ಭಾನುವಾರ, ಫೆಬ್ರವರಿ 5, 2012

ಪ್ರಶ್ನೆಗಳು


ಬರೆಯಬೇಕೆಂಬ ತೀಟೆಗೆ
ನೂರೆಂಟು ವಿಘ್ನಗಳು
ಸಖ್ಯವಿಲ್ಲ, ಸುಖವಿಲ್ಲ,
ರಾಧೆ ಇಲ್ಲ, ರಕ್ತವಿಲ್ಲ,
ಕಾಲಕಾಲಕ್ಕೆ ತಕ್ಕಂತೆ ಇದ್ದ
ಕಾಲುಗಳನ್ನು ಕಿತ್ತು ಕೊಟ್ಟವನಿಗೆ
ನಡೆಯುವುದು ಸಾಧ್ಯವಿಲ್ಲ;
ಕೀರ್ತಿಯ ಬೆನ್ನು ಹತ್ತಿದಾಗ
ಅನ್ನವನ್ನೇ ಮರೆತು
ಅನ್ನದ ಬೆನ್ನು ಹತ್ತಿದಾಗ
ಕೀರ್ತಿಯ ಅಲಕ್ಷಿಸಿ,
ಹಿಡಿದ ದಾರವನ್ನು ಕೈ ಬಿಟ್ಟು
ಹಾರೆಂದರೆ ಹಾರೀತೇ ಪತಂಗ?
ಸೂತ್ರವಿಲ್ಲ, ಸುಸೂತ್ರವಿಲ್ಲ,
ಗಂಧವಿಲ್ಲ, ಗಾಳಿಯಿಲ್ಲ,
ಗಿಳಿಯ ಮರಿಗೆ ಮಾತು ನಾನು ಕಲಿಸಿದೆ,
ಬೈಗುಳ ತಂತಾನೇ ಕಲಿತು
ಬೈದೂ ಬಿಟ್ಟಿತು,
ಬೈಗುಳ ನಾನೇ ಕಲಿಸಿದೆ
ಎಂದು ನಂಬಲಿ ಹೇಗೆ?
ಗಿಳಿ ನನ್ನದಾದೊಡೆ
ಬೈಗುಳವೂ ನನ್ನದೇ
ಶಿಷ್ಟಾಚಾರಕ್ಕೆ ಸವಿನೆನಪುಗಳನ್ನು
ಮತ್ತೆ ಮತ್ತೆ ನೆನೆಸಿ
ಹೃದಯ ತುಂಬಿದ ಗಾಯಗಳನ್ನು
ಮರೆಯಲಿ ಹೇಗೆ?
ಪ್ರತಿಯೊಂದಕ್ಕೂ ಪ್ರಶ್ನೆಗಳ ಹಾಕಿ
ಉತ್ತರಗಳನ್ನು ಮರೆತುಬಿಟ್ಟರೆ
ಉತ್ತರದ ತಪ್ಪೇ?
ದಕ್ಷಿಣಕ್ಕೆ ಮುಖ ಮಾಡಿ
ಮಲಗಿದ್ದು ಆನೆಯ ತಪ್ಪೇ?
ನಾನು ತೊಯ್ಯಿಸಿಕೊಂಡಿದ್ದು
ಮಳೆಯ ತಪ್ಪೇ?
ಪ್ರಶ್ನೆಗಳಿಗೆ ಬುದ್ಧಿಯಿಲ್ಲ
ಉತ್ತರಗಳಿಗೆ ಚಿಂತೆಯಿಲ್ಲ..

ಪ್ರವೀಣ

ಕಾಮೆಂಟ್‌ಗಳಿಲ್ಲ: