ಭಾನುವಾರ, ಫೆಬ್ರವರಿ 5, 2012

ಅವನು


ಕಗ್ಗತ್ತಲೆಯ ಅಪ್ಪುಗೆಯೊಳಗೆ
ಜೀವ ವಿಹ್ವಲಗೊಳುವಾಗ
ನಿಶ್ಯಬ್ದ ಬಂದು ದೀಪವನುರಿಸದೆ
ಆತ್ಮರತಿಯ ಮಾತುಗಳಲಿ
ಹೃನ್ಮನಗಳ ಅರಳಿಸಿದವನು.

ಹುಣಸೆ ಹಣ್ಣಿನ ಬೇಟೆಯಲಿ
ಅವನ ಆಶೆಯೆಲ್ಲ ತೀರಿದರೂ
ಕಲ್ಲು ಹೊಡೆಯುತ್ತಲೇ ಇದ್ದ
ನನ್ನ ಕಿಸೆ ತುಂಬುವವರೆಗೆ.

ನನ್ನ ದಿಗ್ಭ್ರಮೆಗಳಿಗೆಲ್ಲ
ಖೊಳ್ಳನೆ ನಕ್ಕು, ಸಿಕ್ಕು ಸಿಕ್ಕಾಗಿರುವ
ಕೂದಲಲಿ ಕ್ರೀಮಿನಂತೆ ಹರಡಿ
ಬಾಚಣಿಕೆಗೆ ಸಲೀಸು ಮಾಡಿದವನು.

ಭಾವದ್ವೀಪಗಳ ಮಧ್ಯೆ ಸಮುದ್ರ
ಉನ್ಮಾದದಲಿ ಭೋರ್ಗರೆಯುವಾಗ
ಬೃಹತ್ ಹಡಗನೆಳೆತಂದು
ಹೃದಯಕ್ಕೆ ತಲುಪಿಸಿದವನು.

ಒಡಲಾಳದ ಅಭೀಪ್ಸೆಯಲಿ
ನನ್ನ ಚಹರೆಯೇ ಕಣ್ಮರೆಯಾದಾಗ
ಕ್ಷಿತಿಜದಂಚನ್ನು ವಿಸ್ತರಿಸಿ
ನವರವಿಗೆ ಜನ್ಮ ಕೊಟ್ಟವನು.

ಮಧುಪಾನದ ಉನ್ಮತ್ತ ಮಾತು
ನಗೆಗಡಲಲ್ಲಿ ಮುಳುಗಿರುವಾಗ
ಅರ್ಥವಾಗಲಿಲ್ಲ; ನಶೆ ಏರಿದ್ದು
ಅಲ್ಕೋಹಾಲಿನಿಂದಲ್ಲ ಅವನ
ಮಾತಿನಿಂದ ಎಂದು.
ಇಂದು ಕುಡಿಯಲು ಒಬ್ಬನೇ ಕುಳಿತಾಗ.

..ಪ್ರವೀಣ..

ಕಾಮೆಂಟ್‌ಗಳಿಲ್ಲ: