ಗುರುವಾರ, ಫೆಬ್ರವರಿ 9, 2012

ಮತ್ತೆಲ್ಲಿ


ಮೋಸ ಮಾಡಿ ಕಾಗೆಯ
ಬಾಯಿಂದ ಮಾಂಸ ಲಪಟಾಯಿಸಿದ
ನರಿಯ ಚಾಣಾಕ್ಷ ಎಂದು
ಮೆಚ್ಚುವ ನಾವು..

ನಿಯಮಗಳನೆಲ್ಲ ಗಾಳಿಗೆ ತೂರಿ
ಸುಳ್ಳು ಹೇಳಿ, ಷಂಡನಡ್ಡ ತಂದು,
ರಾಜ್ಯದಾಮಿಷ ತೋರಿಸಿ ವಂಚನೆಯಿಂದ
ಯುದ್ಧ ಗೆಲುವ ಕಲೆ ಹೇಳಿಕೊಟ್ಟವನ
ದೇವರ ಮಾಡಿ ಪೂಜಿಸುವವರು ನಾವು..

ಸ್ನಾನದಲಿ ಮೈಮರೆತ ಹೆಂಗಳ
ಸೀರೆ ಕದ್ದವನ ಲೋಲುಪತೆಯನ್ನು
ಲೀಲೆಯೆಂದು ಹಾಡಿ
ಬಾಲ್ಯದಿಂದಲೇ ಕದಿಯುವ ಚಟದವನಿಗೆ
ವಿಶ್ವಕ್ಕೆ ಬುದ್ಧಿ ಹೇಳುವ ಪಟ್ಟ ಕಟ್ಟಿದವರು..

ಅರ್ಧಾಂಗಿಯನು ಅನುಮಾನಿಸಿ
ಮರೆಯಿಂದ ನಿರಾಯುಧನ ವಧಿಸಿದವನ
ಗುಣಗಾನ ಮಾಡಿ ಮುಕುತಿಗೆ
ಹಾತೊರೆಯುವ ನಾವು..

ಒಂದು ಸಾರಿ ಮುಳುಗೇಳುವುದರಿಂದ
ಜನುಮದ ಪಾಪಗಳನೆಲ್ಲ ತೊಳೆಯಬಹುದೆಂದು
ನಂಬುವವರು ನಾವು..

ತಿಂದ ಹಣದಲ್ಲೊಂದಿಷ್ಟು
ಭಾಗ ಹುಂಡಿಗೆ ಹಾಕಿದೊಡೆ
ಅನ್ಯಾಯಗಳ ಕ್ಷಮಿಸುವ
ದೇವನೊಬ್ಬನಿಹನೆಮಗೆ..

ಕೊಟ್ಟ ಮಾತಿಗೆ ತಪ್ಪದವನನು
ಮಸಣಕೆ ಕಾವಲು ನಿಲಿಸಿ
ಹೆಂಡತಿ ಮಕ್ಕಳನು ಜೀತಕೆ ಸೇರಿಸಿ
ಮಜವುಂಡು ತೇಗುವ ಮಹಿಮರು ನಾವು..

ಕರ್ಮಭೂಮಿಯಿದು......
ಇಲ್ಲಿಯಲ್ಲದೇ ಎಲ್ಲಿ ದೊರಕೀತು
ಭ್ರಷ್ಟಾಚಾರ?

ಕಾಮೆಂಟ್‌ಗಳಿಲ್ಲ: