ಶುಕ್ರವಾರ, ಮೇ 18, 2012

ಸಾಯುವ ದಿನ

ಸಾವು ಸಂಪದ್ಭರಿತವಾಗಿರಬೇಕು
ದುಗುಡದಲೇ ಕೈಹಿಡಿದು ಕುಳಿತವಳ
ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ.

ಪ್ರಕೃತಿ ಮಡಿಲಿನ ಸೂರಿನ ಎದುರು
ಬೆಳೆದು ನಿಂತ ಪಚ್ಚೆ ಪೈರಿನ ಮಧ್ಯೆ
ಹೊಂಬಣ್ಣದ ಸೂರ್ಯನ ರಶ್ಮಿಕಿರಣ
ಮಂಜಿನ ಹನಿಗಳಲಿ ಚಿತ್ರಿಸಬೇಕು ಕಾಮನಬಿಲ್ಲು.

ಭಾವಸ್ಫುರಣದಿಂದ ಬಗೆತೆಗೆದ
ಕಾವ್ಯಸಂಕುಲವೆಲ್ಲ ಹಾಡಾಗಿ
ಕೋಗಿಲೆಯ ತುಟಿಗಳಲಿ ನಲಿದಾಡಬೇಕು.

ಮಾನವ ನವನಾಗಿ ಮಾನವಂತನಾಗಿ
ಮನದ ಒಳಗಣ ಭಾವಕೆ ತಲೆದೂಗಬೇಕು.

ರಾತ್ರಿಯ ಮರೆಯಲ್ಲ್ಲಿ ಕುಣಿಯುವ ಕ್ರೌರ್ಯ
ಸುಟ್ಟುಹೋಗಲಿ ಅರುಣನಗ್ನಿಸ್ಪರ್ಶಕೆ
ಬೆಳಗಿಗೂ ಬೈಗಿಗೂ ಇರಲಿ ಒಂದೇ ಅಂತರ
ರವಿಯಿಂದ ಕಡ ತಂದು ಬೆಳಗಲಿ ಚಂದಿರ.

ಎಳೆಕಂದಮ್ಮಗಳ ಜನ್ಮವಿತ್ತ ತಾಯ
ಮೊಲೆವಾಲುಂಡ ಹಾಲ್ದುಟಿಯಲಿ ಸೂಸಿದ
ಮಂದಹಾಸದಲಿ ಕರಗಿ ಹೋಗಲಿ ನೋವು.

ನೋಡಬೇಕೆಂದೆನ್ನ ದೂರದಿಂದ ಬಂದವರ
ಕಾಡಕೂಡದು ಹೊಗೆ, ಧೂಳು, ದಟ್ಟಣೆ.

ಕಾಡಕೂಡದು  ಸಾವು ಹಾದಾಡುವ ಹಾದಿಯಲಿ
ಚಾಕು ಚೂರಿ ಬಂದೂಕಿನ ಗುಂಡಿನಲಿ
ನಂಬಿಕೆಗೆ ಉರಿಹತ್ತಿ ನೆರೆಯವರ ಹಗೆಗಳಲಿ
ನೆಲದ ಹಂಚಿಕೆಗಾಗಿ ರಕ್ತ ಹಂಚಿಕೊಂಡವರಲಿ
ಕುರುಡು ಕಾಂಚಾಣದ ಮತಿಭ್ರಮಿತ ಆಶೆಯಲಿ
ಮೂರು ನಿಮಿಷದ ಸುಖದ ವ್ಯಗ್ರ ವ್ಯಾಮೋಹದಲಿ.

ತುತ್ತು ಕೂಳಿಗಾಗಿ ಕಳೆಯಕೂಡದು ಮಮತೆ
ತುಳಿಯಕೂಡದು ವಾಮನ ತೊಳೆಯಿಲ್ಲದ ಮನೆಯ.

ಹುಟ್ಟು ಕಟ್ಟದಿರಲಿ ಪ್ರತಿಭೆಗೆ ಚಟ್ಟ
ನರ್ತಿಸುವ ನವಿಲು ಹಾಡುವ ಕೋಗಿಲೆ
ತಮ್ಮ ಚರಿತ್ರೆಯ ಹೇಸುವ ದಾರಿದ್ರ್ಯ ಬರದಿರಲಿ.

ಒಲವು ಹರಡಲಿ ಪ್ರತಿ ಮೊಳಕೆಯಲಿ
ಸಂತಸ ಮೊಳಗಲಿ ಮಾತು ಮಾತುಗಳಲಿ
ರಟ್ಟೆ ಸಿಗಲಿ ಕಣ್ಣಿಲ್ಲದ ಪ್ರತಿ ಜೀವಕೆ
ಹೊಟ್ಟೆ ತುಂಬಿ ಜೀವನ ಉಳಿಯಲಿ ಬಾಳಿಗೆ..

                                   ....ಪ್ರೀತೀಶ.

ಭಾನುವಾರ, ಮೇ 13, 2012

ಸೌಂದರ್ಯ

ನಿನ್ನ ಹಿಂದೆ ನಡೆದು ನಿನಗೆ ಗೊತ್ತಿಲ್ಲದೇ
ನಿನ್ನ ಸೌಂದರ್ಯವ ಸವಿಯಬೇಕೆಂದರೆ
ಜಾರಿಬಿದ್ದೆ...

ನೀನು ನಡೆದುಹೋದೆ ಎಂದು ಪುಳಕಗೊಂಡು
ರಸ್ತೆ ಬೆವರು ಬಿಟ್ಟು ಜಾರು ಜಾರಾಗಿತ್ತು.

ನಿನಗೆ ಗುಲಾಬಿ ಹೂವ ಕೊಡಬೇಕೆಂದು
ಉದ್ದನೆ ಗುಲಾಬಿ ಕಡ್ಡಿಯನ್ನೆತ್ತಿಕೊಂಡರೆ
ಪಳಪಳನೆ ಮುಳ್ಳುಗಳೆಲ್ಲ ಮೊಗ್ಗಾಗಿ 
ಕಡ್ಡಿ ದಾರವಾಗಿ ಎಲೆಗಳೆಲ್ಲ ಚಿತ್ತಾರದಂತೆ
ಮುದುಡಿ ತಾವು ತಾವೇ ಪೋಣಿಸಿಕೊಂಡು
ಜಗದೇಕ ಸುಂದರ ಮಾಲೆಯಾದವು.

ನಿನ್ನ ಅಂದವನ್ನು ಹಾಡಿನಲ್ಲಿ ಬಂಧಿಸಿ
ಈ ಜಗತ್ತಿಗೆ ತೋರಿಸಬೇಕೆಂದರೆ
ಕವಿತೆ ತನಗೆ ಒದಗಲಾರದ ಸಾಧನೆಯೆಂದು
ತಪ್ಪಿತಸ್ಥ ಭಾವನೆಯಿಂದ ಸಹ್ಯಾದ್ರಿ ಮಧ್ಯದಲ್ಲಿ
ಸೂಜಿ ಸೈಜಿನ ತೂತು ಕೊರೆದು
ಭೂಮಿಯ ಮಟಾ ಮಧ್ಯದಲ್ಲಿ
ಇಳಿದು ಅಡಗಿಕೊಂಡಿತು.

ಸೇವಂತಿಗೆ, ಮೀನು, ತೊಂಡೆಹಣ್ಣು,
ಜಿಂಕೆ, ಬಾಳೆಯ ದಿಂಡು, ಸಿಂಹ,
ಕಾರ್ಮೋಡ, ಕಾಮನಬಿಲ್ಲು, ಕಿತ್ತಳೆ,
ದ್ರಾಕ್ಷಿ, ಕಮಲಪುಷ್ಪ, ಭೆಂಡಿ, ಹಾಲು,
ಚೊಗಚಿ, ನವಿಲು, ಚಂದ್ರ, ದಾಳಿಂಬೆ,
ಕೋಗಿಲೆ, ಹೂವಿನ ಎಸಳುಗಳನೆಲ್ಲ
ತಾಸುಗಟ್ಟಲೆ ಕಾಡಿ ಬೇಡಿ, ಅಸೆ ಅಮಿಷ
ತೋರಿಸಿ, ನಮಿಸಿ, ಹುಡದಿ ಮಾಡಿ ಕೇಳಿಕೊಂಡೆ - 
ನನ್ನ ಹುಡುಗಿಯ ವರ್ಣಿಸಲು ಬನ್ನಿ ಎಂದು
ಜಪ್ಪಯ್ಯ ಎಂದರೂ ಒಬ್ಬರೂ ಬರಲಿಲ್ಲ
ಅವಳಿಂದ ನೂರು ಫೂಟು ದೂರ ನಿಲ್ಲುವ
ತಾಕತ್ತು ಇಲ್ಲದವರು ನಾವೆಂದು..

ನಿನ್ನನೆ ಒಯ್ದು ಜಗತ್ತಿಗೆಲ್ಲ ಸೌಂದರ್ಯ
ಉಣಬಡಿಸಬೇಕೆಂದರೆ ಬಿಸಿಲು ಮಳೆ
ಚಳಿಗಳಲ್ಲಿ ನೀನು ಬಳಲಿ ಬೆಂಡಾಗಿ,
ಸೌಂದರ್ಯ ಕುಂದಿ ಕವಿತೆಗೆ ವಸ್ತುವಿಲ್ಲದೆ
ನಿರ್ನಾಮವಾಗುತ್ತೆ ಎಂದು ಹೆದರಿಸಿ
ಕರುಣೆ ಹುಟ್ಟಿಸಿದಾಗ,
'
ಕಿಂಚಿತ್ತಾದರೂ ಅವಳ ಚಂದ ಜಗತ್ತಿಗೆ ದಕ್ಕಲಿ'
ಎಂದು ನಿಮ್ಮ ಮುಂದೆ ಬಂದಳು..

....ಪ್ರೀತೀಶ