ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 15, 2012

ಗದ್ದಲಕ್ಕೆ ನನ್ನ ಛೀಮಾರಿ

ಗದ್ದಲಕ್ಕೆ ನನ್ನ ಛೀಮಾರಿ
ಏಕನಾದದಿ ಹೊರಡುವ ಸೊಳ್ಳೆ ಸಂಗೀತವೂ ಆಹ್ಲಾದಕಾರಿ

ಎಂದು ಸಾಯುವೆನೋ ತಿಳಿಯದು ಎಂದು
ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು
ಅಂಚನ್ನು ಎದೆತಂಕ ಎಳೆದು ತಿಂದುಬಿಡುವ ಕಾತರಕೆ
ಹೊಟ್ಟೆಯ ಹಸಿವು ಸಾಕಾಗುವುದಿಲ್ಲ.

ಇದ್ದ ಎಣ್ಣೆಯನ್ನೆಲ್ಲ ಭಾವದೀಪ್ತಿಯಲಿ ಸುರುವಿ
ಬೆಳಕನು ಹೊದ್ದು ಗಡದ್ದು ನಿದ್ದೆ
ಬೆಳಿಗ್ಗೆ ಎದ್ದಾಗ ಸುತ್ತೆಲ್ಲ ಕತ್ತಲು.

ಗದ್ದಲಕ್ಕೆ ನನ್ನ ಛೀಮಾರಿ.

ನಿರ್ದಯ ದೈವದ ಎದುರು ಮುಗಿದ ಕೈಗಳು
ಇರುವೆಗಳು ಕಚ್ಚಿ ಸಕ್ಕರೆ ಪೊಟ್ಟಣ ಖಾಲಿ
ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೇ ಜಾರಿ
ಖಾಲಿ ಪುಟದ ತುಂಬೆಲ್ಲಾ ರಾಡಿ

ಅತಿರಥ ಮಹಾರಥ ಭಗೀರಥ ಪ್ರಯತ್ನ
ಆಕಾಶಕ್ಕೆ ಏರಿದ ಮಣ್ಣಿನ ಪರ್ವತ
ಮೂಲೆಯಲ್ಲಿ ಇರುವೆಗಳ ಮುದ್ದಿನಾಟ
ಕಣ್ಣಿಗೆ ಕಾಣದೆ ವಿಜಯ ದುಂದುಭಿ ಝೇಂಕಾರ

ಗಡಚಿಕ್ಕುವ ಕಾಂಕ್ರೀಟು ಕಾಡುಗಳ ಮಧ್ಯೆ
ತೊನೆದಾಡುವ ಮರಗಳೂ ಚೀರಾಡುತ್ತವೆ
ಸೌಂದರ್ಯ ಧಗಧಗಿಸಿ ಕಣ್ಣ ನೋಯಿಸುತ್ತದೆ
ಕೋಗಿಲೆಯ ಸವಿಗಾನ ಆರ್ತನಾದವೆನಿಸುತ್ತದೆ

ಗದ್ದಲಕ್ಕೆ ನನ್ನ ಛೀಮಾರಿ.

ಸಂಬಂಧಗಳ ನಾತ ನೆತ್ತಿಗೇರಿ
ಪ್ರೇಮಕ್ಕೂ ಕಾಮಕ್ಕೂ ರಾತ್ರಿಯಿಡಿ ಸೆಣಸಾಟ
ಸ್ನೇಹ ಸ್ವಾರ್ಥ ನಂಬಿಕೆಗಳ ತಿಣುಕಾಟ
ಕಣ್ಣೀರಿಗೂ ಖೊಳ್ಳನಗೆಗೂ ಕಣ್ಣುಮುಚ್ಚಾಲೆಯಾಟ
ಹಡ್ಡುವ ಪ್ರತಿ ಖೆಡ್ಡದಲಿ ನಿಧಿಯ ಹುಡುಕಾಟ

ಗದ್ದಲಕ್ಕೆ ನನ್ನ ಛೀಮಾರಿ.

ಶನಿವಾರ, ಸೆಪ್ಟೆಂಬರ್ 8, 2012

ಮಳೆ ಬರಲೇ ಇಲ್ಲ

ನಡುದಾರಿಯಲಿ ಗುಂಡಿ ತೋಡಿ
ಮಳೆಗೆ ಗೊಳೆಯಾಗುವ ನೀರು ನನದೆಂದು
ಕಾದು ಕೂತಿರುವೆ
ಟ್ರಕ್ಕು, ಲಾರಿ, ದೆವ್ವದ ಮೋಟಾರುಗಳ ತಂದು
ನುಣ್ಣನೆ ಸಿಮೆಂಟಿನ ರೋಡು ಹಾಸಿದರು

ಮಳೆ ಬರಲೇ ಇಲ್ಲ

ಹಸಿದ ಹೊಟ್ಟೆಯ ಒಳಗೆ ಬರದು ಶಂಖನಾದ
ತುಂಬಿದ ಹೊಟ್ಟೆಯಲಿ ತಿಂಗಳುಗಟ್ಟಲೆ
ಕಷ್ಟ ನೋವುಗಳ ತರಬೇತಿ ಪಡೆದವರು
ಮಾತ್ರ ಊದಬಹುದು ಕದನಕಹಳೆ

ಮದುವೆಯಾಗದಿರುವುದು ಸರಿಯಾದ ನಿರ್ಧಾರ
ನಾವೆಲ್ಲಾ ನಿರ್ಧಾರ ಮಾಡಲಾಗದವರು
ಕಹಿಯುಪ್ಪು, ಹುಳಿದಾರ ಹೃದಯ ಬಾಣಲೆಯಲಿ ಕುದಿದು
ಪುಪ್ಪುಸಕ್ಕೆ ಬರೀ ಬೆವರಿನ ವಾಸನೆ

ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆ
ನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ
ಕಾವೆಲ್ಲ ಖಾಲಿಯಾಗಿ ಎದೆಯ ನೀಲಿಯಲ್ಲಿ
ಚಂದ್ರನಿಗೆ ಹಸಿವಾಗಿ ನಕ್ಷತ್ರಗಳೆಲ್ಲ ಮಾಯ.

ಶನಿವಾರ, ಆಗಸ್ಟ್ 4, 2012

ಗುಳೆಹೊರಟವರು


ನಡುಹಗಲಲ್ಲೆ ಗುಳೆ ಹೊರಟವರು ನಾವು
ಸಿಕ್ಕ ದಾರಿಗೆ ಹೆಜ್ಜೆಯೊತ್ತಿ
ತಿರುವು ಮುರುವುಗಳಲಿ
ಕಾಲು ಕಳೆದುಕೊಂಡು
ಹರಿವ ತೊರೆ ನೀರ ಕುಡಿದು
ಹೊರಟವರು
ನಡುಹಗಲಲ್ಲೆ ಗುಳೆ ಹೊರಟವರು ನಾವು.

ಅಫ್ಘನ್ನಿಗರಂತೆ ಹುಲ್ಲು
ರೊಟ್ಟಿಯನ್ನಾದರೂ ತಿನ್ನೋಣ
ಎಂದರಸಿದರೆ ಹುಲ್ಲುಕಡ್ಡಿಯೂ ಇಲ್ಲ,
ಉಸುಕಿನಲ್ಲಿ ತಿಂಗಳ
ಹೊಟ್ಟೆ ಹುಗಿದು ಬಂದವರು.

ಮನೆಗೆ ಮಸಣದ ಬೋರ್ಡು ಹಾಕಿ
ಹೆತ್ತೊಡಲ ಕರುಳುಗಳ ಸುಟ್ಟು
ಸುಡದ ಎಲುವಿಗೆ ಬೆಂಕಿ ಹಚ್ಚಿ
ಆರಿದ ಜಗತ್ತಿನ ದೀಪಗಳ
ಬೆಳಗಿಸುವ ಹುಚ್ಚು ಹಚ್ಚಿಕೊಂಡವರು.

ಯಾವ ಬೆಂಕಿಯಿಂದ ತಪ್ಪಿಸಿಕೊಳಬೇಕೆಂದು
ಕರುಳು, ಹೃದಯ, ರಕ್ತನಾಳಗಳ
ಸುಟ್ಟುಕೊಂಡೆವೋ ಅದೇ ಬೆಂಕಿಯ
ಕೆಂಡಗಳ ಮೇಲೆ ಹೆಜ್ಜೆಯೂರಿ
ಹೊರಬಂದವರು.

ಬಗಲಲ್ಲಿ ಕೈಹಿಡಿದೆಬ್ಬಿಸಿ ನಿಲಿಸಿದರು
ಕೊಳಚೆಯಲಿ ಬೀಳದಂತೆ ಕೈಚಾಚಿದರು
ಹೊಟ್ಟೆಗೆ ಹಿಟ್ಟು, ಜುಟ್ಟಿಗೆ ಮಲ್ಲಿಗೆಯ
ಅಭಯಹಸ್ತ ನೀಡಿದರು
ಮನುಷ್ಯ ಇನ್ನೂ ಜೀವಂತನಿಹನೆಂದು
ನಂಬಿದೆವದಕೆ
ನಡುಹಗಲಲ್ಲೆ ಗುಳೆ ಹೊರಟವರು ನಾವು.

ಗುರುವಾರ, ಜೂನ್ 14, 2012

ಎಳೆತ




ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಯಿತು ಗೆಳತೀ,

ಅಲ್ಲಲ್ಲಿ ಸಿಡಿದ ರಕ್ತ,
ತುಂಬೆಲ್ಲಾ ಹರಡಿದ ಕಣ್ಣೀರು,
ಅವರಿವರು ಕ್ಯಾಕರಿಸಿದ ಉಗುಳು,
ಎಲ್ಲ ಒಣಗಲೆಂದು ತೂಗ ಹಾಕಿದ್ದೆ.

ಜೊತೆಗೊಂದಿಷ್ಟು ಕನಸುಗಳು,
ಅದರಲ್ಲೊಂದು ಮನಸು,
ಆಗಾಗ ಫಳಫಳನೆ ಹೊಳೆವ
ಒಂದಿನಿತು ಮಹಾತ್ವಾಕಾಂಕ್ಷೆಗಳು,
ಕಚಗುಳಿಯಿಡುವ ಆಶೆಗಳು.

ಕಣ್ಣಂಚಿನಲ್ಲಿ ಬೀಡು ಬಿಟ್ಟ
ಕೋಗಿಲೆ ಇಟ್ಟ ತತ್ತಿ
ಗೂಡಲ್ಲಿ ಬಚ್ಚಿ ತೂಗಿದ್ದೆ
ಮಡಚಿದರೆ ಮುರಿದೋಗುವ
ಬಟ್ಟೆಗಳಿಗೆಂದು ಹ್ಯಾಂಗರುಗಳು,
ಯಾವುದೂ ಹಾರಿ ಹೋಗದಿರಲೆಂದು
ಹಚ್ಚಿ ಉಳಿದ ಕ್ಲಿಪ್ಪುಗಳು
ನಾಳೆಗಿರಲೆಂದು ಕೂಡಿ ಜೋಡಿಸಿಟ್ಟ
ಕೊಬ್ಬರಿ ಬಟ್ಟಲುಗಳು, ಉಳ್ಳಾಗಡ್ಡಿ,
ಜೋತು ಬಿದ್ದ ಬಳ್ಳೊಳ್ಳಿ ಗಿಡಗಳು,
ಶ್ರೀಖಂಡ ಮಾಡಲೆಂದು ಕಟ್ಟಿದ ಮೊಸರು,
ಮೊಳಕೆಯೊಡೆಯಲೆಂದು ಹೆಸರುಕಾಳು,
ಎಲ್ಲ ಎಲ್ಲ ಅಪ್ಪಚ್ಚಿಯಾಗಿತ್ತು

ನೀ ರೊಚ್ಚಿಗೆದ್ದು ಎಳೆದ ಎಳೆತಕ್ಕೆ ಗೆಳತಿ,
ನನ್ನ ಜೀವನವನೇ ಒಣಗ ಹಾಕಿದ
ಹಗ್ಗ ಕಿತ್ತು ಹೋಗಿತ್ತು.

....ಪ್ರೀತೀಶ

ಶುಕ್ರವಾರ, ಜೂನ್ 8, 2012

ರಕ್ತದ ರುಚಿ


೨೦೦೩ರಲ್ಲಿ ಬರೆದ ಮತ್ತೊಂದು ಕವನ.


ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

ಸಪ್ಪೆಯಾಗಿದೆ ಜ್ಯೂಸು, ಕೋಲ್ಡ್ರಿಂಕು,
ಎಳೆನೀರು, ಸೋಡಾ, ಶರಬತ್ತು,
ಕಬ್ಬಿನ ರಸ, ಹಾಲು, ಅಲ್ಕೋಹಾಲು.

ತಿಂದು ತಿಂದು ತುಂಬಿದೆ ಹೊಟ್ಟೆ,
ತುಂಬಿ ತೇಗಿದೆ ಹೊಟ್ಟೆ,
ತೇಗಿದ ಹೊಟ್ಟೆ ಜೀರ್ಣಕ್ಕೆಮಗೆ
ರಕ್ತವೇ ಪಂಚಾಮೃತ.

ಬುಷ್ಷು, ಮುಷ್ಷು, ಬ್ಲೇರು, ಗ್ಲೀರುಗಳಿಗೆಲ್ಲ
ರುಚಿ ಹತ್ತಿದೆ, ನಶೆಯೇರಿದೆ
ಮೈಮನಗಳಲ್ಲಿ ಉರಿಯೆಬ್ಬಿಸಿ
ಹುಯಿಲೆಬ್ಬಿಸಿರುವ ತೀಟೆ ತಣಿಯಬೇಕಿದೆ.
ಬೇಕಾಗಿದೆ, ರಕ್ತ ಬೇಕಾಗಿದೆ.

ಜಾತಿ ಭೇದವಿಲ್ಲ, ಮತಭೇದವಿಲ್ಲ
ದೇಶ, ಭಾಷೆ, ಲಿಂಗ ಭೇದವಿಲ್ಲ
ಪಂಡಿತ, ಪಾಮರ, ಬಡವ, ಬಲ್ಲಿದ
ಒಂದೇ ಬಣ್ಣದ ರಕ್ತ ಭೇದಕ್ಕೆ ಎಡೆಯಿಲ್ಲ.

*****
ನೆರೆಯಿರಲಿ, ಹೊರೆಯಿರಲಿ
ಕಾಲಕೆಳಗಿನ ಭುವಿಯಿಂದ ಚಿಮ್ಮುತಿರಲಿ
ಮುಗಿಲು ಸುರಿಸಲಿ, ನದಿ ಹರಿಸಲಿ,
ನನ್ನ ಹೃದಯ ಕಾರಂಜಿಯೇ ಹೊಮ್ಮುತಿರಲಿ,
ಬೇಕಾಗಿದೆ, ರಕ್ತ ಬೇಕಾಗಿದೆ.

ಚಂದದ ಹುಡುಗೀರ ಕಣ್ಣಲ್ಲಿ,
ಹದಿಹರೆಯದ ಹುಡಗೂರ ಕಣ್ಣಲ್ಲಿ,
ಬೊಚ್ಚ ಬಾಯ ನಗುವಿನ ಮುದಕೀರು,
ಹುಟ್ಟಿದ ಖಬರಿಲ್ಲದ ಕೂಸುಗಳು,
ಅಮ್ಮ, ಅಣ್ಣ, ತಂಗಿ, ಮಗಳ ಕಂಗಳಲ್ಲಿ
ಮನೆಯಲ್ಲಿ, ಮಸೀದಿಯಲಿ,
ಮಂದಿರ, ಬಸದಿ, ಚರ್ಚುಗಳಲ್ಲಿ,
ಕಲ್ಲು, ಮಣ್ಣು, ಗುಡ್ಡ ಬೆಟ್ಟಗಳಲ್ಲಿ
ಹೃದಯದಲಿ, ಗಾಂಧಿ ಫೋಟೋಗಳಲಿ
ಬರೀ ರಕ್ತ, ರಕ್ತ ಚಿಮ್ಮುತಿದೆ.

*****

ಪಿಳಿಪಿಳಿವ ಕಂಗಳಲ್ಲಿ
ಸುಳಿಸುಳಿವ ಬಂಗಳಲ್ಲಿ
ಕುರಿಗಳಲ್ಲಿ, ಹುಲಿಗಳಲ್ಲಿ,
ಗಿಳಿ, ಕೋಗಿಲೆ, ನವಿಲುಗಳಲ್ಲಿ
ಕುದುರೆಗಳಲ್ಲಿ, ಕತ್ತೆಗಳಲ್ಲಿ,
ಕೃಷ್ಣನ ಕೋಟಿ ಅವತಾರಗಳಲ್ಲಿ
ಮಡುವಲ್ಲಿ, ಒಡಲಲ್ಲಿ ಭೀಮದಾಹ,
ಎಂದೆಂದೂ ತೀರದ ಭೀಮದಾಹ.

ರಕ್ತ ಎಷ್ಟೊಂದು ಸಿಹಿಯಾಗಿದೆ ಗೆಳೆಯ
ರಕ್ತ ಎಷ್ಟೊಂದು ಸೋವಿಯಾಗಿದೆ.

ಶನಿವಾರ, ಜೂನ್ 2, 2012

ನಾಯಕ


ಸೂರ್ಯ ಬಂದದ್ದೇ ತಡವಾಗಿ,
ನಮ್ಮನೆಯ ಗ್ರಿಲ್ ಮುರಿದು
ತುಡುಗಾಗಿ ಹೋಗಿ,
ಹರೆಯದ ಹೆಣ್ಣು ಬೊಬ್ಬಿಟ್ಟು ಕೂಗಿ
ಗಟಾರಿನಲ್ಲೆಲ್ಲ ರಕ್ತವೇ ಹರಿದೋಗಿ,
ಹುಲ್ಲ ಮೇಲಿನ ಮಂಜೆಲ್ಲಾ ಕರಗಿ
ಸೂರ್ಯಾ ಬಂದದ್ದೇ ತಡವಾಗಿ.

ಹಕ್ಕಿಸಂಕುಲವೆಲ್ಲ, ಪುಷ್ಪರಾಜಿಗಳೆಲ್ಲ
ಕೌತುಕದಿ ಕಾದು,
ಹೆಣ್ಣು ನೀರುಗ್ಗಿ ರಂಗೋಲಿ ಹಿಡಿದು
ಹೊಟೇಲು, ಬೂತಿನ ಮಾಲೀಕರೆಲ್ಲ
ಸ್ನಾನ ತಿಂಡಿ ಮಾಡಿ
ರೈತ ನೇಗಿಲು ಹೊತ್ತು ಎತ್ತುಗಳ ಹೂಡಿ
ಕೋಳಿ ಕೂಗಿ ಕೂಗಿ ಬೆಚ್ಚಿ
ಜಗದ ಕಂಗಳೆಲ್ಲ ತೆರೆತೆರೆದು ಮುಚ್ಚಿ
ವರ್ಷ ವರ್ಷ ಉರುಳಿ
ಸೂರ್ಯಾ ಬಂದದ್ದೇ ತಡವಾಗಿ.

ಬಂದವನೇ ಬೆಳಕಿನ ಕಾಲರಿಗೆ ಕೈಹಾಕಿ
‘ಯಾಕಯ್ಯೋ ನನಗಿಂತ ಲೇಟಾಗಿ ಬಂದಿ.’

ಏರಿ, ಮೇಲೇರಿ
ಗುಡ್ಡ ಬೆಟ್ಟ ಕಣಿವೆ ಕಾಡುಗಳ
ಹೊಕ್ಕಲಾರದೆ ಬೆವರಿ,
ಅಡ್ಡಡ್ಡ ಬರುವ ಮೋಡನ
ಸೈರಿಸಲಾಗದೆ ಕೆರಳಿ
ಏರುವ ಭ್ರಮೆಯಲ್ಲಿ
ಇಳಿಯುತ್ತಾ ಸಾಗಿ,
ಕೈಲಾಗದ ಹತಾಶೆಗೆ ತಲೆ ಚಚ್ಚಿಕೊಂಡು
ಚೆಲ್ಲಿದ ರಕ್ತ ಕಂಡು ಅಳುತ್ತ ಕೂತ.

ಸೂರ್ಯಾ ಬಂದದ್ದೇ ತಡವಾಗಿ.

ಶುಕ್ರವಾರ, ಮೇ 18, 2012

ಸಾಯುವ ದಿನ

ಸಾವು ಸಂಪದ್ಭರಿತವಾಗಿರಬೇಕು
ದುಗುಡದಲೇ ಕೈಹಿಡಿದು ಕುಳಿತವಳ
ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ.

ಪ್ರಕೃತಿ ಮಡಿಲಿನ ಸೂರಿನ ಎದುರು
ಬೆಳೆದು ನಿಂತ ಪಚ್ಚೆ ಪೈರಿನ ಮಧ್ಯೆ
ಹೊಂಬಣ್ಣದ ಸೂರ್ಯನ ರಶ್ಮಿಕಿರಣ
ಮಂಜಿನ ಹನಿಗಳಲಿ ಚಿತ್ರಿಸಬೇಕು ಕಾಮನಬಿಲ್ಲು.

ಭಾವಸ್ಫುರಣದಿಂದ ಬಗೆತೆಗೆದ
ಕಾವ್ಯಸಂಕುಲವೆಲ್ಲ ಹಾಡಾಗಿ
ಕೋಗಿಲೆಯ ತುಟಿಗಳಲಿ ನಲಿದಾಡಬೇಕು.

ಮಾನವ ನವನಾಗಿ ಮಾನವಂತನಾಗಿ
ಮನದ ಒಳಗಣ ಭಾವಕೆ ತಲೆದೂಗಬೇಕು.

ರಾತ್ರಿಯ ಮರೆಯಲ್ಲ್ಲಿ ಕುಣಿಯುವ ಕ್ರೌರ್ಯ
ಸುಟ್ಟುಹೋಗಲಿ ಅರುಣನಗ್ನಿಸ್ಪರ್ಶಕೆ
ಬೆಳಗಿಗೂ ಬೈಗಿಗೂ ಇರಲಿ ಒಂದೇ ಅಂತರ
ರವಿಯಿಂದ ಕಡ ತಂದು ಬೆಳಗಲಿ ಚಂದಿರ.

ಎಳೆಕಂದಮ್ಮಗಳ ಜನ್ಮವಿತ್ತ ತಾಯ
ಮೊಲೆವಾಲುಂಡ ಹಾಲ್ದುಟಿಯಲಿ ಸೂಸಿದ
ಮಂದಹಾಸದಲಿ ಕರಗಿ ಹೋಗಲಿ ನೋವು.

ನೋಡಬೇಕೆಂದೆನ್ನ ದೂರದಿಂದ ಬಂದವರ
ಕಾಡಕೂಡದು ಹೊಗೆ, ಧೂಳು, ದಟ್ಟಣೆ.

ಕಾಡಕೂಡದು  ಸಾವು ಹಾದಾಡುವ ಹಾದಿಯಲಿ
ಚಾಕು ಚೂರಿ ಬಂದೂಕಿನ ಗುಂಡಿನಲಿ
ನಂಬಿಕೆಗೆ ಉರಿಹತ್ತಿ ನೆರೆಯವರ ಹಗೆಗಳಲಿ
ನೆಲದ ಹಂಚಿಕೆಗಾಗಿ ರಕ್ತ ಹಂಚಿಕೊಂಡವರಲಿ
ಕುರುಡು ಕಾಂಚಾಣದ ಮತಿಭ್ರಮಿತ ಆಶೆಯಲಿ
ಮೂರು ನಿಮಿಷದ ಸುಖದ ವ್ಯಗ್ರ ವ್ಯಾಮೋಹದಲಿ.

ತುತ್ತು ಕೂಳಿಗಾಗಿ ಕಳೆಯಕೂಡದು ಮಮತೆ
ತುಳಿಯಕೂಡದು ವಾಮನ ತೊಳೆಯಿಲ್ಲದ ಮನೆಯ.

ಹುಟ್ಟು ಕಟ್ಟದಿರಲಿ ಪ್ರತಿಭೆಗೆ ಚಟ್ಟ
ನರ್ತಿಸುವ ನವಿಲು ಹಾಡುವ ಕೋಗಿಲೆ
ತಮ್ಮ ಚರಿತ್ರೆಯ ಹೇಸುವ ದಾರಿದ್ರ್ಯ ಬರದಿರಲಿ.

ಒಲವು ಹರಡಲಿ ಪ್ರತಿ ಮೊಳಕೆಯಲಿ
ಸಂತಸ ಮೊಳಗಲಿ ಮಾತು ಮಾತುಗಳಲಿ
ರಟ್ಟೆ ಸಿಗಲಿ ಕಣ್ಣಿಲ್ಲದ ಪ್ರತಿ ಜೀವಕೆ
ಹೊಟ್ಟೆ ತುಂಬಿ ಜೀವನ ಉಳಿಯಲಿ ಬಾಳಿಗೆ..

                                   ....ಪ್ರೀತೀಶ.

ಭಾನುವಾರ, ಮೇ 13, 2012

ಸೌಂದರ್ಯ

ನಿನ್ನ ಹಿಂದೆ ನಡೆದು ನಿನಗೆ ಗೊತ್ತಿಲ್ಲದೇ
ನಿನ್ನ ಸೌಂದರ್ಯವ ಸವಿಯಬೇಕೆಂದರೆ
ಜಾರಿಬಿದ್ದೆ...

ನೀನು ನಡೆದುಹೋದೆ ಎಂದು ಪುಳಕಗೊಂಡು
ರಸ್ತೆ ಬೆವರು ಬಿಟ್ಟು ಜಾರು ಜಾರಾಗಿತ್ತು.

ನಿನಗೆ ಗುಲಾಬಿ ಹೂವ ಕೊಡಬೇಕೆಂದು
ಉದ್ದನೆ ಗುಲಾಬಿ ಕಡ್ಡಿಯನ್ನೆತ್ತಿಕೊಂಡರೆ
ಪಳಪಳನೆ ಮುಳ್ಳುಗಳೆಲ್ಲ ಮೊಗ್ಗಾಗಿ 
ಕಡ್ಡಿ ದಾರವಾಗಿ ಎಲೆಗಳೆಲ್ಲ ಚಿತ್ತಾರದಂತೆ
ಮುದುಡಿ ತಾವು ತಾವೇ ಪೋಣಿಸಿಕೊಂಡು
ಜಗದೇಕ ಸುಂದರ ಮಾಲೆಯಾದವು.

ನಿನ್ನ ಅಂದವನ್ನು ಹಾಡಿನಲ್ಲಿ ಬಂಧಿಸಿ
ಈ ಜಗತ್ತಿಗೆ ತೋರಿಸಬೇಕೆಂದರೆ
ಕವಿತೆ ತನಗೆ ಒದಗಲಾರದ ಸಾಧನೆಯೆಂದು
ತಪ್ಪಿತಸ್ಥ ಭಾವನೆಯಿಂದ ಸಹ್ಯಾದ್ರಿ ಮಧ್ಯದಲ್ಲಿ
ಸೂಜಿ ಸೈಜಿನ ತೂತು ಕೊರೆದು
ಭೂಮಿಯ ಮಟಾ ಮಧ್ಯದಲ್ಲಿ
ಇಳಿದು ಅಡಗಿಕೊಂಡಿತು.

ಸೇವಂತಿಗೆ, ಮೀನು, ತೊಂಡೆಹಣ್ಣು,
ಜಿಂಕೆ, ಬಾಳೆಯ ದಿಂಡು, ಸಿಂಹ,
ಕಾರ್ಮೋಡ, ಕಾಮನಬಿಲ್ಲು, ಕಿತ್ತಳೆ,
ದ್ರಾಕ್ಷಿ, ಕಮಲಪುಷ್ಪ, ಭೆಂಡಿ, ಹಾಲು,
ಚೊಗಚಿ, ನವಿಲು, ಚಂದ್ರ, ದಾಳಿಂಬೆ,
ಕೋಗಿಲೆ, ಹೂವಿನ ಎಸಳುಗಳನೆಲ್ಲ
ತಾಸುಗಟ್ಟಲೆ ಕಾಡಿ ಬೇಡಿ, ಅಸೆ ಅಮಿಷ
ತೋರಿಸಿ, ನಮಿಸಿ, ಹುಡದಿ ಮಾಡಿ ಕೇಳಿಕೊಂಡೆ - 
ನನ್ನ ಹುಡುಗಿಯ ವರ್ಣಿಸಲು ಬನ್ನಿ ಎಂದು
ಜಪ್ಪಯ್ಯ ಎಂದರೂ ಒಬ್ಬರೂ ಬರಲಿಲ್ಲ
ಅವಳಿಂದ ನೂರು ಫೂಟು ದೂರ ನಿಲ್ಲುವ
ತಾಕತ್ತು ಇಲ್ಲದವರು ನಾವೆಂದು..

ನಿನ್ನನೆ ಒಯ್ದು ಜಗತ್ತಿಗೆಲ್ಲ ಸೌಂದರ್ಯ
ಉಣಬಡಿಸಬೇಕೆಂದರೆ ಬಿಸಿಲು ಮಳೆ
ಚಳಿಗಳಲ್ಲಿ ನೀನು ಬಳಲಿ ಬೆಂಡಾಗಿ,
ಸೌಂದರ್ಯ ಕುಂದಿ ಕವಿತೆಗೆ ವಸ್ತುವಿಲ್ಲದೆ
ನಿರ್ನಾಮವಾಗುತ್ತೆ ಎಂದು ಹೆದರಿಸಿ
ಕರುಣೆ ಹುಟ್ಟಿಸಿದಾಗ,
'
ಕಿಂಚಿತ್ತಾದರೂ ಅವಳ ಚಂದ ಜಗತ್ತಿಗೆ ದಕ್ಕಲಿ'
ಎಂದು ನಿಮ್ಮ ಮುಂದೆ ಬಂದಳು..

....ಪ್ರೀತೀಶ

ಭಾನುವಾರ, ಮಾರ್ಚ್ 25, 2012

ಇದು ನಾನಲ್ಲ..

ವರುಷಗಳೇ ಉರುಳಿ ಹೋಗಿ
ಕನ್ನಡಿಯ ಎದುರಿಗೆ ನಿಂತ ಒಡನೆ
ಹೊಳೆದದ್ದು ಎರಡೇ ಪದ
ಇದು ನಾನಲ್ಲ...

ಅಡ್ಡಾದಿಡ್ಡಿ ಬೆಳೆದ ದಾಡಿ
ಮೂಗ ಹೊಳ್ಳೆಯಿಂದ ಅಸಹ್ಯ ಕೂದಲು
ಗುಳಿ ಬಿದ್ದ ಕಣ್ಣುಗಳಲ್ಲಿ ಹೇಸಿಗೆ ಪಿಚ್ಚು
ಶೋಕಿಗೆ ಇಳಿಬಿಟ್ಟ ಕೂದಲಲ್ಲಿ ಭಯದ ಜಿಡ್ಡು

ಭಾವನೆಗಳೆಲ್ಲ ಅಳಿದು ಹೋಗಿ
ಖಾಲಿಯಾದ ಟೈಯ ಎಡಭಾಗದಲಿ
ಫ್ಯಾನಿನ ಗಾಳಿಗೆ ಹಾರಾಡುವ ಅಂಗಿ
ಕೂಡ ಒಸರಿದ್ದು ಇದು ನಾನಲ್ಲ...

ಸೌಂದರ್ಯ ಕಂಡು ಭಯಬಿದ್ದು
ಗುಲಾಬಿ ಗಿಡದಲ್ಲಿ ಬರಿ ಮುಳ್ಳು ಕಂಡು
ಪ್ರೀತಿಯ ಪದ ಉಸುರುವ ಮುನ್ನ
ಗಣಿತದ ಸೂತ್ರಗಳ ನೆನಪು ಕಾಡಿ

ಜಗದ ಹೃದಯಸುಮವ ತಡಕಿ
ಗಾಳಿಯಲ್ಲೂ ಸಂಗೀತ ಹುಡುಕಿ
ಜಡಿವ ಮಳೆಯಲಿ ನೃತ್ಯ ಕಂಡ
ಮನಕೆ ಬೀಗ ಬಿದ್ದಿದೆ ಇದು ನಾನಲ್ಲ...

ಹರಿವೆಗುಂಟ ತೇಲಿದ ಎಲೆ
ಕಾಂಡಕೆ ಸುತ್ತಿಕೊಂಡ ಲತೆ
ಬೆಂಕಿಗೆ ಬೂದಿಯಾದ ಹಾಳೆ
ಬೆಳಕ ಹಿಂಬದಿಯ ನೆರಳು

ಬದುಕಿನ ಬಲಾತ್ಕಾರ ಸಹಿಸಿ
ಸಾವ ವಿರಹ ಬೇಗುದಿಲಿ ತೊಳಲಿ
ಪ್ರೀತಿ ಭಾವ ಕರುಣೆ ಕಮರಿ
ಬರಿ ಮಾಂಸ ಖಂಡಗಳ ಗೂಡಿದು ನಾನಲ್ಲ..

...ಪ್ರವೀಣ

ಮಂಗಳವಾರ, ಮಾರ್ಚ್ 13, 2012

ನಿರಾಶೆ

ಗೆಳೆಯ
ನೋಡಲೇ ಇಲ್ಲವೇ ನೀನು
ಹೊತ್ತಗೆಯ ನಡುಮಧ್ಯ ಅದೇ ಆಗ
ಅರಳಿದ ಆ ಗುಲಾಬಿ ಹೂವಂದವ?

ಯಾರೋ ಕೊಟ್ಟ ಹಾಗೆ
ತೆರೆಯದೆ ಇಟ್ಟುಬಿಟ್ಟೆಯಾ ಮಾಡಿನಲ್ಲಿ?

ಬೆಳಗಾ ಎದ್ದು ಊರೆಲ್ಲಾ ಅಲೆದು
ತೋಟಗಳ ಹೆಕ್ಕಿ ನಿನ್ನಂದಕೆ
ಸರಿಸಾಟಿ ಆ ಮಿದು ಗುಲಾಬಿ ಅಯ್ದಿದ್ದೆ
ಮುಳ್ಳುಗಳ ಮೆತ್ತಗೆ ಬಿಡಿಸಿ
ಹಾಳೆಗಳ ಮೆತ್ತೆಯಲ್ಲಿ ನಾಜೂಕಾಗಿ
ಪ್ರೀತಿಯರುಹಲು ಕಿವಿಯಲುಸುರಿ
ನಿನ್ನ ಕೈಯಲಿ ರವಾನಿಸಿದ್ದೆ.

ಪುಸ್ತಕ ದಪ್ಪವಾದದ್ದೂ ತಿಳಿಯಲಿಲ್ಲವೇ?
ಮಧ್ಯದ ಕುಳಿಯೂ ಕಾಣಲಿಲ್ಲವೇ?

ಗೆಳತಿ...
ಬಾಡಿ ಹೋಗಿರಬೇಕು ನನ್ನ ಹೂ
ನೀ ಹಿಡಿದ ಒತ್ತಡಕ್ಕೆ ನಲುಗಿ
ತೇವವೆಲ್ಲಾ ಕಳೆದು ಮುರುಟಿ
ಹಾಳೆಯಾಗಿರಬೇಕು ನನ್ನ ಹೂ
ಬಣ್ಣವೆಲ್ಲ ಹಾಳೆಗಂಟಿ
ಕಳೆಹೀನವಾಗಿರಬೇಕು ನನ್ನ ಹೂ

ಗೆಳತಿ
ಮುಚ್ಚಿಟ್ಟು ಕೊಟ್ಟೆಯಾ ಗೆಳೆಯಾ?
ಯಾರಿಗೂ ತೋರದಂತೆ
ಯಾರಿಗೂ ತಿಳಿಯದಂತೆ
ಮುಚ್ಚು ಮರೆಯ ಕೆಟ್ಟ ಕೆಲಸವೇ
ನನ್ನ ನಿನ್ನ ಪ್ರೀತಿ?

ಜಗದೆದುರು ಎದೆತಟ್ಟಿ
ಬಾನತುಂಬಾ ಕನಸ ಕಟ್ಟಿ
ಪ್ರೀತಿ ಮನವ ತುಂಬಲೆಂದಿದ್ದೆ.

ನನ್ನ ಹೃದಯ ಕದವ
ನೀ ತಟ್ಟಿದಾಗ ಪಟ್ಟನೆ
ಒಳಗೆ ಕರಕೊಳಲಿಲ್ಲವೇ ಗೆಳೆಯ?

ನಿನ್ನ ರಾಗಕೆ ತಾಳವಾಗಿ
ನಿನ್ನ ಚಿತ್ರಕೆ ಬಣ್ಣವಾಗಿ
ನಿನ್ನ ಕಾವ್ಯಕೆ ಉಪಮೆಯಾಗಿದ್ದೆ ನಾ.

ಪುಸ್ತಕ ಮಧ್ಯದ ಕುಳಿ ಕಂಡೊಡನೆ
ಮಮ್ಮಲ ಮರುಗಿತ್ತು ಮನವು
ಜಗಕೆ ಬೆಳಕು ಚೆಲ್ಲುವ ನೇಸರ
ಚಂದಿರನ ಹಿಂದೆ ಗ್ರಹಣ ಹೋದನೇ?

----ಪ್ರವೀಣ


ಶನಿವಾರ, ಮಾರ್ಚ್ 10, 2012

ಕಾಗೆಯ ಮಲ

















ಅರ್ಧ ಕಿಲೋಮೀಟರ್ ಸನಿಹ ಸೂರ್ಯ
ಸಾವಿರ ಕಿಲೋಮೀಟರ್ ದೂರ ಜೀವ
ಭೂಮಂಡಲದ ಮಟಾಮಧ್ಯದಲ್ಲಿ
ಬಟಾಬಯಲಿನಲಿ ಅಲೆಯುತಿದ್ದೆ
ದಿಕ್ಕುಗಳು ಮಿಥ್ಯೆಯೆಂದು ಸಾಧಿಸುತ

ತಲೆಯ ಮೇಲೆ, ಕಿವಿಗಳ ಮೇಲೆ
ಮೇಣ್ ಬೆನ್ನ ಮೇಲೆ ಪತ್ ಎಂದು ಬಿತ್ತು
ಬೆರಳಲಿ ಹಿಡಿದು ನೋಡಿದರೆ ಕಾಗೆಯ ಮಲ

ಅಖಂಡ ಬ್ರಹ್ಮಾಂಡವೆಲ್ಲ ಅಲೆದು
ಅತಳ ವಿತಳ ಪಾತಾಳಗಳ ಹೊಕ್ಕು
ಹುಡುಕಿ ತುಂಡು ತುಂಡು ಮಾಡುವವರೆಗೆ ನಿನ್ನ
ಹನಿ ನೀರ ಮುಟ್ಟಲಾರೆನೆಂಬ ಪಣ ತೊಟ್ಟೆ
ಆಕ್ರೋಶದಾ ಅತಿಶಯದ ಘಳಿಗೆಯಲಿ

ಮೇಲೆ ನೋಡಿದರೆ ಸೂರ್ಯನೇ ಏಕಾಂಗಿ
ಕಣ್ಣು ಹರಿದಷ್ಟು ದೂರ ಗಾಳಿಯ ಪತ್ತೆಯಿಲ್ಲ
ಸೋಲೆಂಬುದೆನ್ನ ನಿಘಂಟಿನಲೇ ಇಲ್ಲ
ತೊಟ್ಟ ಪಣ ಮುಟ್ಟುವವರೆಗೆ ನಿದ್ದಿಲ್ಲ ನೀರಡಿಕೆಯಿಲ್ಲ

ಗಿಡ ಮರ ಕೊಂಬೆ ಬಾಗಿಲು ಕಿಟಕಿ
ಗುಡಿ ಗುಂಡಾರ ಅಂಗಡಿ ಭಂಡಾರ
ನದಿ ತೊರೆ ಭಾವಿ ಸಾಗರದಾಳ
ಸೂರ್ಯ ಚಂದ್ರ ನಕ್ಷತ್ರ ಗ್ರಹಗಳ
ಮನುಜ ಮತಿಯ ಕಲ್ಪನೆಯ ತಾಣಗಳ
ಎವೆಯಿಕ್ಕದೆ ಬೆನ್ನು ಹಚ್ಚದೆ ಅರಸಿದೆ

ನಾಚಿಕೆಯಿಲ್ಲದ ಹಸಿವು ಮಾನವಿಲ್ಲದ ದಣಿವು
ಮಾತುಗಳ ಗೌರವವೆನಿತಿಲ್ಲದ ನೀರಡಿಕೆ
ಕಾಗೆಯ ವಿಳಾಸ ಸಿಗುವ ಮೊದಲೇ
ನನ್ನ ಪ್ರಾಣ ತೆಗೆವ ಸಂಚು ಹೂಡಿದಂತೆ
ಧಸಕ್ಕನೆ ಮನೆಯೆಂಬೋ ಮನೆ ಸೇರಿದೆ

ಹಿತ್ತಲ ತುಂಬೆಲ್ಲ ಮಲ ಚೆಲ್ಲುವ
ಅಜ್ಜ ನೆಟ್ಟ ಮರಗಳ ಗಾಳಿಯ ಬಯಕೆಗೆ
ಮೆತ್ತಗೆ ಹಿತ್ತಿಲವಾಗಿಲ ತೆರೆದರೆ
ಕರಗಸದಂತೆ ಕೂಗುತಿಹ ಕಾಗೆಗಳ ಸೈನ್ಯ
ತಿಂದ ಸಿಟ್ಟೆಲ್ಲ ಹೊಟ್ಟೆಯಿಂದ ಹೊಡಮರಳಿ
ಎತ್ತಿದರೆ ಕತ್ತಿ ತಲೆ ಸುತ್ತಿ ಬವಳಿ

ತಲೆಯ ಮೇಲೆ ಹೇತ ಕಾಗೆಯ
ಗುರುತೆಲ್ಲಿ ಇಹುದೆನ್ನ ಬಳಿ

-------
ಫ್ರಿಜ್ಜಿನ ಬಾಗಿಲ ತೆಗೆದು
ಮಂಜುಗಟ್ಟಿದ ಬಾಟಲಿ ಎತ್ತಿ
ಜನ್ಮಾಂತರಗಳ ನೀರಡಿಕೆಯ ಕೊಂದುಬಿಟ್ಟೆ.

...ಪ್ರವೀಣ

ಬುಧವಾರ, ಮಾರ್ಚ್ 7, 2012

ಜೀವನಗಾಥೆ

ಬಳಸಿ ಎಸೆದ ಪ್ಲಾಸ್ಟಿಕ್ಕಿನ ಚೀಲ
ಗಾಳಿಯ ಒತ್ತಡಕ್ಕೆ ಸಿಲುಕಿ ಹಾರುತ್ತಾ
ಪರಿಧಿಯಿಲ್ಲದಂಬರದಲಿ ಏಕಾಂಗಿ

ಇರುವುದೆಲ್ಲವ ಕಳಚಿ
ಹಗುರವಾದರೆ ಹೀಗೆ
ನೆಲೆಯಿಲ್ಲ, ನೆಲದ ಅಕ್ಕರೆಯಿಲ್ಲ
ಗಾಳಿ ಒಯ್ದತ್ತ ತೂರಿ
ಮಳೆ ಹುಯ್ದತ್ತ ಕೊಚ್ಚಿ
ಕಳೇಬರವಾಗಿ ಕಳಕೊಂಡು ತನ್ನ

ಹೆತ್ತೊಡಲ ಹೊಟ್ಟೆಯಲಿ ಉಸಿರು
ಸಿಕ್ಕುವಂತೆ ಬಿಗಿದು, ಮೂಲೆಯ
ಮೊಳೆಗೆ ನೇತಾಕಿ, ಸಕ್ಕರೆ,
ಬೆಲ್ಲ, ಹಿಟ್ಟು, ಬಟ್ಟೆ, ತರಕಾರಿ,
ಹಣ್ಣು, ಕಾಯಿ, ಬಣ್ಣ, ಬಾಟಲಿ
ಕಿತ್ತು ಬರುವಂತೆ ಕತ್ತು
ಹೊತ್ತೊಯ್ದರೂ ಚಕಾರವೆತ್ತಿಲ್ಲ.
ಕೊರೆವ ಚಳಿಯಲಿ ಕಾಪಿಟ್ಟು,
ಮಗನ ಆಟಿಕೆಗಳ ಕುಟ್ಟಿ,
ಬೇಸರವೇರಿ ಹವೆಯೂದಿ
ಫಟ್ಟನೊಡೆವ ನೋವಿಗಾರ್ತನಾದ
ಕಸ ಮುಸುರೆ ತುರುಕಿ
ಕೊಳಚೆಗೆಸೆದರೂ ನೊಂದಿಲ್ಲ
ಕಾಯಕಗೈದ ಸಾರ್ಥಕತೆ ಮನದಲ್ಲಿ

ಇಂದು ಅಂತ್ಯವಿರದಂತರಿಕ್ಷದಲಿ
ಗೊತ್ತು ಗುರಿಯಿಲ್ಲದೆ ಹಾರುವ
ವಸ್ತು ಕಂಡು, ಮುದಗೊಂಡು
ಹಾರಿ ಬರುತಿಹ ಹಕ್ಕಿ
ಕೊಕ್ಕಿನಲ್ಲಿ ಕುಕ್ಕಿ ಫಡಫಡ
ಫರ್ರನೆಯ ನಾದಕೆ ಪುಳಕವಾಗಿ
ಹಾರಿಬಿಟ್ಟರೆ ನನ್ನ, ಇನ್ನೊಂದು
ಹಕ್ಕಿ ಬಂದು, ಹಾರಿ ಚೆಲ್ಲುವಾಟ
ಸಾವಿನ ನೆನಪಾಗದೆ ಇಹುದೇ?

ಮರಣವೂ ಇಲ್ಲ ಕೊನೆಗೆ
ತುಂಡು ತುಂಡಾಗಿ ಸುಟ್ಟು
ಕೊಳಚೆಯಲಿ ಕೊಚ್ಚಿ
ಪರಿಸರ ಮಾಲಿನ್ಯದ ಪಟ್ಟ ಬೇರೆ!

----ಪ್ರವೀಣ.

ಶುಕ್ರವಾರ, ಮಾರ್ಚ್ 2, 2012

ಮೂರು ವರುಷದ ವಿರಹ

ಭುವಿಯ ರಾಜ್ಯದ ತುಂಬಾ
ಸೂರ್ಯನದೇ ದಬ್ಬಾಳಿಕೆ
ಇನಿಯನಾಸರೆಯಿಲ್ಲದೆ ಬೇಸರಿಸಿ
ಪಚ್ಚೆ ಪೈರಿನ ಜಾಗದಲಿ
ಮುರುಟಿ ಹೋದ, ತೇಪೆ ಮೆತ್ತಿದ
ಹರಿದು ಹದಿನಾರಾದ ಸೀರೆ,
ಮನವೆಲ್ಲಾ ಮರುಗಿ, ಮೈಯೆಲ್ಲಾ ಸೊರಗಿ
ಚಕಚಕನೆ ಹೊಳೆವ ಚರ್ಮದ
ತುಂಬಾ ಲಕ್ಷಾಂತರ ಬಿರುಕುಗಳು.

ಕಾದಿಹಳು ಕಾಲನಕಾಲ ಮೃತ್ಯುವಿನವರೆಗೂ
ನೊಂದಿಹಳು ಮಕ್ಕಳ ಹೊಟ್ಟೆಗೂ ಇಲ್ಲದೆ
ಪ್ರಿಯನಿಲ್ಲದೆ ಪರಪೀಡೆಯನನುಭವಿಸುತ
ಕಣ್ಣೀರು ತುಂಬಿ ಹರಿದಿಹುದು ಇಳೆತುಂಬಾ.

ನಂಬುಗೆಯುಂಟು ಬಂದೇ ಬಹನವನು
ಸೂರ್ಯನ ಶಾಖ ಸಂಕುಲದಿಂದೆನ್ನ
ಬಿಡಿಸಿ, ಒಲವಿನ ಮಳೆಗರೆದು
ಮನತುಂಬಾ ಹೂಮಾಲೆಯಾಗುವನು.

ಸೂರ್ಯನಿಗೆ ಸೋತು, ಭುವನವ ತೊರೆದು;
ಸೈನ್ಯ ಒಗ್ಗೂಡಿಸಿ, ಇಡಿ ಇಡಿಯಾಗಿ
ಪಡಿಮೂಡಿ ಬಾನಿನಲಿ ಸೂರ್ಯನ
ಹುಟ್ಟಡಗಿಸಲು ಧೈರ್ಯದೆ ಬಂದಿಹನು ಮೇಘ.
ಕಲೆಯಿಂದ, ಮನದ ಬಲದಿಂದ
ಸೆಣಸಾಡಿ, ಭುವಿಯತ್ತ ಚಾಚಿದ
ಕೈಗಳ ಕಚಕಚನೆ ಕತ್ತರಿಸಿ
ಗೆದ್ದಾನು ಮೇಘ ಸೂರ್ಯನ ಬಂಧಿಸಿ.

ಕಲಕಲನೆ ನಕ್ಕಾಳು ಭೂಮಿ
ತನ್ನಿನಿಯನ ಮೊಗವನ್ನು ನೀವಿ
ಕರೆದಾಳು ಹೃದಯಮಂಟಪಕೆ...

ಮೂರು ವರುಷದ ವಿರಹ
ತಡೆಯಲಾಗದೆ ಬೇಗೆ
ಸಿಡಿಲಗೈಯಿಂದ ಚಿವುಟಿಹನು ತೊಡೆಯ
ಒಡನೆ ನೋವಿಗೆ ಗುಡುಗಿ
ಮುಲುಗಿಹಳು ಪೊಡವಿ
ತಪ್ಪಿಗೆ ಕಪ್ಪಿಟ್ಟು ಮೆಲ್ಲ ಕಚಗುಳಿಯಿಟ್ಟು
ರಮಿಸಿದನು ಸುಂದರಿಯ ಸಿಟ್ಟು
ನಾಚಿ ನೀರಾಗಿ ನಿಡುಸುಯ್ದು ಎಲ್ಲೆಲ್ಲೂ
ಮಣ್ಣ ಕಂಪನು ಸೂಸಿಹಳು ಧರಿಣಿ.

ಸಕಲ ಚರಾಚರಗಳೆಲ್ಲ
ಕೈಬೀಸಿ ಕರೆದಾವು,
ಬಾರಯ್ಯ ತಂದೆ
ಪ್ರೀತಿಯ ಮಳೆಗರೆಯೆ.

ಭಾವುಕ ಮೇಘ ಮೆತ್ತಗೆ
ಮುದ್ದಿಟ್ಟು ಮೈದಡವಿ
ಸಳಸಳನೆ ಸುಳಿದಿಹನು.
ಚುಂಬನ, ಆಲಿಂಗನ, ಬಾಹುಬಂಧನ.

ಅವನಿಯ ಮೈಮನಗಳೆಲ್ಲ ಅರಳಿ
ಬತ್ತಿದ ಮೊಲೆಗಳಲಿ ಹಾಲು ತುಳುಕಿ
ಹರಿದ ನದಿಗುಂಟ ಜೀವಸಂಕುಲವೆಲ್ಲ
ಮನದಣಿಯೇ ಕುಡಿದು ಕುಪ್ಪಳಿಸಿ

ಉಲಿದಾವೋ ಹಕ್ಕಿ
ನಲಿದಾವೋ ನವಿಲು
ಖಗ ಮೃಗಗಳೆಲ್ಲ
ಬಾನಂಗಳಕೆ ನೆಗೆದಾವೋ.

ಒಲುಮೆಯ ಹಬ್ಬ
ಕಳುತನದಿ ಈಕ್ಷಿಸಿದ
ಸೂರ್ಯ ಬಣ್ಣ ಬಣ್ಣದ
ಓಕುಳಿಯಾ ಆಡ್ಯಾನೋ.
=======
ಮರುದಿನ ಪ್ರೀತಿಯದು ಫಲಿಸಿ
ಕೋಟಿಕೋಟಿ ಜೀವಿಗಳು ಚಿಗುರಿಹವು
ತಿರೆಯ ಬೆತ್ತಲೆ ಮೈಗೆ
ಹಚ್ಚ ಹಸುರಿನ ಸೀರೆಯ ಉಡಿಸಿಹವು.
....ಪ್ರವೀಣ.

ಶುಕ್ರವಾರ, ಫೆಬ್ರವರಿ 24, 2012

ಒಂದು ಹನಿ ಅಮೃತ

ಒಂದು ಹನಿ ಅಮೃತ
-----------------

ಬ್ರಹ್ಮಾಂಡವೆಲ್ಲಾ ಅಲೆದು
ಬಳಲಿ ಬೆಂಡಾಗಿ ಬಂದ ಮನಕ್ಕೆ
ಕಂಡಿದ್ದು ನೀನು....

ವೀಳ್ಯೆದೆಲೆ, ಸುಣ್ಣ, ಕಾಚು,
ಅಡಿಕೆಯನ್ನು ಮಡಚಿ
ಆಲಸಿ ಮಧ್ಯಾಹ್ನದಲಿ
ಕಟ್ಟೆಯ ಮೇಲೆ ಕುಳಿತು
ಮೆಲ್ಲಿದಂತಾಹ್ಲಾದಗೊಂಡಿತು.

ಬಾಗಿಲು ತಟ್ಟಿ ಒಳಬಂದ
ಕೋಗಿಲೆಯ ನಿನಾದಕೆ
ದಿಟ್ಟಿ ನೆಟ್ಟಿದ್ದು ನಿನ್ನ
ಕಣ್ಣ ಒಳಗೆ ಸಿಕ್ಕ ಕೂದಲಲಿ

ಓದಬೇಕೆಂದುಕೊಂಡರೆ
ಅಂಗಳ, ಗೋಡೆ, ಬೀದಿ,
ಸರ್ರನೆ ಜಾರುವ ಕಾರುಗಳು,
ಕಂಬ, ಸಂಬಂಧಗಳೆಲ್ಲ
ಚೀರಾಡಿಬಿಟ್ಟವು...

ನಿನ್ನ ಮನದ ಭಾವಗಳೆಲ್ಲ
ಚದುರಿ, ಸಿಡಿದದ್ದೊಂದು
ನೆಟ್ಟಿತು ಎನ್ನ ಎದೆಯ ಒಳಗೆ.
ಕಿತ್ತು ತೆಗೆದರೆ ಒಸರಿದ್ದು
ರಕ್ತವಲ್ಲ, ಒಂದು ಹನಿ ಅಮೃತ

ಸುವಾಸನೆಗೆ ಮನವೆಲ್ಲಾ
ಘಮಫಮನೆ ಅರಳಿತು.

.....ಪ್ರವೀಣ

ಸೋಮವಾರ, ಫೆಬ್ರವರಿ 20, 2012

ಸೂತ್ರ


ನಾಳೆಯ ಉಳಿಕೆಗಾಗಿ
ಇಂದು ಭಗ್ಗನೆ ಉರಿದು
ಭಗ್ನಗೊಂಡಿತು ಮನವು

ನಾಳೆಯ ನೆಗಡಿಗೆ ಬೆದರಿ
ಇಂದಿನ ಮಳೆಯಲಿ ನೆನೆಯದೆ
ಶುಷ್ಕವಾಯಿತು ಹೃದಯ

ಇಂದು ಮತ್ತೆಂದೂ ಬರದು
ಬಂದ ಅನುಭವ ಉಂಡು
ತೇಗುವುದಷ್ಟೇ ಸಿರಿತನ

ನೆನ್ನೆಯನು ಕುಕ್ಕಿಸದೆ
ನಾಳೆಯನು ಲೆಕ್ಕಿಸದೆ
ಇಂದು ಉಕ್ಕಿದುದೆ ಗೆಳೆತನ

ನೆನ್ನೆಯ ಉತ್ತರ ಕಂಡು
ನಾಳೆಯ ಪ್ರಶ್ನೆಗಳಿಗೆ
ಸೂತ್ರ ಕಟ್ಟಿದ್ದು ಇಂದು

ನೆನ್ನೆ ಕಳೆದ ಸಿಂಧು
ನಾಳೆ ಆಶಿಸುವ ಬಿಂದು
ಎರಡರ ಸಂಧಿ ಇಂದು

ಭೂತಗಳಿಗೆ ಹೆದರದೆ
ಭವಿಷ್ಯತ್ತಿನಲ್ಲಿ ಕಳೆಯದೆ
ಇಂದು ಆನಂದದಿ ತೇಲಲಿ

ನೆನ್ನೆಯ ಮಧುರ ನೆನಪು
ನಾಳೆಯಭ್ಯುದಯದ ಕನಸು
ಇಂದಿನ ದಿನವನು ರೂಪಿಸಲಿ.

...ಪ್ರವೀಣ.

ಶುಕ್ರವಾರ, ಫೆಬ್ರವರಿ 17, 2012

ಅಲೆಮಾರಿಗಳು ನಾವೆಲ್ಲಾ


ಅಲೆಮಾರಿಗಳು ನಾವು....

ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು
ಗಡಿಯಿಲ್ಲ, ಗುಡಿಯಿಲ್ಲ,
ಮಡಿಯಿಲ್ಲ, ದಮ್ಮಡಿಯಿಲ್ಲ

ಲಕ್ಷಾಂತರ, ಕೋಟ್ಯಾಂತರ
ಹಾಳಾಗಿ ಹೋದಾಗಲೇ
ಫಳಫಳನೆ ಹೊಳೆವೊಂದು
ಕುಳ ಇಳೆಗೆ ಇಳಿವುದು

ಹುಟ್ಟಿದ್ದೇ ಊರು
ಸಾಗಿದ್ದೆ ದಾರಿ
ತಲುಪಿದ್ದೆ ಗುರಿ
ನಾನೀನೆಂಬ ಹಮ್ಮಿಲ್ಲ ಬಿಮ್ಮಿಲ್ಲ

ಹೊಟ್ಟೆಗೆ ಹೊಟ್ಟೆಯನಂಟಿಗೆ
ತೃಷೆಯಾಗಿ, ಸರಿ ತಪ್ಪು
ಬಗೆಯದೆ, ತಿರೆಯಲೆದು
ತೃಪ್ತಿ ಕಂಡೇವು

ಅಲೆಮಾರಿಗಳು ನಾವು..

ಸೂರ್ಯನೇ ಸಿಟ್ಟಾಗಿ
ಗಗನಕೆ ದುಃಖಾಗಿ
ಗಾಳಿಯೇ ಸತ್ಹೋದ್ರೂ
ಸಿರಿವಂತಿಗೆ ಸೊರಗಿಲ್ಲ

ಹಿಂದೆ ನೆರಳಿಲ್ಲ
ಮುಂದೆ ಬೆಳಗಿಲ್ಲ
ಕ್ಷಣಕಾಲದ ಮಿಂಚಿಗೆ
ಜನ್ಮವೆಲ್ಲಾ ನಲಿದೆವು

ನೆಲದಲ್ಲಿ ಬೇರೂರಿ
ಕಾಂಡಗಳನೆಲ್ಲ ಚಾಚಿ
ಪರಸುಖವನಾಶಿಸದೆ
ಇಹದಲ್ಲೇ ಸಗ್ಗ ಕಂಡೇವು

ಅಲೆಮಾರಿಗಳು ನಾವು..
ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು

ಪ್ರವೀಣ..

ಗುರುವಾರ, ಫೆಬ್ರವರಿ 9, 2012

ಮತ್ತೆಲ್ಲಿ


ಮೋಸ ಮಾಡಿ ಕಾಗೆಯ
ಬಾಯಿಂದ ಮಾಂಸ ಲಪಟಾಯಿಸಿದ
ನರಿಯ ಚಾಣಾಕ್ಷ ಎಂದು
ಮೆಚ್ಚುವ ನಾವು..

ನಿಯಮಗಳನೆಲ್ಲ ಗಾಳಿಗೆ ತೂರಿ
ಸುಳ್ಳು ಹೇಳಿ, ಷಂಡನಡ್ಡ ತಂದು,
ರಾಜ್ಯದಾಮಿಷ ತೋರಿಸಿ ವಂಚನೆಯಿಂದ
ಯುದ್ಧ ಗೆಲುವ ಕಲೆ ಹೇಳಿಕೊಟ್ಟವನ
ದೇವರ ಮಾಡಿ ಪೂಜಿಸುವವರು ನಾವು..

ಸ್ನಾನದಲಿ ಮೈಮರೆತ ಹೆಂಗಳ
ಸೀರೆ ಕದ್ದವನ ಲೋಲುಪತೆಯನ್ನು
ಲೀಲೆಯೆಂದು ಹಾಡಿ
ಬಾಲ್ಯದಿಂದಲೇ ಕದಿಯುವ ಚಟದವನಿಗೆ
ವಿಶ್ವಕ್ಕೆ ಬುದ್ಧಿ ಹೇಳುವ ಪಟ್ಟ ಕಟ್ಟಿದವರು..

ಅರ್ಧಾಂಗಿಯನು ಅನುಮಾನಿಸಿ
ಮರೆಯಿಂದ ನಿರಾಯುಧನ ವಧಿಸಿದವನ
ಗುಣಗಾನ ಮಾಡಿ ಮುಕುತಿಗೆ
ಹಾತೊರೆಯುವ ನಾವು..

ಒಂದು ಸಾರಿ ಮುಳುಗೇಳುವುದರಿಂದ
ಜನುಮದ ಪಾಪಗಳನೆಲ್ಲ ತೊಳೆಯಬಹುದೆಂದು
ನಂಬುವವರು ನಾವು..

ತಿಂದ ಹಣದಲ್ಲೊಂದಿಷ್ಟು
ಭಾಗ ಹುಂಡಿಗೆ ಹಾಕಿದೊಡೆ
ಅನ್ಯಾಯಗಳ ಕ್ಷಮಿಸುವ
ದೇವನೊಬ್ಬನಿಹನೆಮಗೆ..

ಕೊಟ್ಟ ಮಾತಿಗೆ ತಪ್ಪದವನನು
ಮಸಣಕೆ ಕಾವಲು ನಿಲಿಸಿ
ಹೆಂಡತಿ ಮಕ್ಕಳನು ಜೀತಕೆ ಸೇರಿಸಿ
ಮಜವುಂಡು ತೇಗುವ ಮಹಿಮರು ನಾವು..

ಕರ್ಮಭೂಮಿಯಿದು......
ಇಲ್ಲಿಯಲ್ಲದೇ ಎಲ್ಲಿ ದೊರಕೀತು
ಭ್ರಷ್ಟಾಚಾರ?

ಭಾನುವಾರ, ಫೆಬ್ರವರಿ 5, 2012

ದಾರಿಗಳ ಬೆನ್ನು ಹತ್ತಿ


ಎದೆಯ ಸಾಗರದಲ್ಲಿ ಏಳುವ
ಬಿರುಗಾಳಿಗೆ ತಲೆಯ ಹಡಗು
ಮುಳುಗಿ ಹೋಗುತ್ತದೆ
ಮೂರ್ಖನನ್ನಾಗಿ ಮಾಡಿ ನನ್ನ..

ದಾರಿಗಳ ಬೆನ್ನು ಹತ್ತುತ್ತ
ನಾನು ಗುರಿಯನ್ನೇ ಮರೆತುಬಿಟ್ಟೆ
ಉತ್ತರ ಹೇಳುವುದರಲ್ಲಿ ಅಲ್ಲ
ಪ್ರಶ್ನೆ ಕೇಳುವುದರಲ್ಲಿ ಜ್ಞಾನ ಅಡಗಿದೆ..

ರಾತ್ರಿ ಹನ್ನೆರಡಕ್ಕೆ ಎಚ್ಚರವಾಗುವ
ನನ್ನ ಕವಿತೆಗೆ ಕೆಲಸದ ಮುಲಾಜಿಲ್ಲ
ದಿನವೆಲ್ಲ ಮಜವಾಗಿ ತಿಂದುಬಿಡುವ
ಕೆಲಸಕ್ಕೆ ಕವಿತೆಯ ನೆನಪಿಲ್ಲ..

ಕಾಲಕಾಲಕ್ಕೆ ಕಾಲುಗಳನ್ನು
ಬದಲಾಯಿಸದಿದ್ದರೆ ನಿನಗೇ ಉಳಿಗಾಲವಿಲ್ಲ
ಎಂದರು ಡಾಕ್ಟರು
ಆಹಾ ! ಎರಡೆರಡು ವರಗಳನ್ನು ಹೀಗೆ
ಒಮ್ಮೆಲೆ ಕೊಡಬೇಡಿ ಎಂದ ಪೇಶಂಟ್..

ಹೆಂಗೆ ಬಂದೆ ರೋಡಿಗೆ


ಸತ್ತು ಬಿದ್ದಿದ್ದನ್ನು ಬಡಿದು
ಕೈ ಕಾಲು ಹಿಡಿದು ಅಲುಗಾಡಿಸಿ
ಓಹೋ ನನ್ನ ಕವಿತೆ ಜೀವಂತವಿದೆ
ಎಂದು ಬೊಬ್ಬೆ ಹೊಡೆಯುವುದಕ್ಕೂ
ಮನದ ಸ್ವಚ್ಛಂದ ಛಂದದ
ಆಲಿಂಗನದೇ ಮತ್ತೇರಿ ಬರುವ
ಶಬ್ದಾರ್ಥಗಳ ಧಬಧಬೆಗೂ
ಅಜಗಜಾಂತರ ವ್ಯತ್ಯಾಸವಿದೆ..

ಒಳಗೊಳಗೇ ಕುಳಿತು ಕೊಳೆತು
ನಾರಿದರೂ ಸರಿಯೇ
ಅಯ್ಯೋ ಹಾಳಾಗುತ್ತಲ್ಲ ಅಂತ
ಗಟ್ಟಿ ಇರುವ ಕಾಯಿಗಳನ್ನು ಆರಿಸಿ
ಘಮಘಮಿಸುವ ಮಸಾಲೆಯಲ್ಲಿ
ಚಪ್ಪರಿಸಿ ತಿನ್ನುವ ಹಾಗೆ
ಕೊಳೆ ಬದನೆಪಲ್ಲೆ ಮಾಡುವ
ಕೈಚಳಕ ಕವಿತೆ...

ಒಣಗಿದರೂ ಒಗ್ಗರಣೆಗೆ ರುಚಿ
ನೀಡುವ ಕರಿಬೇವು ಕವಿತೆ..

ಹಾಗಂತ ಕವಿತೆಯ ಬಗ್ಗೆಯೇ
ಕವನ ಸಂಕಲನ ಮಾಡುತ್ತೇನೆ ಅಂತಲ್ಲ.

ಟೈಪ್ ರೈಟಿಂಗ್ ಕಲಿತು, ನಾಲ್ಕು
ವರ್ಷ ಅದರ ಮುಖವೇ
ನೋಡದಿದ್ದರೆ ಆಗುವಷ್ಟು
ಸ್ಪೀಡ್ ಕಮ್ಮಿಯಾಗಿದೆ ಅಷ್ಟೇ
ಆದರೆ ಯಾವಕ್ಷರ ಎಲ್ಲುಂಟು
ಎಂದು ಬೆರಳುಗಳು ಹುಡುಕಬೇಕಿಲ್ಲ..

ನಾಲ್ಕಾರು ಲೈನು ನಾಲ್ಕಾರು ಕವಿತೆಗೆ
ಮತ್ತೆ ಒಗ್ಗಿ ಮನಸು
ಪೇಪರಿನ ತುಂಬಾ ಕವಿಗೋಷ್ಠಿ
ನಡೆಸಲು ರೆಡಿಯಾಗುತ್ತೆ
(ಹೆಂಡತಿಯಿಂದ ಬೈಸಿಕೊಳ್ಳುವ
ಭಂಡ ಧೈರ್ಯ ತಂದುಕೊಳ್ಳುತ್ತಲೇ)...

ಪ್ರಶ್ನೆಗಳು


ಬರೆಯಬೇಕೆಂಬ ತೀಟೆಗೆ
ನೂರೆಂಟು ವಿಘ್ನಗಳು
ಸಖ್ಯವಿಲ್ಲ, ಸುಖವಿಲ್ಲ,
ರಾಧೆ ಇಲ್ಲ, ರಕ್ತವಿಲ್ಲ,
ಕಾಲಕಾಲಕ್ಕೆ ತಕ್ಕಂತೆ ಇದ್ದ
ಕಾಲುಗಳನ್ನು ಕಿತ್ತು ಕೊಟ್ಟವನಿಗೆ
ನಡೆಯುವುದು ಸಾಧ್ಯವಿಲ್ಲ;
ಕೀರ್ತಿಯ ಬೆನ್ನು ಹತ್ತಿದಾಗ
ಅನ್ನವನ್ನೇ ಮರೆತು
ಅನ್ನದ ಬೆನ್ನು ಹತ್ತಿದಾಗ
ಕೀರ್ತಿಯ ಅಲಕ್ಷಿಸಿ,
ಹಿಡಿದ ದಾರವನ್ನು ಕೈ ಬಿಟ್ಟು
ಹಾರೆಂದರೆ ಹಾರೀತೇ ಪತಂಗ?
ಸೂತ್ರವಿಲ್ಲ, ಸುಸೂತ್ರವಿಲ್ಲ,
ಗಂಧವಿಲ್ಲ, ಗಾಳಿಯಿಲ್ಲ,
ಗಿಳಿಯ ಮರಿಗೆ ಮಾತು ನಾನು ಕಲಿಸಿದೆ,
ಬೈಗುಳ ತಂತಾನೇ ಕಲಿತು
ಬೈದೂ ಬಿಟ್ಟಿತು,
ಬೈಗುಳ ನಾನೇ ಕಲಿಸಿದೆ
ಎಂದು ನಂಬಲಿ ಹೇಗೆ?
ಗಿಳಿ ನನ್ನದಾದೊಡೆ
ಬೈಗುಳವೂ ನನ್ನದೇ
ಶಿಷ್ಟಾಚಾರಕ್ಕೆ ಸವಿನೆನಪುಗಳನ್ನು
ಮತ್ತೆ ಮತ್ತೆ ನೆನೆಸಿ
ಹೃದಯ ತುಂಬಿದ ಗಾಯಗಳನ್ನು
ಮರೆಯಲಿ ಹೇಗೆ?
ಪ್ರತಿಯೊಂದಕ್ಕೂ ಪ್ರಶ್ನೆಗಳ ಹಾಕಿ
ಉತ್ತರಗಳನ್ನು ಮರೆತುಬಿಟ್ಟರೆ
ಉತ್ತರದ ತಪ್ಪೇ?
ದಕ್ಷಿಣಕ್ಕೆ ಮುಖ ಮಾಡಿ
ಮಲಗಿದ್ದು ಆನೆಯ ತಪ್ಪೇ?
ನಾನು ತೊಯ್ಯಿಸಿಕೊಂಡಿದ್ದು
ಮಳೆಯ ತಪ್ಪೇ?
ಪ್ರಶ್ನೆಗಳಿಗೆ ಬುದ್ಧಿಯಿಲ್ಲ
ಉತ್ತರಗಳಿಗೆ ಚಿಂತೆಯಿಲ್ಲ..

ಪ್ರವೀಣ