ಮಂಗಳವಾರ, ಜುಲೈ 24, 2012

ಗೆಳೆಯ Venkatesh Prasad ಅವರ "ಸಂಕಲ್ಪ"ದ ಬಗೆಗಿನ ಅನಿಸಿಕೆಗಳು.


ನಿನ್ನೆಯಷ್ಟೇ 'ಸಂಕಲ್ಪ' ಓದಿ ಮುಗಿಸಿದೆ . ತುಂಬಾ ಸೊಗಸಾಗಿತ್ತು , ಅಲ್ಲಲ್ಲಿ ಬರುವ ಉತ್ತರ ಕರ್ನಾಟಕದ ಸಂಭಾಷಣೆಗಳು ಆರಂಭದಲ್ಲಿ ತುಸು ಕಷ್ಟವೆನಿಸಿದರೂ ನಂತರ ಅದೇ ನನ್ನ ಓದಿಸಿಕೊಂಡು ಹೋಯಿತು. ನಾನೂ ಇಲ್ಲಿಯವರೆಗೆ ಬಹಳಷ್ಟು ಅಂತರ್ಜಾತೀಯ ವಿವಾಹಗಳನ್ನು ನನ್ನ ನೆರೆಕರೆಯಲ್ಲಿ ನೋಡಿದ್ದೇನೆ ಮತ್ತು ಕೇಳಿದ್ದೇನೆ ಅವುಗಳಲ್ಲಿ ಬಹುತೇಕವು ಮದುವೆಯ ಮೊದಲೇ ಮುರಿದು ಬಿದ್ದರೆ ಇನ್ನು ಕೆಲವು ಮದುವೆಯ ನಂತರ . ಅಂತಹುದರಲ್ಲಿ ನಮನ ಮತ್ತು ತಮನ್ನಾರ ವಿವಾಹವು ಬಹಳ ವಿಶಿಷ್ಟವಾಗಿ ಕಾಣಿಸಿತು. 
ಮೊದಮೊದಲು ಬರಿಯ ಲವ್ ಸ್ಟೋರಿ ಯ ಪುಸ್ತಕ ಎಂದುಕೊಂಡವನಿಗೆ ಓದುತ್ತ ಓದುತ್ತ ಬಹಳಷ್ಟು ಕುತೂಹಲಕಾರಿ ಅಂಶಗಳು ಕಲಿಯ ಸಿಕ್ಕವು :
>ಕಥೆಯ ಮಧ್ಯದಲ್ಲಿ ಬರುವ 'ಸಾಮ್ರಾಟ' ನಂತೂ ನನಗೆ ಬಹಳಷ್ಟು ಹಿಡಿಸಿದ ಮತ್ತು ಅವನ ಜೊತೆ ಬರುವ ಸುಮಿತ ಹಾಗೂ ಅಭಿಷೇಕರೂ ಕೂಡ. ಕೆಲಸವಾದ ತಕ್ಷಣ ಮರೆತು ಬಿಡುವ ಈ ಕಾಲದಲ್ಲಿ ತಾವು ಪೆಟ್ಟು ತಿಂದರೂ ತಮ್ಮ ಮಿತ್ರನ ಒಳಿತಿಗಾಗಿ ಶ್ರಮ ಪಡುವವರನ್ನು ಕಂಡು ಖುಷಿಯಾಯಿತು.

> ಬರಿಯ ಪ್ರೇಮಿಗಳಿಗೆ ಮಾತ್ರವಲ್ಲ , ಜೀವನದಲ್ಲಿ 'ಸೋತೆವು' ಎಂದು ಕೊಳ್ಳುವ ಎಲ್ಲರೂ ಓದಬೇಕಾದ ಒಂದು ಒಳ್ಳೆಯ ಪುಸ್ತಕ ಇದು.>ನಡು ನಡುವೆ ಉಡುಪಿಯ ಕೆಲ ದೃಶ್ಯಗಳನ್ನ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ಅದಕ್ಕಾಗಿ ಧನ್ಯವಾದಗಳು.!!>ಜೀವನದಲ್ಲಿ ಗೆಳೆಯರ ಮಹತ್ವವನ್ನು ಈ ಪುಸ್ತಕ ತೋರಿಸಿಕೊಡುತ್ತದೆ. 
ಇವಿಷ್ಟು ನನಗನ್ನಿಸಿದ ಕೆಲ ಅಂಶಗಳು , ಇಂತಹ ಒಳ್ಳೆಯ ಕೃತಿಗಾಗಿ ಧನ್ಯವಾದಗಳು , ನಿಮ್ಮಿಂದ ಇನ್ನಷ್ಟು ಕೃತಿಗಳು ಹೊರಬರಲಿ , ಕನ್ನಡದ ಶ್ರೇಷ್ಠ ಲೇಖಕರ ಸಾಲಲ್ಲಿ ನೀವು ಕೂಡ ಸೇರಿರಿ ಎಂಬುದೇ ನನ್ನ ಹಾರೈಕೆ !!
ಇಂತೀ ನಿಮ್ಮವ,
ವೆಂಕಟೇಶ ಪ್ರಸಾದ [ಉಡುಪಿಯಿಂದ]

ಶನಿವಾರ, ಜುಲೈ 21, 2012

ಸಂಕಲ್ಪದ ಬಗೆಗೆ ಗೆಳೆಯ ಪುಷ್ಪರಾಜ ಚೌಟ ಅವರ ವಿಮರ್ಶೆ..



ಸಂಕಲ್ಪ, ನಾನು ಮತ್ತು ಅದಕ್ಕೊಂದೆರಡು ಮಾತು......
============
ಅವತ್ತು ಭಾನುವಾರ, ಒಂದು "ಸಂಕಲ್ಪ"ವನ್ನು ಮನದೊಳಗಿಟ್ಟುಕೊಂಡು ಕೂತೆ. ಕಾದಂಬರಿಯೊಂದ ಓದಿಮುಗಿಸಿಬಿಡುವುದಾಗಿತ್ತು ಆ ಸಂಕಲ್ಪ.

ಮೂಲತಃ ಕರಾವಳಿಯವನಾದರೂ ಉತ್ತರಕರ್ನಾಟಕದ ನನ್ನ ನಂಟು ಸರಿ ಸುಮಾರು ಎರಡು ಸಾವಿರನೇ ಇಸವಿ ಜನವರಿ ಒಂದರಿಂದ ಮುಂದುವರಿದಿದೆ. ಅಲ್ಲಿ ಇಲ್ಲಿ ಸಿಕ್ಕಲ್ಲೆಲ್ಲ "ಏನ್ರಿ ಸರ್ರ ಆರಾಮದಿರೇನ್" ಎಂದು ಕೇಳುವ ನನ್ನ ಧಾಟಿ "ಎಂಥಾ ಮಾರಾಯ" ಅಂಥಾ ಮಂಗಳೂರು ಕನ್ನಡ ಮಾತನಾಡುವ, ಜೊತೆಗೊಂದಿಷ್ಟು ಬೆಂಗಳೂರಿನ "ಏನ್ ಗುರು ಕಾಫಿ ಆಯ್ತಾ?" ಗಳ ನಡುವೆ ನಾನು ಮರೆತಿಲ್ಲ ಎಂದರೆ ನನಗಿನ್ನೂ ಆ ಗ್ರಾಮ್ಯ ಭಾಷೆಯ ಸೊಗಡಿನ ಪ್ರೀತಿ ಹೋಗಿಲ್ಲ ಎಂಬ ಹೆಮ್ಮೆಯಿದೆ. ಹೊಟ್ಟೆಪಾಡಿಗಾಗಿ ಬೆಂಗಳೂರಿನ ಹೊಗೆ ತಿನ್ನುತ್ತಿದ್ದರೂ, ಆಕಸ್ಮಿಕವಾಗಿ ಹುಬ್ಬಳ್ಳಿಯಲ್ಲೇ ಕೂತು ಈ ತುಣುಕನ್ನು ಬರೆಯುವ ಭಾಗ್ಯ ಸಿಕ್ಕಿದೆ ಎಂದಾದರೆ ಬಹುಷಃ ಈ ಗಂಡು ಮೆಟ್ಟಿದ ನಾಡಿನ ನಂಟು ನನ್ನನ್ನು ಬಿಡಲಾರದು ಎಂಬುದು ಮತ್ತೆ ನಾನು ಪ್ರಚುರಪಡಿಸಬೇಕಾಗಿಲ್ಲ. ನಾನಿದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ನಾನು ಕೈಗೆತ್ತಿಕೊಂಡ ಸಂಕಲ್ಪವನ್ನು ನಾನು ಓದುವಾಗ ಆ ಭಾಷೆಯ 'ರಗಡ್' ಪರಿಚಯವಿಲ್ಲವಾದರೂ, ಕಿಂಚಿತ್ ಅರಿವಿರಲೇ ಬೇಕು.

ಸಾಮಾನ್ಯವಾಗಿ ನಾನು ಈ ಲವ್-ಮ್ಯಾರೇಜ್-ಗಳನ್ನು ಇಷ್ಟಪಟ್ಟವನಲ್ಲ!.
ಏನ್ರೀ ಸರ್ರ್ ಅಸಂಬದ್ಧ ಪ್ರಲಾಪವಿದು? ಉತ್ತರಕರ್ನಾಟಕದಿಂದ ನೇರವಾಗಿ ಪ್ರೀತಿ-ಪ್ರೇಮ-ಮದುವೆ ಬಗ್ಗೆ ಹೊರಟ್ಟಿದ್ದೀರಿ ಎನದಿರಿ. ಹೌದು ನಾನು ಹೇಳಹೊರಟಿರುವ ವಿಷಯಕ್ಕೂ ಉತ್ತರಕರ್ನಾಟಕಕ್ಕೂ ಸಂಬಂಧವಿದೆ ಎನ್ನುವುದು ನಿಮಗೆ ತಿಳಿದಿರಬೇಕಾದ ಸತ್ಯ. ಹಾಗಂತ ಈ ಲವ್ ಮ್ಯಾರೇಜ್ ಒಳಗಿನ ಅಂಶಗಳು ಕೇವಲ ಉತ್ತರಕರ್ನಾಟಕಕ್ಕೆ ಸೀಮಿತವಲ್ಲ. ನಾನು ಹೇಳಹೊರಟಿರುವ ಸಂಕಲ್ಪದ ಕತೆಯೊಳಗಿನ ಬಹುತೇಕ 'ಮಂದಿ' ಆ ಕಡೆಯವರು ಎನ್ನುವುದು ನಿಮಗೆ ಗೊತ್ತಿರಲಿ.

ಇನ್ನು ಜಾತಿ ಮತ್ತು ಈ ಪ್ರೀತಿ, ಪ್ರೇಮ. ಒಂದು ಗಂಡು-ಹೆಣ್ಣು ಪ್ರೀತಿಯ ತೆಕ್ಕೆಗೆ ಸಿಕ್ಕಾಗ ಅಲ್ಲಿ ಜಾತಿ ನಗಣ್ಯವಾಗುತ್ತದೆ. ಜಾತಿಯ ಕಂದಕಗಳನ್ನು ಒಂದುಗೂಡಿಸುವ ಬಹುದೊಡ್ಡ ಅಂಟು ಕಂಪನಿಯೆಂದರೆ ಅದು "ಪ್ರೀತಿ" ಅಂಟು!. ಇಲ್ಲಿ ಪ್ರೀತಿ ಎಂದಾಗ ನಮ್ಮ ಹೆಚ್ಚಿನ ಯುವಮನಸುಗಳಲ್ಲಿ ಮೂಡುವ ಭಾವನೆಯೆಂದರೆ ಅದು ಹೆಣ್ಣು-ಗಂಡಿನ ನಡುವಿನ ಆಕರ್ಷಣೆ. ಆದರೆ ಅದಕ್ಕೆ ಮಿಗಿಲಾದ ಒಂದು ಭಾವವಿದೆ ಎನ್ನುವುದನ್ನು ನಾನು ಸ್ವಂತ ಅನುಭವವಿಲ್ಲವಾದರೂ ಈ ಸಂಕಲ್ಪದೊಳಗೆ ಕಂಡಿದ್ದೇನೆ. ಆದರೆ ಜಾತಿ ಎನ್ನುವುದು ದೊಡ್ಡದಾಗಿ ನಿಲ್ಲುವುದು ಆ ಕಟ್ಟುಪಾಡಿಗೆ ಗಂಟುಬಿದ್ದ ಕೆಲವು ಮನಸುಗಳು ಈ ಪ್ರೀತಿ ಎಂಬ ಎರಡಕ್ಷರದೊಳಗಿನಂಟಿಗೆ ತಣ್ಣೀರು ಎರಚಿ ಬಿಡುವ ಪ್ರವೃತ್ತಿಯವರಾದಾಗ ಆ ಪ್ರೀತಿಯೊಳಗೆ ಬೇರುಬಿಟ್ಟ ಜೀವಗಳು ಉಸಿರು ಹಿಡಿದು ಹೋರಾಟ ನಡೆಸಬೇಕಾದ ಪ್ರಮೇಯ ಬರುವುದು ಎಲ್ಲಿ ನೈಜತೆಯ ಪ್ರೇಮವಿದೆಯೋ ಅಲ್ಲಿ ಮಾತ್ರವೇ ಹೊರತು ನಾನು ಈ ಮೊದಲೇ ಹೇಳಿದ ಆಕರ್ಷಣೆಯ ಎರಡು ಘಳಿಗೆಯ ವಾಂಛೆಯಲ್ಲಲ್ಲ. ಈ ನಿಟ್ಟಿನಲ್ಲಿ ನಾನು ಹೇಳಹೊರಟಿರುವ 'ಸಂಕಲ್ಪ'ದಲ್ಲಿನ ಎರಡು ಜೀವಗಳು ಅಲ್ಲಲ್ಲಿ ಜಾತಿಯ ಹೊಗೆಯಲ್ಲಿ ಬೆಂದಂತೆ ಕಂಡರೂ, ಚತುರ ವಿವರಣೆಯಲ್ಲಿ ಅದನ್ನು ಒತ್ತಿಹೇಳುವಲ್ಲಿ ಸಫಲತೆಯಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಜಾತಿ ಧರ್ಮದ ವಿಷಯ ಬಂದಾಗ ಮಾನವಧರ್ಮವನ್ನು ಕಡೆಗಣಿಸಿ ಅನ್ಯಧರ್ಮೀಯ ಎಂದು ಕರೆಸಿಕೊಳ್ಳಲ್ಪಡುವ ಒಂದು ಹೆಣ್ಣನ್ನು ಪ್ರೀತಿಸಿದ ಯುವಕ, ತಾನು ಕೈಗೊಂಡ ಸಂಕಲ್ಪವನ್ನು ನೆರವೇರಿಸಿಯೇ ತೀರುತ್ತೇನೆ ಎಂಬ ಪಣ ಕಂಡುಬಂತಾದರೂ ಎಲ್ಲೋ ಒಂದೆರಡು ಕಡೆ ಅವನ ಮನಸೂ ಕೂಡ ಅವಳ ಜೊತೆ ಬಿರುಕಿನೆಡೆಗೆ ತೆರಳಿದ್ದೂ ಇದೆ. ಈ ಭಾವ ಪ್ರೀತಿಯೊಳಗೆ ಮಾಮೂಲು ಎಂದೆಣಿಸಿಕೊಳ್ಳುವುದಾದರೆ ನನ್ನ ಮನಸಿನಲ್ಲಿ ಕೂಡ ಅಂಥಹ ಈ ವಿಷಯದ ಬಗ್ಗೆ ಅಭ್ಯಂತರ ಹುಟ್ಟುವುದಿಲ್ಲ.

ಹೀಗೆ ಕತೆ ಸಾಗುವುದು ಕೇವಲ 'ಒಂದು ಪ್ರೀತಿಯ ಸುತ್ತ' ಎಂದರೆ ಅದು ನನ್ನ ಶಾಣೇ ತಪ್ಪಾದೀತು. ಅಲ್ಲಿ ಮಮತೆ ಎನ್ನುವ ಬಳ್ಳಿಯ ಅರಳುವಿಕೆಯಿದೆ. ಸ್ನೇಹ ಎನ್ನುವ ಒಂದು ಆವರಣವಿದೆ. ಆ ಆವರಣದೊಳಗೆ ಬೆಲೆ ಕಟ್ಟಲಾಗದ ಅಂಶಗಳನ್ನು ಎತ್ತಿಹಿಡಿಯಲಾಗಿದೆ. ತದ್ವಿರುದ್ಧವಾಗಿ ಸಮಾಜಸೇವೆ ಎನ್ನುವ ಮುಖವಾಡಗಳ ಬಣ್ಣಕಳಚುವ ಕಿರಿಯ ಪ್ರಯತ್ನ ಕೂಡ ಸಂಕಲ್ಪದ ಸರದಾರ ತೋರಿಸಿದ್ದಾರೆ. ಇದಕ್ಕೆಲ್ಲಕಿಂತಲೂ ಮುಖ್ಯವಾಗಿ ಒಂದು ಕಡೆ ಹೆತ್ತವರ ಅಳಲು, ಹೆತ್ತವರ ಮೇಲಿನ ಮಮಕಾರಗಳನ್ನೂ ಸೂಕ್ಷ್ಮವಾಗಿ ಗಮನಿಸಿದೆ ಈ ಸಂಕಲ್ಪ. ಮಿಗಿಲಾಗಿ ಹೆತ್ತವರೆಂದು ಕರೆಸಿಕೊಳ್ಳುವ ಪಾತ್ರಗಳೂ ಕೂಡ ತಮ್ಮ ಬದಲಾಗದ ಮನಸ್ಥಿತಿಯೊಂದಿಗೆ ಮುಗ್ಧತೆಗಳನ್ನು ತುಳಿಯುವ ಮನಸು ಮಾಡುವುದು ಇಲ್ಲಿನ ವಿಪರ್ಯಾಸ.

ಇನ್ನು ಈ ಮೊದಲೇ ಹೇಳಿದಂತೆ ಇಲ್ಲಿ ಬಂದು ಹೋಗುವ ಪಾತ್ರಗಳು. ಯಾವ ಪಾತ್ರಗಳು ಕೂಡ ಸುಮ್ಮನೇ ಕೂತಿಲ್ಲ!. ಹಾಗೇ ಬಂದು ಹೀಗೆ ಹೋದಂತಿಲ್ಲ. ಎಲ್ಲವನ್ನೂ ಮಾತನಾಡಿಸುವ ಯೋಜಿತ ಬರಹ ರೂಪುರೇಷೆ ಸಂಕಲ್ಪದ ಪ್ರಮುಖದ ಅಂಶ. ಆದರೆ ಎಲ್ಲಾ ಪಾತ್ರಗಳನ್ನು ಮಾತಾನಾಡಿಸುವ ಗೋಜಿನಲ್ಲಿ ಸಂಕಲ್ಪದೊಡೆಯನ ಹೆಚ್ಚಿನ ಮಾತಿನ ಇಚ್ಛೆ ಓದುಗನ ಮನವನ್ನು ಸಂಭಾಷಣೆಗಳಿಂದ ಹಾರಿಸಿಬಿಡಬಹುದು ಎನ್ನುವ ಭಯ ಕೂಡ ನನಗೆ ಕಾಡದಿರಲಿಲ್ಲ. ಏನೇ ಇರಲಿ 'ಪ್ರಥಮಚುಂಬನಂ ದಂತಭಗ್ನಂ' ಅಲ್ಲವೇ ಅಲ್ಲ ಎನ್ನುವ ಪ್ರಮಾಣಪತ್ರ ಕೊಡಬಹುದಾದರೂ ಅತಿ ಕಿರಿಯನಾಗಿ ನಾನದಕ್ಕೆ ಹೆದರಿದರೂ, ಕೊಡದೇ ಇರಲಾರೆ.

ಕೊನೆಯದಾಗಿ, ನಾನು ಹೇಳಬಹುದಾದ ಮಾತೆಂದರೆ ಇದೊಂದು ಪ್ರೇಮಕಾದಂಬರಿಯಾಗಿ ನಿಲ್ಲಲ್ಲಿಲ್ಲ ಎನ್ನುವ ಸತ್ಯ ಮತ್ತು ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎನ್ನುವ ವಾಸ್ತವಿಕತೆಯ ನೆಲೆಗಟ್ಟಿನಲ್ಲಿ, ಸುಶಿಕ್ಷಿತ ವಾತಾವರಣದಲ್ಲೂ ಅಂತರ್ಧರ್ಮೀಯ ತೊಳಲಾಟವನ್ನು ಹೊಡೆದೋಡಿಸಿ, ಗುಣಾತ್ಮಕ ಅಂಶಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವಲ್ಲಿ ಸಫಲ ನಾನು ಹೇಳಹೊರಟ "ಸಂಕಲ್ಪ".

ಸಂಕಲ್ಪದ ಬಗೆಗೆ ಗೆಳೆಯ ಹೇಮಂತ ಅವರ ಅನಿಸಿಕೆ

ಗೆಳೆಯ ಹೇಮಂತ ಕುಮಾರ ಅವರ ಅನಿಸಿಕೆ..
ಸಂಕಲ್ಪ

ಒಂದು ದಾರ ಕೈಯಿಗೆ ಕಟ್ಟಿ ಹೆಂಡತಿಯನ್ನ ತಂಗಿ ಮಾಡಬಹುದಾದರೆ? ಕೊರಳಿಗೂ ಒಂದು ದಾರವನ್ನೇ ಕಟ್ಟಿ ತಂಗಿಯನ್ನು ಹೆಂಡತಿ ಮಾಡಲಾಗುವುದಿಲ್ಲವೆ? ಎಂದರೆ ನೀವೇನು ಹೇಳ್ತೀರಿ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ನಮಗೇ ನೇರವಾಗಿ ಕೇಳುತ್ತಾ ಸಾಗುತ್ತದೆ ಸಂಕಲ್ಪ. ಒಂದು ಸಾಹಸ ಯಾತ್ರೆಯಲ್ಲಿ ಮುಳುಗೆದ್ದು ಬರುವ ಧೈರ್ಯ ಮಾಡುವ ಹಾಗಿದ್ದರೆ ಕೊಂಡು ಓದಿ. ‘ನಮ್ಮ’ ಮತ್ತು ‘ತಮ್ಮ’ ನಡುವಿನ ಇಬ್ಬರು ಸಾಧಾರಣ ಕೇವಲ ಮನುಷ್ಯರ ಗೋಳಾಟ, ಪರದಾಟ, ಸೆಣಸಾಟ, ಗುದ್ದಾಟ, ಕನಸುಗಳ ಕೊಸರಾಟ, ಮನಸುಗಳ ಮುದ್ದಾಟ, ಉತ್ತರಿಸುವವರಿರದ ಪ್ರಶ್ನೆಗಳೆರಚಾಟ, ಒಂದು ಲಕ್ಷ್ಯದೆಡೆಗಿನ ನಿರಂತರ ಓಟ. ಸ್ವಾರಸ್ಯಕರವಾಗಿ ಹೇಳಿ ಮನರಂಜಿಸಬೇಕೆಂದು ಕೊಂಚವೂ ಪ್ರಯತ್ನಿಸಲಾಗಿಲ್ಲ ಇಲ್ಲಿ. ನೈಜ ಘಟನೆಗಳ ನೇರಾನೇರ ವಿವರಣೆಯಂತಿದ್ದರೂ ಕುತೂಹಲವನ್ನು ಕೆರಳಿಸಿದರೆ ಅದಕ್ಕೆ ಕಾದಂಬರಿ ಜವಾಬ್ದಾರಿಯಲ್ಲ. ಪುಸ್ತಕ ಕೊಂಡು ಮೊದಲ ಅಧ್ಯಾಯ ಓದುವ ದುಸ್ಸಾಹಸ ನಾವು ಮಾಡಿದರೆ ಸಾಕು ಜಾರೋ ಬಂಡೆಯಲ್ಲಿ ಕೊನೆಮುಟ್ಟುವ ತನಕ ಕಾದಂಬರಿಯೇ ಜಾರಿಸಿಕೊಂಡು ಹೋಗುತ್ತದೆ. 

ಪ್ರಿಯ ಪ್ರೀತೀಶ ಅವರೇ,

ಕೊನೆಯ ಪುಟವನ್ನು ಮಗುಚಿಹಾಕುವಷ್ಟರಲ್ಲಿ ಒಂದು ಒಳ್ಳೆಯ ಅನುಭವ ಹೊತ್ತು, ನನ್ನ ಹಳೆಯ ದಿನಗಳ ನೆನಪುಗಳ ಮೂಟೆಯನ್ನು ಹಿಡಿದು ನಿಮ್ಮನ್ನು ನೋಡುತ್ತಾ ನಿಂತಿದ್ದೆ. ನೈಜವಾಗಿ ಇರುವುದು ಇರುವ ಹಾಗೆ ಮೂಡಿಬಂದಿದೆ, ಅದು ಇಷ್ಟವಾಯ್ತು. ಅಬ್ದುಲ್ಲಾ ನಮನ್ ನನ್ನು ಮೊದಲಾರ್ಧದಲ್ಲಿ ಕರೆತಂದು ಊರು ಬಿಟ್ಟು ಹೋಗಲು ಧಮಕಿ ಹಾಕುವ ಸನ್ನಿವೇಶವನ್ನು ಅಮ್ಮನ ದೃಷ್ಟಿಕೋನದಲ್ಲಿ, ಸ್ನೇಹಿತನ ದೃಷ್ಟಿಕೋನದಲ್ಲಿ, ನಮನನ ದೃಷ್ಟಿಕೋನದಲ್ಲಿ ಹೇಳಿ ಮತ್ತೆ ಅದೇ ಘಟನೆಗೆ ತಂದು ನಿಲ್ಲಿಸುವ ಟೆಕ್ನಿಕ್ ಬಹಳ ಹಿಡಿಸಿತು. ಅದು ಬಿಟ್ಟರೆ ಕಥೆ, ನಿರೂಪಣೆ ಮುಗ್ಧ ಪ್ರೇಮಿಗಳಿಬ್ಬರ ಜೀವನದ ಒಂದು ಎಪಿಸೋಡಿನ ರಿಪೋರ್ಟಿನ ರೀತಿ ಸಾಗುತ್ತಾ ಹೋದ ಹಾಗೂ ಏನಾಗಬಹುದೆಂದು ಗೊತ್ತಿದ್ದರೂ ಹೇಗೆ ಆಗುವುದೆಂಬ ಕೆಟ್ಟ ಕುತೂಹಲ ಹಿಡಿದಿಟ್ಟು ಓದಿಸುತ್ತದೆ. ಇಷ್ಟೆಲ್ಲಾ ಸಾಹಸವನ್ನು ಮಾಡಿ ಗೆದ್ದರಲ್ಲಾ ಎಂದು ಖುಷಿ ಪಡಬೇಕೋ ಅಥವಾ ಈ ರೀತಿ ಇನ್ನೂ ಬದುಕುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಹ ನಂಬಿಕೆಗಳಿಗಾಗಿ ಬೇಸರ ಪಡಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಆದಷ್ಟೂ ಪ್ರೇಮಿಗಳು ಗೆದ್ದು ಚೆನ್ನಾಗಿ ಜೀವನ ನಡೆಸುವಂತಾಗಲಿ ಎಂದು ಆಶಿಸುತ್ತೇನೆ ನಮನ ಮತ್ತು ತಮನ್ನಾ ಮರುಪ್ರತಿಗೊಂಡಷ್ಟೂ ನಮನ ಮತ್ತು ತಮನ್ನರನ್ನು ಹುಟ್ಟುಹಾಕುವಂತಾಗಲಿ… ಮುಂದೂ ಹಿಸ್ಲಿಂ ಜಾತಿಗಳು ಕೂಡ ಹುಟ್ಟುತ್ತಾ ಹೋಗಲಿ. Enjoyed a lot as a reader.. Experienced a lot as a student. Thanks for the wonderful novel.. keep writing.. ಸಾಗಲಿ ನಿಮ್ಮ ಸಾಹಿತ್ಯ ಯಾತ್ರೆ.. ವಿಭಿನ್ನ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಬರೆಯುವಂತಾಗಲಿ... ನಿಮ್ಮ ಚೊಚ್ಚಲ ಕಾದಂಬರಿಯ ಯಶಸ್ಸಿಗೆ ವಂದನೆಗಳು ಪ್ರವೀಣ ಕುಲಕರ್ಣಿ :-)

ಇಂತಿ ನಿಮ್ಮ ಗೆಳೆಯ,
ಹೇಮಂತ

ಸೋಮವಾರ, ಜುಲೈ 16, 2012