ಭಾನುವಾರ, ಫೆಬ್ರವರಿ 5, 2012

ದಾರಿಗಳ ಬೆನ್ನು ಹತ್ತಿ


ಎದೆಯ ಸಾಗರದಲ್ಲಿ ಏಳುವ
ಬಿರುಗಾಳಿಗೆ ತಲೆಯ ಹಡಗು
ಮುಳುಗಿ ಹೋಗುತ್ತದೆ
ಮೂರ್ಖನನ್ನಾಗಿ ಮಾಡಿ ನನ್ನ..

ದಾರಿಗಳ ಬೆನ್ನು ಹತ್ತುತ್ತ
ನಾನು ಗುರಿಯನ್ನೇ ಮರೆತುಬಿಟ್ಟೆ
ಉತ್ತರ ಹೇಳುವುದರಲ್ಲಿ ಅಲ್ಲ
ಪ್ರಶ್ನೆ ಕೇಳುವುದರಲ್ಲಿ ಜ್ಞಾನ ಅಡಗಿದೆ..

ರಾತ್ರಿ ಹನ್ನೆರಡಕ್ಕೆ ಎಚ್ಚರವಾಗುವ
ನನ್ನ ಕವಿತೆಗೆ ಕೆಲಸದ ಮುಲಾಜಿಲ್ಲ
ದಿನವೆಲ್ಲ ಮಜವಾಗಿ ತಿಂದುಬಿಡುವ
ಕೆಲಸಕ್ಕೆ ಕವಿತೆಯ ನೆನಪಿಲ್ಲ..

ಕಾಲಕಾಲಕ್ಕೆ ಕಾಲುಗಳನ್ನು
ಬದಲಾಯಿಸದಿದ್ದರೆ ನಿನಗೇ ಉಳಿಗಾಲವಿಲ್ಲ
ಎಂದರು ಡಾಕ್ಟರು
ಆಹಾ ! ಎರಡೆರಡು ವರಗಳನ್ನು ಹೀಗೆ
ಒಮ್ಮೆಲೆ ಕೊಡಬೇಡಿ ಎಂದ ಪೇಶಂಟ್..

ಕಾಮೆಂಟ್‌ಗಳಿಲ್ಲ: