸಿಕೊಂಡು ಕಸದ ಬುಟ್ಟಿಯ ಆಯ್ಕೆಯನ್ನೂ ಗೊಂದಲಮಯ ಮಾಡಿಬಿಟ್ಟಿವೆ.  ಕೆಲವೊಂದು ದೇಶಗಳಲ್ಲಿ ಕಸದ ಬುಟ್ಟಿಯ ಮೇಲೇ ಕಾನೂನುಗಳು ಜಾರಿಯಾಗಿವೆ.  ಪ್ರತಿ ಮನೆಯಲ್ಲಿ ಎರಡು ತರಹದ ಕಸದ ಬುಟ್ಟಿಗಳನ್ನು ಇಡುವುದು ಅವಶ್ಯಕ ಎಂದು ಕಟ್ಟುನಿಟ್ಟು ಮಾಡಲಾಗಿದೆ.  ಒಂದು ಜೈವಿಕ ಕಸದ ಬುಟ್ಟಿ, ಇನ್ನೊಂದು ಅಜೈವಿಕ ಕಸದ ಬುಟ್ಟಿ.  ಅಸ್ಪತ್ರೆಗಳಲ್ಲಿ ಯಾವ ರೀತಿ ಕಸವನ್ನು ಪ್ರತ್ಯೇಕಿಸಬೇಕು, ಕಾರ್ಖಾನೆಗಳಲ್ಲಿ ಯಾವ ರೀತಿ ಕಸವನ್ನು ಸಾಗಿಸಬೇಕು ಎಂಬೆಲ್ಲ ಕಾನೂನುಗಳು ಜನರ ಒಳಿತಿಗೆ ಕಾರಣವಾಗಿವೆ.  ಮನುಷ್ಯರನ್ನು ಕಸವೆಂದು ಪರಿಗಣಿಸದ ಅನೇಕ ದೇಶಗಳು ಈ ಕಾನೂನುಗಳನ್ನು ಅತ್ಯಂತ ಜಾಗರೂಕತೆಯಿಂದ ಜಾರಿಗೊಳಿಸಿವೆ.  ಮಾನವನ ಆರೋಗ್ಯದ ಮೇಲೆ ಅನೇಕ ತರಹದ ಕಸಗಳು ಮಾಡುವ ದುಷ್ಪರಿಣಾಮಗಳನ್ನು ಅರಿತು ಇಂಥ ಕಾನೂನುಗಳನ್ನು ಹುಟ್ಟುಹಾಕಿವೆ ಹಾಗೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿವೆ.
ಕಣ್ಣಿಗೆ ಕಾಣುವ ಈ ಕಸದ ಬುಟ್ಟಿ ವಿಶ್ವದ ಇನ್ನೂ ಅನೇಕ ತರದ ಕಸದ ಬುಟ್ಟಿಗಳ ಬರೀ ಒಂದು ಪ್ರತಿಶತ ಭಾಗ ಮಾತ್ರ.  ಜಗತ್ತಿನ ತುಂಬೆಲ್ಲ ತುಂಬಿರುವ ಸಾವಿರಾರು ನಮೂನೆಯ ಕ.ಬು.ಗಳು ನಮ್ಮ ಜೀವನವನ್ನು ಹಸನಾಗಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.  ಅದೇ ಉಸಿರಿನಲ್ಲಿ ಆ ಕಸದ ಬುಟ್ಟಿಗಳ ಉಪಯೋಗ ಗೊತ್ತಿಲ್ಲದ ಮೂಢರು ಜಗತ್ತನ್ನು ಮತ್ತಷ್ಟು ಕೊಳಕಾಗಿಸಿದ್ದಾರೆ ಎಂದು ಹೇಳದೇ ಇದ್ದರೂ ತಪ್ಪಾಗುತ್ತದೆ.

ಆ ಸಾಲಿನಲ್ಲಿ ಮೊಟ್ಟಮೊದಲಿಗೆ ನನಗೆ ಹೊಳೆಯುವುದು ನಮ್ಮ ಯೋಚನೆಗಳೆಂಬ ಕಸ.  ಮನುಷ್ಯ ದಿನವಿಡೀ ಮಾಡುವ ಯೋಚನೆಗಳು ಲಕ್ಷಾಂತರ.  ಆದರೆ ಅವುಗಳಲ್ಲಿ ಕೆಲಸಕ್ಕೆ ಬರುವ ಯೋಚನೆಗಳು ಕೇವಲ ಬೆರಳಣಿಕೆಯಷ್ಟು.  ಉಳಿದುವೆಲ್ಲ ನಮ್ಮ ಮರೆವೆಂಬ ಕಸದ ಬುಟ್ಟಿ ತಾನೇ ಸೇರುವವು?  ಆದರೆ ನಾವು ಕಾರ್ಯರೂಪಕ್ಕೆ ತರುವ ಎಲ್ಲ ಯೋಚನೆಗಳು ಉಪಯುಕ್ತವೆಂದು ಹೇಳಿದರೆ ತಪ್ಪಾಗುತ್ತದೆ.  ಅನೇಕ ಕಸಯೋಚನೆಗಳನ್ನು ನಾವು ಕಾರ್ಯರೂಪಕ್ಕೆ ತಂದು ನಮ್ಮ ನೆರೆಹೊರೆ, ಸಂಬಂಧಗಳನ್ನು ಸುತ್ತೆಲ್ಲ ಚೆಲ್ಲುವ ಕಸದ ತೊಟ್ಟಿಗಳನ್ನಾಗಿ ಮಾಡುತ್ತೇವೆ.   ಅಷ್ಟಕ್ಕೆ ನಿಲ್ಲದೇ ಅದೇ ಕಸಯೋಚನೆಗಳನ್ನು ಇತರರಲ್ಲೂ ಬಿತ್ತುತ್ತೇವೆ.  ಅದೇ ಶ್ರೇಷ್ಠವೆಂದು ಜಗಳಕ್ಕೂ ನಿಲ್ಲುತ್ತೇವೆ.  ಒಳ್ಳೆಯ ಯೋಚನೆ ಮಾಡುವುದೇ ಅಪರಾಧ ಎಂಬಂತೆ ಪ್ರತಿಪಾದಿಸುತ್ತೇವೆ.  ಕೊನೆಕೊನೆಗೆ ಕಸಯೋಚನೆಗಳೇ ನಿಜವಾದ ನಮ್ಮ ಸಂಸ್ಕøತಿ ಎಂಬಂತೆ ಬಿಂಬಿಸುತ್ತೇವೆ.  ನಂತರ ಸುವಿಚಾರಗಳ ಕರ್ತೃಗಳೂ ಅವೇ ನಿಜವೆಂದು ನಂಬತೊಡಗುತ್ತಾರೆ.  ಆಮೇಲೆ ಕಸದ ಬುಟ್ಟಿಯೇ ನಮ್ಮ ಶತ್ರುವಾಗುತ್ತದೆ.  ಭ್ರಮೆಯ ಜಾಲದಲ್ಲಿ ನಾವು ಲೀಲಾಜಾಲವಾಗಿ ಸಿಕ್ಕಿಹಾಕಿಕೊಳ್ಳುತ್ತೇವೆ.

ಈಗೆಲ್ಲ ಇನ್ನೊಂದು ಮಹತ್ವದ ಎಲ್ಲರಿಗೂ ಚಿರಪರಿಚಿತ ಕಸದ ಬುಟ್ಟಿಯೆಂದರೆ ನಮ್ಮ ವರ್ಚ್ಯುವಲ್ ಕಸದ ಬುಟ್ಟಿ – ಯಾವ ಗಣಕಯಂತ್ರ ತೆರೆದರೂ ಕಣ್ಣಿಗೆ ರಾಚುವ ರಿಸೈಕಲ್ ಬಿನ್.  ಬಿಲ್ ಗೇಟ್ಸ ಮಹಾಶಯ ಬಹಳ ಜಾಣ. ಅವನು ಅದಕ್ಕೆ ಡಸ್ಟ ಬಿನ್ ಎನ್ನಲಿಲ್ಲ. ರಿಸೈಕಲ್ ಬಿನ್ ಎಂದ.  ಅಂದರೆ ಮರು ಉಪಯೋಗಕ್ಕೆ ಲಾಯಕ್ಕಾಗಿರುವ ಕಸ.  ಅವನಿಗೆ ಗೊತ್ತುಂಟು ಯಾವುದು ಬೇಡವೋ ಅದನ್ನು ನಾವು ನಮ್ಮ ಹಾರ್ಡಡಿಸ್ಕನಲ್ಲಿ ಉಳಿಸಿಕೊಳ್ಳುತ್ತೇವೆ, ಬೇಕಾದುದನ್ನು ಕಸದ ಬುಟ್ಟಿಗೆ ಹಾಕುತ್ತೇವೆ.  ಅದಕ್ಕಾಗಿಯೇ ನಾವು ಎಂಥದನ್ನು ಅಳಿಸಿಹಾಕಿದರೂ ಅದು ನೇರವಾಗಿ ಈ ರಿಸೈಕಲ್ ಬಿನ್ನಿಗೆ ಬಂದು ಬೀಳುತ್ತದೆ.  ಅಳಿಸಿ ಹೋಗುವುದಿಲ್ಲ.  ಮುಂದೆ ಎಂದಾದರೂ ಒಂದು ದಿನ ಅಯ್ಯೋ ನಾನು ಅಳಿಸಿ ಹಾಕಬಾರದಿತ್ತಲ್ಲ ಎಂದು ಪಶ್ಚಾತ್ತಾಪ ಪಡಬೇಕಾದ ಸನ್ನಿವೇಶ ಬಂದಾಗ ರಿಸೈಕಲ್ ಬಿನ್ನಿಗೆ ಹೋಗಿ, ರಿಸ್ಟೋರ್ ಮಾಡಿ.  ನಮ್ಮ ಸಂಬಂಧಗಳಂತಲ್ಲ.  ಒಂದು ಸಾರಿ ಅಳಿಸಿಹಾಕಿದರೆ, ಮುರಿದುಹಾಕಿದರೆ ಮತ್ತೆ ಎಂದೂ ಸಿಗದೇ ಇರುವ ಹಾಗೆ.

ಮನುಷ್ಯ ಇರುವವರೆಗೆ ಮಾತ್ರ (ಅದರಲ್ಲೂ ದುಡಿದು ಯಾರಿಗಾದರೂ ಅನ್ನ ಹಾಕುತ್ತಿದ್ದರೆ ಮಾತ್ರ) ಮನುಷ್ಯ. ಸತ್ತ ಮೇಲೆ ಯಾವಾಗ ಸಾಗ ಹಾಕುವುದೋ ಎಂದು ಕಾತರ ಎಲ್ಲರಿಗೂ.  ಮನೆಯಲ್ಲಿ ಕ.ಬು.ಕ್ಕೆ ಹಾಕಿದ ಕಸ ಹೊರಚೆಲ್ಲುವುದಕ್ಕಿಂತ ಮೊದಲು ಸತ್ತ ಹೆಣವನ್ನು ಸಾಗಿಸುವ ಕೆಲಸವಾಗಬೇಕು.  ಅಂದರೆ ಸತ್ತ ಮೇಲೆ ಮನುಷ್ಯ ಕಸಕ್ಕಿಂತ ಕಡೆ.  ಅಂಥ ಕಡೆಯ ಕಸವನ್ನು ಬಚ್ಚಿಟ್ಟುಕೊಳ್ಳುವ ಕ.ಬು. ಸ್ಮಶಾನ ಭೂಮಿ.  ಈ ಸ್ಮಶಾನ ಭೂಮಿ ಅನೇಕಾನೇಕ ರೋಗಗಳು ಬರದಂತೆ ತಡೆಗಟ್ಟಿದ, ಇಡೀ ಮಾನವ ಕುಲ ಉಳಿಯುವಲ್ಲಿ ಸಹಕರಿಸಿದ ಪುಣ್ಯಭೂಮಿ. ಅದೇನು ಕಸದ ಬುಟ್ಟಿಗೆ ಕಡಿಮೆಯೇ?

ಇನ್ನು ಮುಂದಿನ ನಂಬರು ನಮ್ಮ ಸರ್ಕಾರ ತಯಾರು ಮಾಡುವ ಯೋಜನೆಗಳು.  ಸ್ವಾತಂತ್ರ್ಯ ಬಂದಾಗಿನಿಂದ ಲೆಕ್ಕ ಹಾಕುತ್ತ ಹೋದರೆ ನಮ್ಮ ಸರ್ಕಾರಗಳು ಜಾರಿಗೆ ತರಲು ಪ್ರಯತ್ನಿಸಿದ ಯೋಜನೆಗಳು ಸಾವಿರಾರು.  ಯಾವುದನ್ನೂ ಸರಿಯಾಗಿ ಜಾರಿಗೆ ತರಲಾಗದೇ ಶ್ರೀಸಾಮಾನ್ಯನಿಗೆ ದೊರಕಬೇಕಾದ ಯೋಜನಾ ಸವಲತ್ತುಗಳೆಲ್ಲ ರಾಜಕಾರಣಿಗಳ, ಮಧ್ಯವರ್ತಿಗಳ ಸಂಬಂಧಿಗಳಿಗೆ ದೊರಕಿ ಕೊನೆಗೆ ಈ ಯೋಜನೆ ತನ್ನ ಧ್ಯೇಯೋದ್ದೇಶಗಳನ್ನು ಮುಟ್ಟಲು ವಿಫಲವಾಗಿದೆ ಎಂದು ಕಸದ ಬುಟ್ಟಿಗೆ ಸೇರಿದ ಉದಾಹರಣೆಗಳು ಎಷ್ಟಿಲ್ಲ?  ಅದೇ ರೀತಿ ಸರ್ಕಾರ ಕಸದ ಬುಟ್ಟಿಗೆ ತುಂಬುವ ಮತ್ತೊಂದು ರೀತಿಯ ಕಸವೆಂದರೆ ರಾಜಕಾರಣಿಗಳು ಮಾಡುವ ಹಗರಣಗಳು.  ಯಾರು ಎಷ್ಟೇ ಗುದ್ದಾಡಿ ಹುಡುಕಿ ತೆಗೆದರೂ, ಸಿಬಿಐ, ಪೊಲೀಸರು ಎಷ್ಟೆಲ್ಲ ವಿಚಾರಣೆ ಮಾಡಿದರೂ, ನಮ್ಮ ನ್ಯಾಯಾಲಯಗಳೆಲ್ಲ ಅಗಣಿತ ತೀರ್ಪುಗಳನ್ನು ನೀಡಿದರೂ ಅದು ಕೊನೆಗೆ ಸೇರುವ ಜಾಗ ಕ.ಬು.ವೇ.  ನಂತರದ ನಂಬರ ಬಿಲ್ ಗಳು   ಅದೆಷ್ಟು ತರದ ಕಾನೂನುಗಳನ್ನು ಮಾಡಲು ಸರಕಾರ ವಿಧಾನಸಭೆಯಲ್ಲಿ ಮಂಡಿಸಲಾಗುವ ಅನೇಕ ತರದ ಅಗಣಿತ ಬಿಲ್ಗಳೂ ಕೊನೆಗೆ ಸೇರುವುದು ಕಸದ ಬುಟ್ಟಿಯನ್ನೇ.  ಅದಕ್ಕೆಂದೇ ಎಲ್ಲ ವಿಧಾನಸೌಧಗಳ ಮುಂದೆ ಅಥವಾ ಹಿಂದೆ ಅದೇ ಗಾತ್ರದ ಕಸದ ಬುಟ್ಟಿ ಮಾಡುವುದು ಇಂದಿನ ವೊದಲ ಅವಶ್ಯಕತೆ.

ಕಸದ ಬುಟ್ಟಿ ಸೇರುವ ಇನ್ನೊಂದು ಮಹತ್ವದ ವಸ್ತುವೆಂದರೆ ನಮ್ಮ ತತ್ವಗಳು/ ಮೌಲ್ಯಗಳು.  ಇವೂ ಕೂಡ ಕಸದ ಬುಟ್ಟಿಯ ಬೇಡಿಕೆಯನ್ನು ಹೆಚ್ಚಿಸಲು ಬಹುಮಹತ್ವದ ಕಾರಣ.  ತತ್ವ ಹಾಗೂ ಮೌಲ್ಯಗಳ ಕಾಗುಣಿತವನ್ನೇ ಮರೆತು ಇಂದು ಸ್ವಾರ್ಥವೇ ಯಶಸ್ಸಿನ ಮೂಲ ಮಾನದಂಡ ಎಂದು ಜಗತ್ತನ್ನು ಕಲುಷಿತಗೊಳಿಸುತ್ತಿದ್ದೇವೆ.  ಕಸವನ್ನೇ ರಸವೆಂದು ಶೃಂಗಾರ ಮಾಡಿಕೊಂಡಿದ್ದೇವೆ ನಮ್ಮ ಮನೆಯನ್ನು, ನಮ್ಮ ಮನವನ್ನು ಮತ್ತು ನಮ್ಮ ಜಗವನ್ನು.

ಕಸವೆಂಬುದು ಬರಿ ಕಸವಲ್ಲವೋ, ಅದು ಮನುಜರ ಜೀವನದ ಗೂಢಾರ್ಥವು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎಂದೆನಿಸುತ್ತದೆ.

ನಾನಿನ್ನು ಓಡುವೆ.  ಯಾರು ಒದೆಯಲು ತಯಾರಾಗಿ ನಿಂತಿದ್ದಾರೆ ಎಂದು ನನಗೆ ಗೊತ್ತಿಲ್ಲ.

ಶನಿವಾರ, ಜೂನ್ 2, 2012

ನಾಯಕ


ಸೂರ್ಯ ಬಂದದ್ದೇ ತಡವಾಗಿ,
ನಮ್ಮನೆಯ ಗ್ರಿಲ್ ಮುರಿದು
ತುಡುಗಾಗಿ ಹೋಗಿ,
ಹರೆಯದ ಹೆಣ್ಣು ಬೊಬ್ಬಿಟ್ಟು ಕೂಗಿ
ಗಟಾರಿನಲ್ಲೆಲ್ಲ ರಕ್ತವೇ ಹರಿದೋಗಿ,
ಹುಲ್ಲ ಮೇಲಿನ ಮಂಜೆಲ್ಲಾ ಕರಗಿ
ಸೂರ್ಯಾ ಬಂದದ್ದೇ ತಡವಾಗಿ.

ಹಕ್ಕಿಸಂಕುಲವೆಲ್ಲ, ಪುಷ್ಪರಾಜಿಗಳೆಲ್ಲ
ಕೌತುಕದಿ ಕಾದು,
ಹೆಣ್ಣು ನೀರುಗ್ಗಿ ರಂಗೋಲಿ ಹಿಡಿದು
ಹೊಟೇಲು, ಬೂತಿನ ಮಾಲೀಕರೆಲ್ಲ
ಸ್ನಾನ ತಿಂಡಿ ಮಾಡಿ
ರೈತ ನೇಗಿಲು ಹೊತ್ತು ಎತ್ತುಗಳ ಹೂಡಿ
ಕೋಳಿ ಕೂಗಿ ಕೂಗಿ ಬೆಚ್ಚಿ
ಜಗದ ಕಂಗಳೆಲ್ಲ ತೆರೆತೆರೆದು ಮುಚ್ಚಿ
ವರ್ಷ ವರ್ಷ ಉರುಳಿ
ಸೂರ್ಯಾ ಬಂದದ್ದೇ ತಡವಾಗಿ.

ಬಂದವನೇ ಬೆಳಕಿನ ಕಾಲರಿಗೆ ಕೈಹಾಕಿ
‘ಯಾಕಯ್ಯೋ ನನಗಿಂತ ಲೇಟಾಗಿ ಬಂದಿ.’

ಏರಿ, ಮೇಲೇರಿ
ಗುಡ್ಡ ಬೆಟ್ಟ ಕಣಿವೆ ಕಾಡುಗಳ
ಹೊಕ್ಕಲಾರದೆ ಬೆವರಿ,
ಅಡ್ಡಡ್ಡ ಬರುವ ಮೋಡನ
ಸೈರಿಸಲಾಗದೆ ಕೆರಳಿ
ಏರುವ ಭ್ರಮೆಯಲ್ಲಿ
ಇಳಿಯುತ್ತಾ ಸಾಗಿ,
ಕೈಲಾಗದ ಹತಾಶೆಗೆ ತಲೆ ಚಚ್ಚಿಕೊಂಡು
ಚೆಲ್ಲಿದ ರಕ್ತ ಕಂಡು ಅಳುತ್ತ ಕೂತ.

ಸೂರ್ಯಾ ಬಂದದ್ದೇ ತಡವಾಗಿ.

ಶುಕ್ರವಾರ, ಮೇ 18, 2012

ಸಾಯುವ ದಿನ

ಸಾವು ಸಂಪದ್ಭರಿತವಾಗಿರಬೇಕು
ದುಗುಡದಲೇ ಕೈಹಿಡಿದು ಕುಳಿತವಳ
ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ.

ಪ್ರಕೃತಿ ಮಡಿಲಿನ ಸೂರಿನ ಎದುರು
ಬೆಳೆದು ನಿಂತ ಪಚ್ಚೆ ಪೈರಿನ ಮಧ್ಯೆ
ಹೊಂಬಣ್ಣದ ಸೂರ್ಯನ ರಶ್ಮಿಕಿರಣ
ಮಂಜಿನ ಹನಿಗಳಲಿ ಚಿತ್ರಿಸಬೇಕು ಕಾಮನಬಿಲ್ಲು.

ಭಾವಸ್ಫುರಣದಿಂದ ಬಗೆತೆಗೆದ
ಕಾವ್ಯಸಂಕುಲವೆಲ್ಲ ಹಾಡಾಗಿ
ಕೋಗಿಲೆಯ ತುಟಿಗಳಲಿ ನಲಿದಾಡಬೇಕು.

ಮಾನವ ನವನಾಗಿ ಮಾನವಂತನಾಗಿ
ಮನದ ಒಳಗಣ ಭಾವಕೆ ತಲೆದೂಗಬೇಕು.

ರಾತ್ರಿಯ ಮರೆಯಲ್ಲ್ಲಿ ಕುಣಿಯುವ ಕ್ರೌರ್ಯ
ಸುಟ್ಟುಹೋಗಲಿ ಅರುಣನಗ್ನಿಸ್ಪರ್ಶಕೆ
ಬೆಳಗಿಗೂ ಬೈಗಿಗೂ ಇರಲಿ ಒಂದೇ ಅಂತರ
ರವಿಯಿಂದ ಕಡ ತಂದು ಬೆಳಗಲಿ ಚಂದಿರ.

ಎಳೆಕಂದಮ್ಮಗಳ ಜನ್ಮವಿತ್ತ ತಾಯ
ಮೊಲೆವಾಲುಂಡ ಹಾಲ್ದುಟಿಯಲಿ ಸೂಸಿದ
ಮಂದಹಾಸದಲಿ ಕರಗಿ ಹೋಗಲಿ ನೋವು.

ನೋಡಬೇಕೆಂದೆನ್ನ ದೂರದಿಂದ ಬಂದವರ
ಕಾಡಕೂಡದು ಹೊಗೆ, ಧೂಳು, ದಟ್ಟಣೆ.

ಕಾಡಕೂಡದು  ಸಾವು ಹಾದಾಡುವ ಹಾದಿಯಲಿ
ಚಾಕು ಚೂರಿ ಬಂದೂಕಿನ ಗುಂಡಿನಲಿ
ನಂಬಿಕೆಗೆ ಉರಿಹತ್ತಿ ನೆರೆಯವರ ಹಗೆಗಳಲಿ
ನೆಲದ ಹಂಚಿಕೆಗಾಗಿ ರಕ್ತ ಹಂಚಿಕೊಂಡವರಲಿ
ಕುರುಡು ಕಾಂಚಾಣದ ಮತಿಭ್ರಮಿತ ಆಶೆಯಲಿ
ಮೂರು ನಿಮಿಷದ ಸುಖದ ವ್ಯಗ್ರ ವ್ಯಾಮೋಹದಲಿ.

ತುತ್ತು ಕೂಳಿಗಾಗಿ ಕಳೆಯಕೂಡದು ಮಮತೆ
ತುಳಿಯಕೂಡದು ವಾಮನ ತೊಳೆಯಿಲ್ಲದ ಮನೆಯ.

ಹುಟ್ಟು ಕಟ್ಟದಿರಲಿ ಪ್ರತಿಭೆಗೆ ಚಟ್ಟ
ನರ್ತಿಸುವ ನವಿಲು ಹಾಡುವ ಕೋಗಿಲೆ
ತಮ್ಮ ಚರಿತ್ರೆಯ ಹೇಸುವ ದಾರಿದ್ರ್ಯ ಬರದಿರಲಿ.

ಒಲವು ಹರಡಲಿ ಪ್ರತಿ ಮೊಳಕೆಯಲಿ
ಸಂತಸ ಮೊಳಗಲಿ ಮಾತು ಮಾತುಗಳಲಿ
ರಟ್ಟೆ ಸಿಗಲಿ ಕಣ್ಣಿಲ್ಲದ ಪ್ರತಿ ಜೀವಕೆ
ಹೊಟ್ಟೆ ತುಂಬಿ ಜೀವನ ಉಳಿಯಲಿ ಬಾಳಿಗೆ..

                                   ....ಪ್ರೀತೀಶ.

ಭಾನುವಾರ, ಮೇ 13, 2012

ಸೌಂದರ್ಯ

ನಿನ್ನ ಹಿಂದೆ ನಡೆದು ನಿನಗೆ ಗೊತ್ತಿಲ್ಲದೇ
ನಿನ್ನ ಸೌಂದರ್ಯವ ಸವಿಯಬೇಕೆಂದರೆ
ಜಾರಿಬಿದ್ದೆ...

ನೀನು ನಡೆದುಹೋದೆ ಎಂದು ಪುಳಕಗೊಂಡು
ರಸ್ತೆ ಬೆವರು ಬಿಟ್ಟು ಜಾರು ಜಾರಾಗಿತ್ತು.

ನಿನಗೆ ಗುಲಾಬಿ ಹೂವ ಕೊಡಬೇಕೆಂದು
ಉದ್ದನೆ ಗುಲಾಬಿ ಕಡ್ಡಿಯನ್ನೆತ್ತಿಕೊಂಡರೆ
ಪಳಪಳನೆ ಮುಳ್ಳುಗಳೆಲ್ಲ ಮೊಗ್ಗಾಗಿ 
ಕಡ್ಡಿ ದಾರವಾಗಿ ಎಲೆಗಳೆಲ್ಲ ಚಿತ್ತಾರದಂತೆ
ಮುದುಡಿ ತಾವು ತಾವೇ ಪೋಣಿಸಿಕೊಂಡು
ಜಗದೇಕ ಸುಂದರ ಮಾಲೆಯಾದವು.

ನಿನ್ನ ಅಂದವನ್ನು ಹಾಡಿನಲ್ಲಿ ಬಂಧಿಸಿ
ಈ ಜಗತ್ತಿಗೆ ತೋರಿಸಬೇಕೆಂದರೆ
ಕವಿತೆ ತನಗೆ ಒದಗಲಾರದ ಸಾಧನೆಯೆಂದು
ತಪ್ಪಿತಸ್ಥ ಭಾವನೆಯಿಂದ ಸಹ್ಯಾದ್ರಿ ಮಧ್ಯದಲ್ಲಿ
ಸೂಜಿ ಸೈಜಿನ ತೂತು ಕೊರೆದು
ಭೂಮಿಯ ಮಟಾ ಮಧ್ಯದಲ್ಲಿ
ಇಳಿದು ಅಡಗಿಕೊಂಡಿತು.

ಸೇವಂತಿಗೆ, ಮೀನು, ತೊಂಡೆಹಣ್ಣು,
ಜಿಂಕೆ, ಬಾಳೆಯ ದಿಂಡು, ಸಿಂಹ,
ಕಾರ್ಮೋಡ, ಕಾಮನಬಿಲ್ಲು, ಕಿತ್ತಳೆ,
ದ್ರಾಕ್ಷಿ, ಕಮಲಪುಷ್ಪ, ಭೆಂಡಿ, ಹಾಲು,
ಚೊಗಚಿ, ನವಿಲು, ಚಂದ್ರ, ದಾಳಿಂಬೆ,
ಕೋಗಿಲೆ, ಹೂವಿನ ಎಸಳುಗಳನೆಲ್ಲ
ತಾಸುಗಟ್ಟಲೆ ಕಾಡಿ ಬೇಡಿ, ಅಸೆ ಅಮಿಷ
ತೋರಿಸಿ, ನಮಿಸಿ, ಹುಡದಿ ಮಾಡಿ ಕೇಳಿಕೊಂಡೆ - 
ನನ್ನ ಹುಡುಗಿಯ ವರ್ಣಿಸಲು ಬನ್ನಿ ಎಂದು
ಜಪ್ಪಯ್ಯ ಎಂದರೂ ಒಬ್ಬರೂ ಬರಲಿಲ್ಲ
ಅವಳಿಂದ ನೂರು ಫೂಟು ದೂರ ನಿಲ್ಲುವ
ತಾಕತ್ತು ಇಲ್ಲದವರು ನಾವೆಂದು..

ನಿನ್ನನೆ ಒಯ್ದು ಜಗತ್ತಿಗೆಲ್ಲ ಸೌಂದರ್ಯ
ಉಣಬಡಿಸಬೇಕೆಂದರೆ ಬಿಸಿಲು ಮಳೆ
ಚಳಿಗಳಲ್ಲಿ ನೀನು ಬಳಲಿ ಬೆಂಡಾಗಿ,
ಸೌಂದರ್ಯ ಕುಂದಿ ಕವಿತೆಗೆ ವಸ್ತುವಿಲ್ಲದೆ
ನಿರ್ನಾಮವಾಗುತ್ತೆ ಎಂದು ಹೆದರಿಸಿ
ಕರುಣೆ ಹುಟ್ಟಿಸಿದಾಗ,
'
ಕಿಂಚಿತ್ತಾದರೂ ಅವಳ ಚಂದ ಜಗತ್ತಿಗೆ ದಕ್ಕಲಿ'
ಎಂದು ನಿಮ್ಮ ಮುಂದೆ ಬಂದಳು..

....ಪ್ರೀತೀಶ

ಶನಿವಾರ, ಏಪ್ರಿಲ್ 14, 2012

ಚುಟುಕು

ಹೈಹೀಲ್ಸ್
ತೊಟ್ಟುಕೊಂಡು
ನಡೆದದ್ದು
ನೀನು,
ಎಡವಿ
ಬಿದದ್ದು
ನಾನು..

....ಪ್ರವೀಣ.

ಭಾನುವಾರ, ಏಪ್ರಿಲ್ 1, 2012

ADD 100 YEARS TO THE WORLD


My son turns seven
And I don't even know
It was only some days ago
That you mesmerised me
By arriving on my lap
And I was awestruck
At the imagination of NATURE..

You grow every moment
You learn every curiosity
You forgive every mistake
You jump at every excitement
You laugh at every wonder
And I wonder at the possibility..

You add years every day
And I lose days every year..

Wish you all the happiness,
Curiosity and Imagination
And you add 100 years
To the World and
Let the Universe sing

HAPPY BIRTHDAY TO YOU
HAPPY BIRTHDAY TO YOU
HAPPY BIRTHDAY TO YOU DEAR SALIL
HAPPY BIRTHDAY TO YOU

ಭಾನುವಾರ, ಮಾರ್ಚ್ 25, 2012

ಇದು ನಾನಲ್ಲ..

ವರುಷಗಳೇ ಉರುಳಿ ಹೋಗಿ
ಕನ್ನಡಿಯ ಎದುರಿಗೆ ನಿಂತ ಒಡನೆ
ಹೊಳೆದದ್ದು ಎರಡೇ ಪದ
ಇದು ನಾನಲ್ಲ...

ಅಡ್ಡಾದಿಡ್ಡಿ ಬೆಳೆದ ದಾಡಿ
ಮೂಗ ಹೊಳ್ಳೆಯಿಂದ ಅಸಹ್ಯ ಕೂದಲು
ಗುಳಿ ಬಿದ್ದ ಕಣ್ಣುಗಳಲ್ಲಿ ಹೇಸಿಗೆ ಪಿಚ್ಚು
ಶೋಕಿಗೆ ಇಳಿಬಿಟ್ಟ ಕೂದಲಲ್ಲಿ ಭಯದ ಜಿಡ್ಡು

ಭಾವನೆಗಳೆಲ್ಲ ಅಳಿದು ಹೋಗಿ
ಖಾಲಿಯಾದ ಟೈಯ ಎಡಭಾಗದಲಿ
ಫ್ಯಾನಿನ ಗಾಳಿಗೆ ಹಾರಾಡುವ ಅಂಗಿ
ಕೂಡ ಒಸರಿದ್ದು ಇದು ನಾನಲ್ಲ...

ಸೌಂದರ್ಯ ಕಂಡು ಭಯಬಿದ್ದು
ಗುಲಾಬಿ ಗಿಡದಲ್ಲಿ ಬರಿ ಮುಳ್ಳು ಕಂಡು
ಪ್ರೀತಿಯ ಪದ ಉಸುರುವ ಮುನ್ನ
ಗಣಿತದ ಸೂತ್ರಗಳ ನೆನಪು ಕಾಡಿ

ಜಗದ ಹೃದಯಸುಮವ ತಡಕಿ
ಗಾಳಿಯಲ್ಲೂ ಸಂಗೀತ ಹುಡುಕಿ
ಜಡಿವ ಮಳೆಯಲಿ ನೃತ್ಯ ಕಂಡ
ಮನಕೆ ಬೀಗ ಬಿದ್ದಿದೆ ಇದು ನಾನಲ್ಲ...

ಹರಿವೆಗುಂಟ ತೇಲಿದ ಎಲೆ
ಕಾಂಡಕೆ ಸುತ್ತಿಕೊಂಡ ಲತೆ
ಬೆಂಕಿಗೆ ಬೂದಿಯಾದ ಹಾಳೆ
ಬೆಳಕ ಹಿಂಬದಿಯ ನೆರಳು

ಬದುಕಿನ ಬಲಾತ್ಕಾರ ಸಹಿಸಿ
ಸಾವ ವಿರಹ ಬೇಗುದಿಲಿ ತೊಳಲಿ
ಪ್ರೀತಿ ಭಾವ ಕರುಣೆ ಕಮರಿ
ಬರಿ ಮಾಂಸ ಖಂಡಗಳ ಗೂಡಿದು ನಾನಲ್ಲ..

...ಪ್ರವೀಣ

ಮಂಗಳವಾರ, ಮಾರ್ಚ್ 13, 2012

ನಿರಾಶೆ

ಗೆಳೆಯ
ನೋಡಲೇ ಇಲ್ಲವೇ ನೀನು
ಹೊತ್ತಗೆಯ ನಡುಮಧ್ಯ ಅದೇ ಆಗ
ಅರಳಿದ ಆ ಗುಲಾಬಿ ಹೂವಂದವ?

ಯಾರೋ ಕೊಟ್ಟ ಹಾಗೆ
ತೆರೆಯದೆ ಇಟ್ಟುಬಿಟ್ಟೆಯಾ ಮಾಡಿನಲ್ಲಿ?

ಬೆಳಗಾ ಎದ್ದು ಊರೆಲ್ಲಾ ಅಲೆದು
ತೋಟಗಳ ಹೆಕ್ಕಿ ನಿನ್ನಂದಕೆ
ಸರಿಸಾಟಿ ಆ ಮಿದು ಗುಲಾಬಿ ಅಯ್ದಿದ್ದೆ
ಮುಳ್ಳುಗಳ ಮೆತ್ತಗೆ ಬಿಡಿಸಿ
ಹಾಳೆಗಳ ಮೆತ್ತೆಯಲ್ಲಿ ನಾಜೂಕಾಗಿ
ಪ್ರೀತಿಯರುಹಲು ಕಿವಿಯಲುಸುರಿ
ನಿನ್ನ ಕೈಯಲಿ ರವಾನಿಸಿದ್ದೆ.

ಪುಸ್ತಕ ದಪ್ಪವಾದದ್ದೂ ತಿಳಿಯಲಿಲ್ಲವೇ?
ಮಧ್ಯದ ಕುಳಿಯೂ ಕಾಣಲಿಲ್ಲವೇ?

ಗೆಳತಿ...
ಬಾಡಿ ಹೋಗಿರಬೇಕು ನನ್ನ ಹೂ
ನೀ ಹಿಡಿದ ಒತ್ತಡಕ್ಕೆ ನಲುಗಿ
ತೇವವೆಲ್ಲಾ ಕಳೆದು ಮುರುಟಿ
ಹಾಳೆಯಾಗಿರಬೇಕು ನನ್ನ ಹೂ
ಬಣ್ಣವೆಲ್ಲ ಹಾಳೆಗಂಟಿ
ಕಳೆಹೀನವಾಗಿರಬೇಕು ನನ್ನ ಹೂ

ಗೆಳತಿ
ಮುಚ್ಚಿಟ್ಟು ಕೊಟ್ಟೆಯಾ ಗೆಳೆಯಾ?
ಯಾರಿಗೂ ತೋರದಂತೆ
ಯಾರಿಗೂ ತಿಳಿಯದಂತೆ
ಮುಚ್ಚು ಮರೆಯ ಕೆಟ್ಟ ಕೆಲಸವೇ
ನನ್ನ ನಿನ್ನ ಪ್ರೀತಿ?

ಜಗದೆದುರು ಎದೆತಟ್ಟಿ
ಬಾನತುಂಬಾ ಕನಸ ಕಟ್ಟಿ
ಪ್ರೀತಿ ಮನವ ತುಂಬಲೆಂದಿದ್ದೆ.

ನನ್ನ ಹೃದಯ ಕದವ
ನೀ ತಟ್ಟಿದಾಗ ಪಟ್ಟನೆ
ಒಳಗೆ ಕರಕೊಳಲಿಲ್ಲವೇ ಗೆಳೆಯ?

ನಿನ್ನ ರಾಗಕೆ ತಾಳವಾಗಿ
ನಿನ್ನ ಚಿತ್ರಕೆ ಬಣ್ಣವಾಗಿ
ನಿನ್ನ ಕಾವ್ಯಕೆ ಉಪಮೆಯಾಗಿದ್ದೆ ನಾ.

ಪುಸ್ತಕ ಮಧ್ಯದ ಕುಳಿ ಕಂಡೊಡನೆ
ಮಮ್ಮಲ ಮರುಗಿತ್ತು ಮನವು
ಜಗಕೆ ಬೆಳಕು ಚೆಲ್ಲುವ ನೇಸರ
ಚಂದಿರನ ಹಿಂದೆ ಗ್ರಹಣ ಹೋದನೇ?

----ಪ್ರವೀಣ


ಶನಿವಾರ, ಮಾರ್ಚ್ 10, 2012

ಕಾಗೆಯ ಮಲ

















ಅರ್ಧ ಕಿಲೋಮೀಟರ್ ಸನಿಹ ಸೂರ್ಯ
ಸಾವಿರ ಕಿಲೋಮೀಟರ್ ದೂರ ಜೀವ
ಭೂಮಂಡಲದ ಮಟಾಮಧ್ಯದಲ್ಲಿ
ಬಟಾಬಯಲಿನಲಿ ಅಲೆಯುತಿದ್ದೆ
ದಿಕ್ಕುಗಳು ಮಿಥ್ಯೆಯೆಂದು ಸಾಧಿಸುತ

ತಲೆಯ ಮೇಲೆ, ಕಿವಿಗಳ ಮೇಲೆ
ಮೇಣ್ ಬೆನ್ನ ಮೇಲೆ ಪತ್ ಎಂದು ಬಿತ್ತು
ಬೆರಳಲಿ ಹಿಡಿದು ನೋಡಿದರೆ ಕಾಗೆಯ ಮಲ

ಅಖಂಡ ಬ್ರಹ್ಮಾಂಡವೆಲ್ಲ ಅಲೆದು
ಅತಳ ವಿತಳ ಪಾತಾಳಗಳ ಹೊಕ್ಕು
ಹುಡುಕಿ ತುಂಡು ತುಂಡು ಮಾಡುವವರೆಗೆ ನಿನ್ನ
ಹನಿ ನೀರ ಮುಟ್ಟಲಾರೆನೆಂಬ ಪಣ ತೊಟ್ಟೆ
ಆಕ್ರೋಶದಾ ಅತಿಶಯದ ಘಳಿಗೆಯಲಿ

ಮೇಲೆ ನೋಡಿದರೆ ಸೂರ್ಯನೇ ಏಕಾಂಗಿ
ಕಣ್ಣು ಹರಿದಷ್ಟು ದೂರ ಗಾಳಿಯ ಪತ್ತೆಯಿಲ್ಲ
ಸೋಲೆಂಬುದೆನ್ನ ನಿಘಂಟಿನಲೇ ಇಲ್ಲ
ತೊಟ್ಟ ಪಣ ಮುಟ್ಟುವವರೆಗೆ ನಿದ್ದಿಲ್ಲ ನೀರಡಿಕೆಯಿಲ್ಲ

ಗಿಡ ಮರ ಕೊಂಬೆ ಬಾಗಿಲು ಕಿಟಕಿ
ಗುಡಿ ಗುಂಡಾರ ಅಂಗಡಿ ಭಂಡಾರ
ನದಿ ತೊರೆ ಭಾವಿ ಸಾಗರದಾಳ
ಸೂರ್ಯ ಚಂದ್ರ ನಕ್ಷತ್ರ ಗ್ರಹಗಳ
ಮನುಜ ಮತಿಯ ಕಲ್ಪನೆಯ ತಾಣಗಳ
ಎವೆಯಿಕ್ಕದೆ ಬೆನ್ನು ಹಚ್ಚದೆ ಅರಸಿದೆ

ನಾಚಿಕೆಯಿಲ್ಲದ ಹಸಿವು ಮಾನವಿಲ್ಲದ ದಣಿವು
ಮಾತುಗಳ ಗೌರವವೆನಿತಿಲ್ಲದ ನೀರಡಿಕೆ
ಕಾಗೆಯ ವಿಳಾಸ ಸಿಗುವ ಮೊದಲೇ
ನನ್ನ ಪ್ರಾಣ ತೆಗೆವ ಸಂಚು ಹೂಡಿದಂತೆ
ಧಸಕ್ಕನೆ ಮನೆಯೆಂಬೋ ಮನೆ ಸೇರಿದೆ

ಹಿತ್ತಲ ತುಂಬೆಲ್ಲ ಮಲ ಚೆಲ್ಲುವ
ಅಜ್ಜ ನೆಟ್ಟ ಮರಗಳ ಗಾಳಿಯ ಬಯಕೆಗೆ
ಮೆತ್ತಗೆ ಹಿತ್ತಿಲವಾಗಿಲ ತೆರೆದರೆ
ಕರಗಸದಂತೆ ಕೂಗುತಿಹ ಕಾಗೆಗಳ ಸೈನ್ಯ
ತಿಂದ ಸಿಟ್ಟೆಲ್ಲ ಹೊಟ್ಟೆಯಿಂದ ಹೊಡಮರಳಿ
ಎತ್ತಿದರೆ ಕತ್ತಿ ತಲೆ ಸುತ್ತಿ ಬವಳಿ

ತಲೆಯ ಮೇಲೆ ಹೇತ ಕಾಗೆಯ
ಗುರುತೆಲ್ಲಿ ಇಹುದೆನ್ನ ಬಳಿ

-------
ಫ್ರಿಜ್ಜಿನ ಬಾಗಿಲ ತೆಗೆದು
ಮಂಜುಗಟ್ಟಿದ ಬಾಟಲಿ ಎತ್ತಿ
ಜನ್ಮಾಂತರಗಳ ನೀರಡಿಕೆಯ ಕೊಂದುಬಿಟ್ಟೆ.

...ಪ್ರವೀಣ

ಬುಧವಾರ, ಮಾರ್ಚ್ 7, 2012

ಜೀವನಗಾಥೆ

ಬಳಸಿ ಎಸೆದ ಪ್ಲಾಸ್ಟಿಕ್ಕಿನ ಚೀಲ
ಗಾಳಿಯ ಒತ್ತಡಕ್ಕೆ ಸಿಲುಕಿ ಹಾರುತ್ತಾ
ಪರಿಧಿಯಿಲ್ಲದಂಬರದಲಿ ಏಕಾಂಗಿ

ಇರುವುದೆಲ್ಲವ ಕಳಚಿ
ಹಗುರವಾದರೆ ಹೀಗೆ
ನೆಲೆಯಿಲ್ಲ, ನೆಲದ ಅಕ್ಕರೆಯಿಲ್ಲ
ಗಾಳಿ ಒಯ್ದತ್ತ ತೂರಿ
ಮಳೆ ಹುಯ್ದತ್ತ ಕೊಚ್ಚಿ
ಕಳೇಬರವಾಗಿ ಕಳಕೊಂಡು ತನ್ನ

ಹೆತ್ತೊಡಲ ಹೊಟ್ಟೆಯಲಿ ಉಸಿರು
ಸಿಕ್ಕುವಂತೆ ಬಿಗಿದು, ಮೂಲೆಯ
ಮೊಳೆಗೆ ನೇತಾಕಿ, ಸಕ್ಕರೆ,
ಬೆಲ್ಲ, ಹಿಟ್ಟು, ಬಟ್ಟೆ, ತರಕಾರಿ,
ಹಣ್ಣು, ಕಾಯಿ, ಬಣ್ಣ, ಬಾಟಲಿ
ಕಿತ್ತು ಬರುವಂತೆ ಕತ್ತು
ಹೊತ್ತೊಯ್ದರೂ ಚಕಾರವೆತ್ತಿಲ್ಲ.
ಕೊರೆವ ಚಳಿಯಲಿ ಕಾಪಿಟ್ಟು,
ಮಗನ ಆಟಿಕೆಗಳ ಕುಟ್ಟಿ,
ಬೇಸರವೇರಿ ಹವೆಯೂದಿ
ಫಟ್ಟನೊಡೆವ ನೋವಿಗಾರ್ತನಾದ
ಕಸ ಮುಸುರೆ ತುರುಕಿ
ಕೊಳಚೆಗೆಸೆದರೂ ನೊಂದಿಲ್ಲ
ಕಾಯಕಗೈದ ಸಾರ್ಥಕತೆ ಮನದಲ್ಲಿ

ಇಂದು ಅಂತ್ಯವಿರದಂತರಿಕ್ಷದಲಿ
ಗೊತ್ತು ಗುರಿಯಿಲ್ಲದೆ ಹಾರುವ
ವಸ್ತು ಕಂಡು, ಮುದಗೊಂಡು
ಹಾರಿ ಬರುತಿಹ ಹಕ್ಕಿ
ಕೊಕ್ಕಿನಲ್ಲಿ ಕುಕ್ಕಿ ಫಡಫಡ
ಫರ್ರನೆಯ ನಾದಕೆ ಪುಳಕವಾಗಿ
ಹಾರಿಬಿಟ್ಟರೆ ನನ್ನ, ಇನ್ನೊಂದು
ಹಕ್ಕಿ ಬಂದು, ಹಾರಿ ಚೆಲ್ಲುವಾಟ
ಸಾವಿನ ನೆನಪಾಗದೆ ಇಹುದೇ?

ಮರಣವೂ ಇಲ್ಲ ಕೊನೆಗೆ
ತುಂಡು ತುಂಡಾಗಿ ಸುಟ್ಟು
ಕೊಳಚೆಯಲಿ ಕೊಚ್ಚಿ
ಪರಿಸರ ಮಾಲಿನ್ಯದ ಪಟ್ಟ ಬೇರೆ!

----ಪ್ರವೀಣ.

ಶುಕ್ರವಾರ, ಮಾರ್ಚ್ 2, 2012

ಮೂರು ವರುಷದ ವಿರಹ

ಭುವಿಯ ರಾಜ್ಯದ ತುಂಬಾ
ಸೂರ್ಯನದೇ ದಬ್ಬಾಳಿಕೆ
ಇನಿಯನಾಸರೆಯಿಲ್ಲದೆ ಬೇಸರಿಸಿ
ಪಚ್ಚೆ ಪೈರಿನ ಜಾಗದಲಿ
ಮುರುಟಿ ಹೋದ, ತೇಪೆ ಮೆತ್ತಿದ
ಹರಿದು ಹದಿನಾರಾದ ಸೀರೆ,
ಮನವೆಲ್ಲಾ ಮರುಗಿ, ಮೈಯೆಲ್ಲಾ ಸೊರಗಿ
ಚಕಚಕನೆ ಹೊಳೆವ ಚರ್ಮದ
ತುಂಬಾ ಲಕ್ಷಾಂತರ ಬಿರುಕುಗಳು.

ಕಾದಿಹಳು ಕಾಲನಕಾಲ ಮೃತ್ಯುವಿನವರೆಗೂ
ನೊಂದಿಹಳು ಮಕ್ಕಳ ಹೊಟ್ಟೆಗೂ ಇಲ್ಲದೆ
ಪ್ರಿಯನಿಲ್ಲದೆ ಪರಪೀಡೆಯನನುಭವಿಸುತ
ಕಣ್ಣೀರು ತುಂಬಿ ಹರಿದಿಹುದು ಇಳೆತುಂಬಾ.

ನಂಬುಗೆಯುಂಟು ಬಂದೇ ಬಹನವನು
ಸೂರ್ಯನ ಶಾಖ ಸಂಕುಲದಿಂದೆನ್ನ
ಬಿಡಿಸಿ, ಒಲವಿನ ಮಳೆಗರೆದು
ಮನತುಂಬಾ ಹೂಮಾಲೆಯಾಗುವನು.

ಸೂರ್ಯನಿಗೆ ಸೋತು, ಭುವನವ ತೊರೆದು;
ಸೈನ್ಯ ಒಗ್ಗೂಡಿಸಿ, ಇಡಿ ಇಡಿಯಾಗಿ
ಪಡಿಮೂಡಿ ಬಾನಿನಲಿ ಸೂರ್ಯನ
ಹುಟ್ಟಡಗಿಸಲು ಧೈರ್ಯದೆ ಬಂದಿಹನು ಮೇಘ.
ಕಲೆಯಿಂದ, ಮನದ ಬಲದಿಂದ
ಸೆಣಸಾಡಿ, ಭುವಿಯತ್ತ ಚಾಚಿದ
ಕೈಗಳ ಕಚಕಚನೆ ಕತ್ತರಿಸಿ
ಗೆದ್ದಾನು ಮೇಘ ಸೂರ್ಯನ ಬಂಧಿಸಿ.

ಕಲಕಲನೆ ನಕ್ಕಾಳು ಭೂಮಿ
ತನ್ನಿನಿಯನ ಮೊಗವನ್ನು ನೀವಿ
ಕರೆದಾಳು ಹೃದಯಮಂಟಪಕೆ...

ಮೂರು ವರುಷದ ವಿರಹ
ತಡೆಯಲಾಗದೆ ಬೇಗೆ
ಸಿಡಿಲಗೈಯಿಂದ ಚಿವುಟಿಹನು ತೊಡೆಯ
ಒಡನೆ ನೋವಿಗೆ ಗುಡುಗಿ
ಮುಲುಗಿಹಳು ಪೊಡವಿ
ತಪ್ಪಿಗೆ ಕಪ್ಪಿಟ್ಟು ಮೆಲ್ಲ ಕಚಗುಳಿಯಿಟ್ಟು
ರಮಿಸಿದನು ಸುಂದರಿಯ ಸಿಟ್ಟು
ನಾಚಿ ನೀರಾಗಿ ನಿಡುಸುಯ್ದು ಎಲ್ಲೆಲ್ಲೂ
ಮಣ್ಣ ಕಂಪನು ಸೂಸಿಹಳು ಧರಿಣಿ.

ಸಕಲ ಚರಾಚರಗಳೆಲ್ಲ
ಕೈಬೀಸಿ ಕರೆದಾವು,
ಬಾರಯ್ಯ ತಂದೆ
ಪ್ರೀತಿಯ ಮಳೆಗರೆಯೆ.

ಭಾವುಕ ಮೇಘ ಮೆತ್ತಗೆ
ಮುದ್ದಿಟ್ಟು ಮೈದಡವಿ
ಸಳಸಳನೆ ಸುಳಿದಿಹನು.
ಚುಂಬನ, ಆಲಿಂಗನ, ಬಾಹುಬಂಧನ.

ಅವನಿಯ ಮೈಮನಗಳೆಲ್ಲ ಅರಳಿ
ಬತ್ತಿದ ಮೊಲೆಗಳಲಿ ಹಾಲು ತುಳುಕಿ
ಹರಿದ ನದಿಗುಂಟ ಜೀವಸಂಕುಲವೆಲ್ಲ
ಮನದಣಿಯೇ ಕುಡಿದು ಕುಪ್ಪಳಿಸಿ

ಉಲಿದಾವೋ ಹಕ್ಕಿ
ನಲಿದಾವೋ ನವಿಲು
ಖಗ ಮೃಗಗಳೆಲ್ಲ
ಬಾನಂಗಳಕೆ ನೆಗೆದಾವೋ.

ಒಲುಮೆಯ ಹಬ್ಬ
ಕಳುತನದಿ ಈಕ್ಷಿಸಿದ
ಸೂರ್ಯ ಬಣ್ಣ ಬಣ್ಣದ
ಓಕುಳಿಯಾ ಆಡ್ಯಾನೋ.
=======
ಮರುದಿನ ಪ್ರೀತಿಯದು ಫಲಿಸಿ
ಕೋಟಿಕೋಟಿ ಜೀವಿಗಳು ಚಿಗುರಿಹವು
ತಿರೆಯ ಬೆತ್ತಲೆ ಮೈಗೆ
ಹಚ್ಚ ಹಸುರಿನ ಸೀರೆಯ ಉಡಿಸಿಹವು.
....ಪ್ರವೀಣ.

ಶುಕ್ರವಾರ, ಫೆಬ್ರವರಿ 24, 2012

ಒಂದು ಹನಿ ಅಮೃತ

ಒಂದು ಹನಿ ಅಮೃತ
-----------------

ಬ್ರಹ್ಮಾಂಡವೆಲ್ಲಾ ಅಲೆದು
ಬಳಲಿ ಬೆಂಡಾಗಿ ಬಂದ ಮನಕ್ಕೆ
ಕಂಡಿದ್ದು ನೀನು....

ವೀಳ್ಯೆದೆಲೆ, ಸುಣ್ಣ, ಕಾಚು,
ಅಡಿಕೆಯನ್ನು ಮಡಚಿ
ಆಲಸಿ ಮಧ್ಯಾಹ್ನದಲಿ
ಕಟ್ಟೆಯ ಮೇಲೆ ಕುಳಿತು
ಮೆಲ್ಲಿದಂತಾಹ್ಲಾದಗೊಂಡಿತು.

ಬಾಗಿಲು ತಟ್ಟಿ ಒಳಬಂದ
ಕೋಗಿಲೆಯ ನಿನಾದಕೆ
ದಿಟ್ಟಿ ನೆಟ್ಟಿದ್ದು ನಿನ್ನ
ಕಣ್ಣ ಒಳಗೆ ಸಿಕ್ಕ ಕೂದಲಲಿ

ಓದಬೇಕೆಂದುಕೊಂಡರೆ
ಅಂಗಳ, ಗೋಡೆ, ಬೀದಿ,
ಸರ್ರನೆ ಜಾರುವ ಕಾರುಗಳು,
ಕಂಬ, ಸಂಬಂಧಗಳೆಲ್ಲ
ಚೀರಾಡಿಬಿಟ್ಟವು...

ನಿನ್ನ ಮನದ ಭಾವಗಳೆಲ್ಲ
ಚದುರಿ, ಸಿಡಿದದ್ದೊಂದು
ನೆಟ್ಟಿತು ಎನ್ನ ಎದೆಯ ಒಳಗೆ.
ಕಿತ್ತು ತೆಗೆದರೆ ಒಸರಿದ್ದು
ರಕ್ತವಲ್ಲ, ಒಂದು ಹನಿ ಅಮೃತ

ಸುವಾಸನೆಗೆ ಮನವೆಲ್ಲಾ
ಘಮಫಮನೆ ಅರಳಿತು.

.....ಪ್ರವೀಣ

ಸೋಮವಾರ, ಫೆಬ್ರವರಿ 20, 2012

ಸೂತ್ರ


ನಾಳೆಯ ಉಳಿಕೆಗಾಗಿ
ಇಂದು ಭಗ್ಗನೆ ಉರಿದು
ಭಗ್ನಗೊಂಡಿತು ಮನವು

ನಾಳೆಯ ನೆಗಡಿಗೆ ಬೆದರಿ
ಇಂದಿನ ಮಳೆಯಲಿ ನೆನೆಯದೆ
ಶುಷ್ಕವಾಯಿತು ಹೃದಯ

ಇಂದು ಮತ್ತೆಂದೂ ಬರದು
ಬಂದ ಅನುಭವ ಉಂಡು
ತೇಗುವುದಷ್ಟೇ ಸಿರಿತನ

ನೆನ್ನೆಯನು ಕುಕ್ಕಿಸದೆ
ನಾಳೆಯನು ಲೆಕ್ಕಿಸದೆ
ಇಂದು ಉಕ್ಕಿದುದೆ ಗೆಳೆತನ

ನೆನ್ನೆಯ ಉತ್ತರ ಕಂಡು
ನಾಳೆಯ ಪ್ರಶ್ನೆಗಳಿಗೆ
ಸೂತ್ರ ಕಟ್ಟಿದ್ದು ಇಂದು

ನೆನ್ನೆ ಕಳೆದ ಸಿಂಧು
ನಾಳೆ ಆಶಿಸುವ ಬಿಂದು
ಎರಡರ ಸಂಧಿ ಇಂದು

ಭೂತಗಳಿಗೆ ಹೆದರದೆ
ಭವಿಷ್ಯತ್ತಿನಲ್ಲಿ ಕಳೆಯದೆ
ಇಂದು ಆನಂದದಿ ತೇಲಲಿ

ನೆನ್ನೆಯ ಮಧುರ ನೆನಪು
ನಾಳೆಯಭ್ಯುದಯದ ಕನಸು
ಇಂದಿನ ದಿನವನು ರೂಪಿಸಲಿ.

...ಪ್ರವೀಣ.

ಶುಕ್ರವಾರ, ಫೆಬ್ರವರಿ 17, 2012

ಅಲೆಮಾರಿಗಳು ನಾವೆಲ್ಲಾ


ಅಲೆಮಾರಿಗಳು ನಾವು....

ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು
ಗಡಿಯಿಲ್ಲ, ಗುಡಿಯಿಲ್ಲ,
ಮಡಿಯಿಲ್ಲ, ದಮ್ಮಡಿಯಿಲ್ಲ

ಲಕ್ಷಾಂತರ, ಕೋಟ್ಯಾಂತರ
ಹಾಳಾಗಿ ಹೋದಾಗಲೇ
ಫಳಫಳನೆ ಹೊಳೆವೊಂದು
ಕುಳ ಇಳೆಗೆ ಇಳಿವುದು

ಹುಟ್ಟಿದ್ದೇ ಊರು
ಸಾಗಿದ್ದೆ ದಾರಿ
ತಲುಪಿದ್ದೆ ಗುರಿ
ನಾನೀನೆಂಬ ಹಮ್ಮಿಲ್ಲ ಬಿಮ್ಮಿಲ್ಲ

ಹೊಟ್ಟೆಗೆ ಹೊಟ್ಟೆಯನಂಟಿಗೆ
ತೃಷೆಯಾಗಿ, ಸರಿ ತಪ್ಪು
ಬಗೆಯದೆ, ತಿರೆಯಲೆದು
ತೃಪ್ತಿ ಕಂಡೇವು

ಅಲೆಮಾರಿಗಳು ನಾವು..

ಸೂರ್ಯನೇ ಸಿಟ್ಟಾಗಿ
ಗಗನಕೆ ದುಃಖಾಗಿ
ಗಾಳಿಯೇ ಸತ್ಹೋದ್ರೂ
ಸಿರಿವಂತಿಗೆ ಸೊರಗಿಲ್ಲ

ಹಿಂದೆ ನೆರಳಿಲ್ಲ
ಮುಂದೆ ಬೆಳಗಿಲ್ಲ
ಕ್ಷಣಕಾಲದ ಮಿಂಚಿಗೆ
ಜನ್ಮವೆಲ್ಲಾ ನಲಿದೆವು

ನೆಲದಲ್ಲಿ ಬೇರೂರಿ
ಕಾಂಡಗಳನೆಲ್ಲ ಚಾಚಿ
ಪರಸುಖವನಾಶಿಸದೆ
ಇಹದಲ್ಲೇ ಸಗ್ಗ ಕಂಡೇವು

ಅಲೆಮಾರಿಗಳು ನಾವು..
ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು

ಪ್ರವೀಣ..

ಗುರುವಾರ, ಫೆಬ್ರವರಿ 9, 2012

ಮತ್ತೆಲ್ಲಿ


ಮೋಸ ಮಾಡಿ ಕಾಗೆಯ
ಬಾಯಿಂದ ಮಾಂಸ ಲಪಟಾಯಿಸಿದ
ನರಿಯ ಚಾಣಾಕ್ಷ ಎಂದು
ಮೆಚ್ಚುವ ನಾವು..

ನಿಯಮಗಳನೆಲ್ಲ ಗಾಳಿಗೆ ತೂರಿ
ಸುಳ್ಳು ಹೇಳಿ, ಷಂಡನಡ್ಡ ತಂದು,
ರಾಜ್ಯದಾಮಿಷ ತೋರಿಸಿ ವಂಚನೆಯಿಂದ
ಯುದ್ಧ ಗೆಲುವ ಕಲೆ ಹೇಳಿಕೊಟ್ಟವನ
ದೇವರ ಮಾಡಿ ಪೂಜಿಸುವವರು ನಾವು..

ಸ್ನಾನದಲಿ ಮೈಮರೆತ ಹೆಂಗಳ
ಸೀರೆ ಕದ್ದವನ ಲೋಲುಪತೆಯನ್ನು
ಲೀಲೆಯೆಂದು ಹಾಡಿ
ಬಾಲ್ಯದಿಂದಲೇ ಕದಿಯುವ ಚಟದವನಿಗೆ
ವಿಶ್ವಕ್ಕೆ ಬುದ್ಧಿ ಹೇಳುವ ಪಟ್ಟ ಕಟ್ಟಿದವರು..

ಅರ್ಧಾಂಗಿಯನು ಅನುಮಾನಿಸಿ
ಮರೆಯಿಂದ ನಿರಾಯುಧನ ವಧಿಸಿದವನ
ಗುಣಗಾನ ಮಾಡಿ ಮುಕುತಿಗೆ
ಹಾತೊರೆಯುವ ನಾವು..

ಒಂದು ಸಾರಿ ಮುಳುಗೇಳುವುದರಿಂದ
ಜನುಮದ ಪಾಪಗಳನೆಲ್ಲ ತೊಳೆಯಬಹುದೆಂದು
ನಂಬುವವರು ನಾವು..

ತಿಂದ ಹಣದಲ್ಲೊಂದಿಷ್ಟು
ಭಾಗ ಹುಂಡಿಗೆ ಹಾಕಿದೊಡೆ
ಅನ್ಯಾಯಗಳ ಕ್ಷಮಿಸುವ
ದೇವನೊಬ್ಬನಿಹನೆಮಗೆ..

ಕೊಟ್ಟ ಮಾತಿಗೆ ತಪ್ಪದವನನು
ಮಸಣಕೆ ಕಾವಲು ನಿಲಿಸಿ
ಹೆಂಡತಿ ಮಕ್ಕಳನು ಜೀತಕೆ ಸೇರಿಸಿ
ಮಜವುಂಡು ತೇಗುವ ಮಹಿಮರು ನಾವು..

ಕರ್ಮಭೂಮಿಯಿದು......
ಇಲ್ಲಿಯಲ್ಲದೇ ಎಲ್ಲಿ ದೊರಕೀತು
ಭ್ರಷ್ಟಾಚಾರ?

ಭಾನುವಾರ, ಫೆಬ್ರವರಿ 5, 2012

ದಾರಿಗಳ ಬೆನ್ನು ಹತ್ತಿ


ಎದೆಯ ಸಾಗರದಲ್ಲಿ ಏಳುವ
ಬಿರುಗಾಳಿಗೆ ತಲೆಯ ಹಡಗು
ಮುಳುಗಿ ಹೋಗುತ್ತದೆ
ಮೂರ್ಖನನ್ನಾಗಿ ಮಾಡಿ ನನ್ನ..

ದಾರಿಗಳ ಬೆನ್ನು ಹತ್ತುತ್ತ
ನಾನು ಗುರಿಯನ್ನೇ ಮರೆತುಬಿಟ್ಟೆ
ಉತ್ತರ ಹೇಳುವುದರಲ್ಲಿ ಅಲ್ಲ
ಪ್ರಶ್ನೆ ಕೇಳುವುದರಲ್ಲಿ ಜ್ಞಾನ ಅಡಗಿದೆ..

ರಾತ್ರಿ ಹನ್ನೆರಡಕ್ಕೆ ಎಚ್ಚರವಾಗುವ
ನನ್ನ ಕವಿತೆಗೆ ಕೆಲಸದ ಮುಲಾಜಿಲ್ಲ
ದಿನವೆಲ್ಲ ಮಜವಾಗಿ ತಿಂದುಬಿಡುವ
ಕೆಲಸಕ್ಕೆ ಕವಿತೆಯ ನೆನಪಿಲ್ಲ..

ಕಾಲಕಾಲಕ್ಕೆ ಕಾಲುಗಳನ್ನು
ಬದಲಾಯಿಸದಿದ್ದರೆ ನಿನಗೇ ಉಳಿಗಾಲವಿಲ್ಲ
ಎಂದರು ಡಾಕ್ಟರು
ಆಹಾ ! ಎರಡೆರಡು ವರಗಳನ್ನು ಹೀಗೆ
ಒಮ್ಮೆಲೆ ಕೊಡಬೇಡಿ ಎಂದ ಪೇಶಂಟ್..

ಹೆಂಗೆ ಬಂದೆ ರೋಡಿಗೆ


ಸತ್ತು ಬಿದ್ದಿದ್ದನ್ನು ಬಡಿದು
ಕೈ ಕಾಲು ಹಿಡಿದು ಅಲುಗಾಡಿಸಿ
ಓಹೋ ನನ್ನ ಕವಿತೆ ಜೀವಂತವಿದೆ
ಎಂದು ಬೊಬ್ಬೆ ಹೊಡೆಯುವುದಕ್ಕೂ
ಮನದ ಸ್ವಚ್ಛಂದ ಛಂದದ
ಆಲಿಂಗನದೇ ಮತ್ತೇರಿ ಬರುವ
ಶಬ್ದಾರ್ಥಗಳ ಧಬಧಬೆಗೂ
ಅಜಗಜಾಂತರ ವ್ಯತ್ಯಾಸವಿದೆ..

ಒಳಗೊಳಗೇ ಕುಳಿತು ಕೊಳೆತು
ನಾರಿದರೂ ಸರಿಯೇ
ಅಯ್ಯೋ ಹಾಳಾಗುತ್ತಲ್ಲ ಅಂತ
ಗಟ್ಟಿ ಇರುವ ಕಾಯಿಗಳನ್ನು ಆರಿಸಿ
ಘಮಘಮಿಸುವ ಮಸಾಲೆಯಲ್ಲಿ
ಚಪ್ಪರಿಸಿ ತಿನ್ನುವ ಹಾಗೆ
ಕೊಳೆ ಬದನೆಪಲ್ಲೆ ಮಾಡುವ
ಕೈಚಳಕ ಕವಿತೆ...

ಒಣಗಿದರೂ ಒಗ್ಗರಣೆಗೆ ರುಚಿ
ನೀಡುವ ಕರಿಬೇವು ಕವಿತೆ..

ಹಾಗಂತ ಕವಿತೆಯ ಬಗ್ಗೆಯೇ
ಕವನ ಸಂಕಲನ ಮಾಡುತ್ತೇನೆ ಅಂತಲ್ಲ.

ಟೈಪ್ ರೈಟಿಂಗ್ ಕಲಿತು, ನಾಲ್ಕು
ವರ್ಷ ಅದರ ಮುಖವೇ
ನೋಡದಿದ್ದರೆ ಆಗುವಷ್ಟು
ಸ್ಪೀಡ್ ಕಮ್ಮಿಯಾಗಿದೆ ಅಷ್ಟೇ
ಆದರೆ ಯಾವಕ್ಷರ ಎಲ್ಲುಂಟು
ಎಂದು ಬೆರಳುಗಳು ಹುಡುಕಬೇಕಿಲ್ಲ..

ನಾಲ್ಕಾರು ಲೈನು ನಾಲ್ಕಾರು ಕವಿತೆಗೆ
ಮತ್ತೆ ಒಗ್ಗಿ ಮನಸು
ಪೇಪರಿನ ತುಂಬಾ ಕವಿಗೋಷ್ಠಿ
ನಡೆಸಲು ರೆಡಿಯಾಗುತ್ತೆ
(ಹೆಂಡತಿಯಿಂದ ಬೈಸಿಕೊಳ್ಳುವ
ಭಂಡ ಧೈರ್ಯ ತಂದುಕೊಳ್ಳುತ್ತಲೇ)...

ಪ್ರಶ್ನೆಗಳು


ಬರೆಯಬೇಕೆಂಬ ತೀಟೆಗೆ
ನೂರೆಂಟು ವಿಘ್ನಗಳು
ಸಖ್ಯವಿಲ್ಲ, ಸುಖವಿಲ್ಲ,
ರಾಧೆ ಇಲ್ಲ, ರಕ್ತವಿಲ್ಲ,
ಕಾಲಕಾಲಕ್ಕೆ ತಕ್ಕಂತೆ ಇದ್ದ
ಕಾಲುಗಳನ್ನು ಕಿತ್ತು ಕೊಟ್ಟವನಿಗೆ
ನಡೆಯುವುದು ಸಾಧ್ಯವಿಲ್ಲ;
ಕೀರ್ತಿಯ ಬೆನ್ನು ಹತ್ತಿದಾಗ
ಅನ್ನವನ್ನೇ ಮರೆತು
ಅನ್ನದ ಬೆನ್ನು ಹತ್ತಿದಾಗ
ಕೀರ್ತಿಯ ಅಲಕ್ಷಿಸಿ,
ಹಿಡಿದ ದಾರವನ್ನು ಕೈ ಬಿಟ್ಟು
ಹಾರೆಂದರೆ ಹಾರೀತೇ ಪತಂಗ?
ಸೂತ್ರವಿಲ್ಲ, ಸುಸೂತ್ರವಿಲ್ಲ,
ಗಂಧವಿಲ್ಲ, ಗಾಳಿಯಿಲ್ಲ,
ಗಿಳಿಯ ಮರಿಗೆ ಮಾತು ನಾನು ಕಲಿಸಿದೆ,
ಬೈಗುಳ ತಂತಾನೇ ಕಲಿತು
ಬೈದೂ ಬಿಟ್ಟಿತು,
ಬೈಗುಳ ನಾನೇ ಕಲಿಸಿದೆ
ಎಂದು ನಂಬಲಿ ಹೇಗೆ?
ಗಿಳಿ ನನ್ನದಾದೊಡೆ
ಬೈಗುಳವೂ ನನ್ನದೇ
ಶಿಷ್ಟಾಚಾರಕ್ಕೆ ಸವಿನೆನಪುಗಳನ್ನು
ಮತ್ತೆ ಮತ್ತೆ ನೆನೆಸಿ
ಹೃದಯ ತುಂಬಿದ ಗಾಯಗಳನ್ನು
ಮರೆಯಲಿ ಹೇಗೆ?
ಪ್ರತಿಯೊಂದಕ್ಕೂ ಪ್ರಶ್ನೆಗಳ ಹಾಕಿ
ಉತ್ತರಗಳನ್ನು ಮರೆತುಬಿಟ್ಟರೆ
ಉತ್ತರದ ತಪ್ಪೇ?
ದಕ್ಷಿಣಕ್ಕೆ ಮುಖ ಮಾಡಿ
ಮಲಗಿದ್ದು ಆನೆಯ ತಪ್ಪೇ?
ನಾನು ತೊಯ್ಯಿಸಿಕೊಂಡಿದ್ದು
ಮಳೆಯ ತಪ್ಪೇ?
ಪ್ರಶ್ನೆಗಳಿಗೆ ಬುದ್ಧಿಯಿಲ್ಲ
ಉತ್ತರಗಳಿಗೆ ಚಿಂತೆಯಿಲ್ಲ..

ಪ್ರವೀಣ

ನೆನಪಿನ ಕುಣಿಕೆ


ಅಪ್ಪ ಗಡ್ಡ ಬೋಳಿಸುವುದನ್ನು
ಕಾತರದ ಕಂಗಳಿಂದ ನೋಡುತ್ತಿದ್ದ
ದಿನಗಳು ನೆನಪಾದವು
ಮಗನ ಕಾತರದ ಕಂಗಳಿಂದ

ಮದುವೆಯ ಮಧ್ಯಾಹ್ನ
ಮರದಡಿಗೆ ನಿಂತು
ದಮ್ಮು ಹೊಡೆದದ್ದು

ಸೈಕಲ್ಲಿನ ಎರಡೂ ಬದಿಗೆ
ಚೀಲ ಸಿಕ್ಕಿಸಿ ಭಿಕ್ಷಾನ್ನ
ಅಲೆದು ಕಲೆ ಹಾಕಿದ್ದು

ತಿಂಗಳ ಬೆಳಕಿನಲ್ಲಿ
ತಂಗಳನ್ನ ತಿಂದು
ತಂಗಾಳಿಯಲ್ಲಿ ತಂಗಿದ್ದು

ನಿಶೆಯೆಲ್ಲ ಇಳಿಯುವವರೆಗೆ
ನಕ್ಕು ನಕ್ಕು ಸಾಕಾಗಿ
ಹನ್ನೆರಡಕ್ಕೆ ಬಾಗಿಲು ತಟ್ಟಿ
ನೆನಪುಳಿಯದ ಬೈಗುಳ ತಿಂದಿದ್ದು

ನೆರೆಮನೆಯ ಹುಡುಗನ
ಕೂದಲು ಕತ್ತರಿಸಿ
ಮೈಯೆಲ್ಲಾ ಹೊಡೆಸಿಕೊಂಡಿದ್ದು

ಮೊದಲನೆಯ ಬಾರಿ
ಅಮ್ಮನಿಗೆ ತೋರಿಸಲಾಗದ
ಹುಡುಗಿಯ ಮೇಲೆ
ಕವನ ಬರೆದದ್ದು

ನೆನಪುಗಳ ಕುಣಿಕೆಯಲ್ಲಿ
ಕತ್ತು ಸಿಲುಕಿ
ಮರೆವಿನ ಸ್ವಚ್ಚಂದಕ್ಕೆ
ಪರಿತಪಿಸುತಿದೆ ಮನವು

---ಪ್ರವೀಣ

ಅವನು


ಕಗ್ಗತ್ತಲೆಯ ಅಪ್ಪುಗೆಯೊಳಗೆ
ಜೀವ ವಿಹ್ವಲಗೊಳುವಾಗ
ನಿಶ್ಯಬ್ದ ಬಂದು ದೀಪವನುರಿಸದೆ
ಆತ್ಮರತಿಯ ಮಾತುಗಳಲಿ
ಹೃನ್ಮನಗಳ ಅರಳಿಸಿದವನು.

ಹುಣಸೆ ಹಣ್ಣಿನ ಬೇಟೆಯಲಿ
ಅವನ ಆಶೆಯೆಲ್ಲ ತೀರಿದರೂ
ಕಲ್ಲು ಹೊಡೆಯುತ್ತಲೇ ಇದ್ದ
ನನ್ನ ಕಿಸೆ ತುಂಬುವವರೆಗೆ.

ನನ್ನ ದಿಗ್ಭ್ರಮೆಗಳಿಗೆಲ್ಲ
ಖೊಳ್ಳನೆ ನಕ್ಕು, ಸಿಕ್ಕು ಸಿಕ್ಕಾಗಿರುವ
ಕೂದಲಲಿ ಕ್ರೀಮಿನಂತೆ ಹರಡಿ
ಬಾಚಣಿಕೆಗೆ ಸಲೀಸು ಮಾಡಿದವನು.

ಭಾವದ್ವೀಪಗಳ ಮಧ್ಯೆ ಸಮುದ್ರ
ಉನ್ಮಾದದಲಿ ಭೋರ್ಗರೆಯುವಾಗ
ಬೃಹತ್ ಹಡಗನೆಳೆತಂದು
ಹೃದಯಕ್ಕೆ ತಲುಪಿಸಿದವನು.

ಒಡಲಾಳದ ಅಭೀಪ್ಸೆಯಲಿ
ನನ್ನ ಚಹರೆಯೇ ಕಣ್ಮರೆಯಾದಾಗ
ಕ್ಷಿತಿಜದಂಚನ್ನು ವಿಸ್ತರಿಸಿ
ನವರವಿಗೆ ಜನ್ಮ ಕೊಟ್ಟವನು.

ಮಧುಪಾನದ ಉನ್ಮತ್ತ ಮಾತು
ನಗೆಗಡಲಲ್ಲಿ ಮುಳುಗಿರುವಾಗ
ಅರ್ಥವಾಗಲಿಲ್ಲ; ನಶೆ ಏರಿದ್ದು
ಅಲ್ಕೋಹಾಲಿನಿಂದಲ್ಲ ಅವನ
ಮಾತಿನಿಂದ ಎಂದು.
ಇಂದು ಕುಡಿಯಲು ಒಬ್ಬನೇ ಕುಳಿತಾಗ.

..ಪ್ರವೀಣ..